Showing posts with label ಮಧು ... Show all posts
Showing posts with label ಮಧು ... Show all posts

28 July 2010

ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಮಧುಚಂದ್ರ ಅಭಿಪ್ರಾಯ


:: ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಮಧುಚಂದ್ರ ಅಭಿಪ್ರಾಯ ::

ಇತ್ತೀಚೆಗೆ ಕರ್ನಾಟಕದಲ್ಲಿ "ಗೋಹತ್ಯೆ ನಿಷೇಧ ಕಾಯ್ದೆ" ಒಂದು ಬಗೆಯ ಚರ್ಚೆಗೆ ಆಸ್ಪದ ನೀಡಿದೆ.  ಸ್ಪಂದನ ಅವರ  ಲೇಖನವೂ ಅದರ ಒಂದು ತುಣುಕು. ಗೋಹತ್ಯೆಯ ಬಗ್ಗೆ ನಮ್ಮ ಸಂವಿಧಾನದಲ್ಲಿ ಹೇಳಿರುವ ವಿಚಾರ, ಧಾರ್ಮಿಕ ಹಿನ್ನೆಲೆಯಲ್ಲಿ ಗೋಹತ್ಯೆ ಯಾಕೆ ಕೂಡದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಾ..ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನವು ನಿಮಗೆ ನೀಡಿದೆ. ಆದರೆ ಈ ಬಗ್ಗೆ ನನ್ನ ಕೆಲವು ತಕರಾರುಗಳಿವೆ ಅದನ್ನು ನಾನು ಹೇಳಲು ಇಚ್ಚಿಸುತ್ತೇನೆ :

ಗೋವು,ಗೋಮಾತೆ,ಗೋಸಗಣಿ,ಗೋಮೂತ್ರ ಇವಲ್ಲವೂ ನಮಗೆ ದೇವರ ಸಮಾನ, ಅದರಿಂದ ನಾವು ಬೇಕಾದಷ್ಟು ಅನುಕೂಲವನ್ನು ಪಡೆಯುತ್ತೇವೆ.ಮಾನವೀಯ ಹಿನ್ನೆಲೆಯಲ್ಲಿ  ನೋಡಿದಾಗಲೂ 'ಗೋವನ್ನು ಮಾತ್ರ' ಸಾಯಿಸುವುದನ್ನು ಮಾತ್ರ ನಿಷೇದ ಮಾಡಬೇಕು ಎಂಬಂತೆ ಏಕರೀತಿಯಲ್ಲಿ ವಾದಿಸಿದ್ದಾರೆ. ಆಯ್ತು ಗೋಹತ್ಯೆ ಮಾತ್ರ ನಿಷೇದ ಮಾಡೋಣ ಆದರೆ ನಿಮ್ಮ ದೃಷ್ಢಿಯಲ್ಲಿ ಬೇರೆ ಪ್ರಾಣಿಗಳು ಜೀವಿಗಳಲ್ಲವೇ? ಅವುಗಳಿಗೂ ಜೀವ ಅನ್ನೋದು ಇರುತ್ತದೆಯಲ್ಲವೇ,ಜೀವ ಅಥವಾ ಉಸಿರು ಎನ್ನುವುದು ಗೋವು  ಮತ್ತು ಇತರ ಜೀವಿಗಳಿಗೂ ಅಂದರೆ ಕುರಿ,ಕೋಳಿ ಇನ್ನಿತರ ಬೇರೆ ಬೇರೆಪ್ರಾಣಿಗಳಿಗೆ ಬೇರೆ ಬೇರೆ  ಇದಿಯೇ ಅನ್ನುವುದು ಯೋಚಿಸಬೇಕಾದ ವಿಚಾರ.

 ಬಸವಣ್ಣನವರ "ಧಯೆ ಇರಬೇಕು ಸಕಲ ಪ್ರಾಣಿಗಳಲ್ಲಿ..."ಎಂಬ ವಾಕ್ಯ ಗೋವಿಗೆ ಸ್ವಲ್ಪ ಜಾಸ್ತಿ ಧಯೆ ಇರಲಿ ಅಂತಾ ಏನಾದ್ರೂ ಹೇಳಿದ್ದಾರೆಯೆ? ಹೀಗೆ ಮಾಡಿದರೆ "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ನ" ಅಂದಂತಾಗುವುದಿಲ್ಲವೇ?ಮಾಡುವುದಿದ್ದರೇ ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇದ ಮಾಡಲಿ ಅದೇಗೆ ಬರಿ ಗೋಹತ್ಯೆಯನ್ನು ಮಾತ್ರ ನಿಷೇದ ಮಾಡುತ್ತಾರೆ.ಕೇವಲ ಪುರಾಣಗಳಿಗೆ ಜೋತುಬಿದ್ದು ದೇಶದ 'ಆಹಾರ ಪದ್ದತಿ'ಯನ್ನೇ ಬದಲಿಸಬೇಕು ಎನ್ನುವುದರಲ್ಲಿ ಅರ್ಥವಿದೆಯಾ?

ಸಭೆ ಸಮಾರಂಭಗಳಲ್ಲಿ ನಿಂತು ಗೋವುಗಳ ಬಗ್ಗೆ ಕೇವಲ ಮಾತನಾಡುವವರಿಗೆ,ಎಲ್ಲೋ ಒಂದುಕಡೆ ಗೋವುಗಳ ಹೆಸರೇಳಿಕೊಂಡು ನೂರಿನ್ನೂರು ಹಸುಗಳಿಗೆ ಒಂದು ಮಠ ಕಟ್ಟಿಕೊಂಡು ಹಸುಗಳಿಗೆ ಶೃಂಗಾರ ಮಾಡಿಕೊಂಡು ಅವುಗಳ ಹೆಸರಲ್ಲೇ ಬೇಳೆ ಬೇಯಿಸಿಕೊಂಡು ಬೆಳದುಕೊಂಡಿರುವ ಮಠಾಧೀಶರ ಗೋವಿನ ಕಾಳಜಿ,ಪ್ರೀತಿಗಳು ಹಳ್ಳಿಯಲ್ಲಿ ದಿನನಿತ್ಯ ಅವುಗಳ ಒಡನಾಟದಲ್ಲೆ ಬೆಳೆಯುವ ಗ್ರಾಮೀಣ ಜನರು ಗೋವನ್ನು ಸಾಕುವಾಗ ಪಡುವ ಕಷ್ಟ,ಸುಖ ಅವುಗಳ ಮೇವಿಗೆ ಪರದಾಡುವ ಪರಿಸ್ಥಿತಿ ಎಂತದ್ದು ಎನ್ನುವುದಕ್ಕೆ ನಮ್ಮ ಮನೆಯಲ್ಲೇ ನಡೆದ ಒಂದು ಘಟನೆ ನೆನಪಾಗುತ್ತಿದೆ..ಈಗ್ಗೇ ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಸುಮಾರು 25 ರಾಸು ದನಗಳು ಇದ್ದವು ಒಮ್ಮೆ ಮೇವಿಗಾಗಿ ಬೇರೊಬ್ಬರ ಜಮೀನಿಗೆ ನಮ್ಮ ಒಂದು ಹಸು ಮೇಯಲು ಹೋಗಿತ್ತು ಅದನ್ನು ನೋಡಿದ ಆ ಜಮೀನಿನ ಮಾಲೀಕ ಆ ಹಸುವಿಗೆ ದೊಣ್ಣೆಯಲ್ಲಿ ಬಾರಿಸಿದ ಹೊಡೆದ ರಭಸಕ್ಕೆ ಅದರ ಒಂದು ಮುಂಗಾಲು ಮುರಿದು ಯಾವುದೇ ರಿತಿಯ ಚಿಕಿತ್ಸೆಗೂ ವಾಸಿಯಾಗಲಿಲ್ಲ ಇದನ್ನು ನೋಡಿದ ನಮ್ಮ ತಂದೆ ಹಸುಗಳನ್ನು ಸಾಕುವ ಕಾರ್ಯಕ್ಕೆ ತಿಲಾಂಜಲಿ ಇಟ್ಟರು" ಈ ಸ್ತಿತಿಗೆ ಕಾರಣರಾರು?ಕಾಲು ಮುರಿದ ಹಸುವನ್ನು ಇಟ್ಟುಕೊಂಡು ಏನು ಮಾಡುವುದು? ಅದೂ ಅಲ್ಲದೇ ಹಸುವಿನ ಕಾಲು ಮುರಿದ ಜಮೀನಿನ ಮಾಲೀಕ ಗೋವಿನ ಬಗ್ಗೆ ಗಂಟೆ ಗಟ್ಟಲೆ ಮಾತನಾಡುವ ಒಂದು ಪಕ್ಷದ ಕಾರ್ಯಕರ್ತ ಎಂಬುದು ಒಂದು ಚೋದ್ಯದ ಸಂಗತಿ.ಎಷ್ಟೋಜನ ಮೇವಿನ ಕೊರತೆಯಿಂದ ಜಾನುವಾರು ಗಳನ್ನು ಮಾರುತ್ತಿರುವುದು ಒಂದು ನೋವಿನ ಸಂಗತಿ.ಇದರ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಇರುವ ಗೋಮಾಳಗಳನ್ನೆ ನೆಲಗಳ್ಲರು ನುಂಗಿಹಾಕಿದ್ದಾರೆ.ಗೋವಿನ ಬಗ್ಗೆ ಮಾತನಾಡುವ ಜನರು ಎಷ್ಟು ಜನ ಗೋವನ್ನು ಸಾಕಿದ್ದಾರೆ.ಅಷ್ಟೊಂದು ಇಚ್ಚೆ ಇದ್ದರೇ ಗೋವುಗಳನ್ನು ದತ್ತು ತೆಗೆದುಕೊಂಡು ಸಾಕಲಿ.
ಗೋಹತ್ಯೆ ಬಗ್ಗೆ ಮಾತನಾಡುವಾಗ ವಾಸ್ತವ ಸ್ಥಿತಿಯನ್ನು ತಿಳಿದುಕೋಡು ಮಾತಾನಾಡುವುದು ಒಳಿತು.ವಯಸ್ಸಾದ,ನಿರುಪಯುಕ್ತ ಗೊಡ್ಡು ದನಗಳನ್ನು ಇಟ್ಟುಕೊಂಡು ರೈತರು ಏನು ಮಡುವುದು?ಇಂತಹ ದನಗಳನ್ನು ಕೇವಲ ಸಗಣಿಗೋಸ್ಕರ ಇಟ್ಟುಕೊಂಡರೆ ಅವುಗಳನ್ನು ಜೀವಮಾನವಿಡಿ ಸಾಕಲು  ರೈತರು ಏನು ಮಾಡಬೇಕು? ಇವುಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಈಗಿನ ಸ್ಥಿತಿಯಲ್ಲಿ 1ಕಿಲೊ ಕೋಳಿ ಮಾಂಸ 100ರೂ,ಕುರಿ ಮತ್ತು ಮೇಕೆ ಮಾಂಸ 250ರಿಂದ 300ರೂಗಳು ಗ್ರಾಮೀಣ ಜನರ ಒಂದು ದಿನದ ಕೂಲಿ 60 ರೂಗಳು ,ಇವರು ಪಡೆಯುವ ಕೂಲಿ ಅವತ್ತಿನ ತುತ್ತಿಗೆ ಸಮ.ಇಂಥದ್ದರಲ್ಲಿ ಬಡ ಜನರು ಅಷ್ಟು ಬೆಲೆ ತೆತ್ತು ಬೇರೆ ಮಾಂಸಹಾರವನ್ನು ಸೇವಿಸಲು ಸಾದ್ಯವೇ ಅಥವಾ ಇಂಥಹವರಿಗೆ ಗೋಹತ್ಯೆ ನಿಷೇದ ಮಾಡಿರುವ  ಸರ್ಕಾರ ರಿಯಾಯ್ತಿ ಧರದಲ್ಲಿ ಕುರಿ,ಕೋಳಿ ಮಾಂಸವನ್ನು ಪೂರೈಸುತ್ತದೆಯೇ? ಅಥವಾ ನಾವ್ಯಾಕೆ ಕೊಡಿಸಬೇಕು ಎಂದರೆ ಪರೋಕ್ಷವಾಗಿ ಅವರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ? ಅಖಂಡ ಸ್ವತಂತ್ರ ಭಾರತದಲ್ಲಿ ಮೂಲಭೂತ ಅವಶ್ಯಕವಾದ ಆಹಾರದ ಸ್ವಾತಂತ್ರ್ಯವನ್ನು ಕಸಿದಂತಾಗುವುದಿಲ್ಲವೇ?
ಈಗಿನ ಪರಿಸ್ತಿತಿಯಲ್ಲಿ ಗೋಹತ್ಯೆ ನಿಷೇದ ಮಾಡಿದರೆ ಗೋಮಾಂಸದ ಕೊರತೆಯನ್ನು ಕುರಿ,ಕೋಳಿ ಮಾಂಸಗಳಿಂದ ಜನರಿಗೆ ಬೇಕಾದ ಮಾಂಸವನ್ನು ಒದಗಿಸಬಹುದೆ? ಇದನ್ನೆ ನಂಬಿಕೊಂಡ ಮತ್ತು ಚರ್ಮೋದ್ಯಮವನ್ನೆ ಬದುಕಾಗಿಸಿಕೊಂಡ ಜನರ ಗತಿಯೇನು?
ಒಂದುವೇಳೆ ಗೋವುಗಳನ್ನು ಸಾಯುವವರೆಗೂ ಮನೆಯಲ್ಲಿಟ್ಟುಕೊಂಡರೆ ಅವುಗಳಿಗೆ ಆಹಾರವನ್ನು ಯಾವ ರೀತಿ ಪೂರೈಸುವುದು,ಜನಗಳಿಗೆ ಆಹಾರದ ಕೊರತೆ ಉಂಟಾಗಿರುವಾಗ ಜನರ ಜೊತೆ ಪ್ರಾಣಿಗಳ ಗೋಳನ್ನು ಹೇಗೆ ಸಹಿಸುವುದು.ಇದರಿಂದ ಪರಿಸರದ ಮೇಲೆ ಒಂದು ತರಹದ inbalance   ಉಂಟಾಗುವುದಿಲ್ಲವೇ?
ಆಳುವ ಸರ್ಕಾರ ಗೋಹತ್ಯೆ ನೀಷೇದ ಮಾಡಿರುವುದು ಒಂದು ತರಹ ಸಾರಾಯಿ ನಿಷೇದ ಮಾಡಿರುವ ರೀತಿಯಾಗಿದೆ.ಹೇಗೆಂದರೆ ಸಾರಾಯಿ ನಿಷೇದ "ಸಂಪೂರ್ಣ ಪಾನ ನಿಷೇದ"ವಾಗಲಿಲ್ಲ ಸರ್ಕಾರಕ್ಕೆ ಇಚ್ಚೆಯಿದ್ದಲ್ಲಿ  ಎಲ್ಲಾ ರೀತಿಯ ಮದ್ಯವನ್ನು ನಿಷೇದ ಮಾಡಲಿ ಅದೇ ತರಹ ಸಂಪೂರ್ಣ ಮಾಂಸಹಾರವನ್ನು ನಿಷೇದ ಮಾಡಲಿ.ಅದು ಬಿಟ್ಟು ಕೇವಲ ಗೋಮಾಂಸವನ್ನು ನಿಷೇದ ಮಾಡುವುದಕ್ಕೆ ನನ್ನ ವಿರೋದವಿದೆ.
ಸರಿಯಾಗಿ ಜನರಿಗೆ ರೇಷನ್ ಕಾರ್ಡ್ ಕೊಡದ ಸರ್ಕಾರ ಗೋಹತ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯ ನೀಡುತ್ತಿದಿಯೊ ಗೊತ್ತಿಲ್ಲ.ಸಂವಿದಾನದಲ್ಲಿ ಉಲ್ಲೇಖಿಸಿದ ಗೋವಿನ ಬಗ್ಗೆ ಯೋಚಿಸುವ ಸರ್ಕಾರ ಮತ್ತು ಜನರು ಇನ್ನಿತರ ಅಂಶಗಳಾದ ಸಮಾನತೆ,ಜಾತ್ಯತೀತತೆ,ಅಶ್ಪ್ರಸ್ಯತೆನಿರ್ಮೂಲನೆ  ಬಗ್ಗೆ ಯಾಕೆ ನೈಜ ಕಾಳಜಿ ವಹಿಸುತ್ತಿಲ್ಲ .ಗೋವುಗಳ ಬಗ್ಗೆ ವಿಪರೀತ  ಕಾಳಜಿ ತೋರಿಸುವ ಮಠಾಧೀಶರು ಮೇಲಿನ ಸಮಸ್ಯೆಗಳ ನಿರ್ಮೂಲನೆಗೆ ಎಷ್ಟು ಪ್ರಾಮಾಣಿಕಾವಾಗಿ ಪ್ರಯತ್ನಿಸಿದ್ದಾರೆ. ಅಥವಾ  ಅವರುಗಳ ಲೆಕ್ಕದಲ್ಲಿ ಇವುಗಳೆಲ್ಲಾ ಸಮಸ್ಯೆಗಳೇ  ಅಲ್ಲವೇ?
ಕೆಲವು ರಾಜಕೀಯ ಪಕ್ಷಗಳಿಗೆ 'ಗೋಹತ್ಯೆ ನಿಷೇದ' ಮತ್ತು ರಾಮ ಮಂದಿರ ವಿಷಯಗಳೆ ರಾಜಕೀಯದ ಪ್ರಣಾಳಿಕೆಗಳಾಗಿವೆ ಇವುಗಳ ಮೂಲಕ ಹಿಂದೂ ಮತ ಬ್ಯಾಂಕನ್ನು  ಓಲೈಸುವ ,ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ರಾಜಕೀಯ ಲಾಭ ಪಡೆಯುವ ಒಂದು ಹುನ್ನಾರವಾಗಿದೆ.ಇವು ಸಮಾಜದ ಸ್ವಾಸ್ತ್ಯವನ್ನು ಹದಗೆಡಿಸುತ್ತಿವೆ.  ಸರ್ಕಾರಕ್ಕೆ ಹಾಸಿ ಹೊದ್ದುಕೊಳ್ಲುವಷ್ಟು ಸಮಸ್ಯೆಗಳಿರುವಾಗ ಕೆಲಸಕ್ಕೆ ಬಾರದ ಇಂತಹ ವಿಷಯಗಳ ಗಮನ ಕೊಡುತ್ತಿರುವುದು ಸಮಾಜದ ಶೋಚನೀಯ ಸ್ಥಿತಿ ಎನ್ನದೇ ಬೇರೆ ವಿಧಿಯಿಲ್ಲ..
- ಮಧುಚಂದ್ರ ಬಿ.ಆರ್.
ಕಿರಿಯ ಸಹಾಯಕ, ಒಳಾಡಳಿತ ಇಲಾಖೆ
( madhu.chndr@gmail.com )

27 June 2010

ಲೋಕಾಯುಕ್ತರ ರಾಜೀನಾಮೆ ಪ್ರಕರಣ - ಮಧುಚಂದ್ರ ಅಭಿಪ್ರಾಯ



        

ಯಾಕೋ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಅನಿಸ್ತಿದೆ. ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೇ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳಂತೂ ಒಳಜಗಳ, ನಾಯಕರ ಪ್ರತಿಷ್ಠೆಗಳಲ್ಲಿಯೇ ಕಾಲ ಕಳೆಯುತ್ತಿದ್ದು, ಅಸ್ತಿತ್ವದಲ್ಲಿ ಇವೆಯೇ  ಇಲ್ಲವೇ ಎನ್ನುವುದೇ  ತಿಳಿಯದಾಗಿದೆ... ನಿಜವಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳ ಕೆಲಸ ಮಾಡುತ್ತಿರುವುದು ಮಾಧ್ಯಮಗಳು, ರಾಜ್ಯಪಾಲರು, ಲೋಕಾಯಕ್ತ ಮತ್ತು ಮಾನವ ಹಕ್ಕುಗಳ ಆಯೋಗಗಳು.

        ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇವುಗಳನ್ನೇ ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ. ಒಂದುಕಡೆ ರಾಜ್ಯಪಾಲರು ಸರ್ಕಾರದ ರೀತಿನೀತಿಗಳನ್ನು  ಪ್ರಶ್ನಿಸಿದರೆ ಸಂಪುಟದ ಸದಸ್ಯರು ರಾಜ್ಯಪಾಲರನ್ನೇ ಹೀಯಾಳಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ತಮ್ಮ  ಉದ್ಧಟತನ ಪ್ರದರ್ಶಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಕಾನೂನು ತಜ್ಞರಲ್ಲಿ ನಮ್ಮ ರಾಜ್ಯಪಾಲರೂ ಒಬ್ಬರು. ಅವರ ಸಲಹೆ ಗಳನ್ನು ಸ್ಪರ್ಧಾತ್ಮಕತೆಯಿಂದ ನೋಡದೇ ಪೂರ್ವಗ್ರಹಪೀಡಿತರಾಗಿ ನೋಡಿ ಅವರತ್ತ  ದಿವ್ಯ ನಿರ್ಲ್ಯಕ್ಷ್ಯ ತೋರುತ್ತಿರುವುದು ನಮ್ಮ ಸರ್ಕಾರದ ಸಾಚಾತನವನ್ನೇ ಅನುಮಾನದಿಂದ ನೋಡುವಂತಾಗಿದೆ.

ಇನ್ನು ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಿಗೆ ಅವರ ಅಂಗರಕ್ಷಕರನ್ನೇ ನೇಮಿಸದೇ ಅವರೇ ದೂರು ನೀಡುವಂತ ಪರಿಸ್ಥಿತಿ. ಅವರನ್ನು ಸಹ ಬಹಿರಂಗವಾಗಿ ತೆಗಳುತ್ತ ಮಾನಸಿಕ ಸ್ಥೈರ್ಯವನ್ನೇ ಹುದುಗಿಸುವ ಪ್ರಯತ್ನ ಮಾಡುತ್ತಿದೆ..
 
ಇನ್ನು ಲೋಕಾಯುಕ್ತರ ರಾಜೀನಾಮೆ ರಾಜ್ಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿದೆ...

ಸರ್ಕಾರದ ಅಸಹಕಾರ,  ದಿವ್ಯ ನಿರ್ಲ್ಯಕ್ಷ್ಯ, ನಿಷ್ಕ್ರೀಯತೆ, ಪರಮಾಧಿಕಾರ, ಗಣಿ ವಿಷಯ.... ಇವೆಲ್ಲವೂ ಲೋಕಾಯುಕ್ತರ ರಾಜೀನಾಮೆಗೆ ಕಾರಣವಾಗಿರಬಹುದು. ಆದರೆ  ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆ ರಾಜ್ಯದ ಜನತೆಯಲ್ಲಿ ಭ್ರಮನಿರಸನವನ್ನು ಮೂಡಿಸಿದೆ. ರಾಜೀನಾಮೆ ವಾಪಸ್ಸು ಪಡೆಯುವಂತೆ ಎಲ್ಲಡೆಯಿಂದ ಹೋರಾಟದ ಕೂಗುಗಳು ಕೇಳಿಬರುತ್ತದೆ. ರಾಜ್ಯಪಾಲರಂತೂ ಲೋಕಾಯುಕ್ತರ ರಾಜೀನಾಮೆ ಪ್ರಜಾಪಭುತ್ವ ವ್ಯವಸ್ಥೆಯ ಪ್ರಮುಖ ಸಂಸ್ಥೆಯಂದರ ಅವನತಿಯ ಸೂಚಕವೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಗೃಹ ಸಚಿವರೂ ಲೋಕಾಯುಕ್ತರು ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆಯಲು ಕೇಳಿಕೊಂಡಿರುವುದು ಅವರ ಮೌಲ್ಯವನ್ನು ತೋರಿಸುತ್ತದೆ. ರಾಷ್ಟ್ರ ಕಂಡ ಅತ್ಯುತ್ತಮ ನ್ಯಾಯಾವಾದಿಯಾಗಿ, ರಾಜ್ಯದ ಲೋಕಾಯುಕ್ತಾರಾಗಿ ಅವರ ಕಳಂಕರಹಿತ, ಜನಸ್ನೇಹಿ ಸೇವೆಯು ಜನತೆಯ ಮುಂದಿರುವಾಗ ರಾಜ್ಯದ ಬಿಜಿಪಿ ಮುಖಂಡರು ಅವರ ನಿಷ್ಠೆಯ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಹೇಯಕೃತ್ಯವೆಂದೇ ಹೇಳಬಹುದು..

      ಕೊನೆಯದಾಗಿ ಕರ್ನಾಟಕದ ಹಿತಕ್ಕಾಗಿ, ಭ್ರಷ್ಟರ ನಿರ್ಮೂಲನೆಗೆ, ಶ್ರೀ ಸಂತೋಷ್ ಹೆಗಡೆ ಯವರ ಅವಶ್ಯಕತೆ ತುಂಬಾ ಇದೆ ಆದ್ದರಿಂದ ರಾಜ್ಯದ ಜನತೆಗೋಸ್ಕರವಾಗಿಯಾದರೂ ತಮ್ಮ ನಿಲುವನ್ನು ಬದಲಿಸುವಂತಾಗಲಿ ಹಾಗೂ ಸರ್ಕಾರವು ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವತ್ತ  ಪ್ರಾಮಾಣಿಕವಾಗಿ ಪ್ರಯತ್ನಿಸುವಂತಾಗಲಿ ಎಂದು ಬಯಸೋಣ.... 
- ಮಧು

03 August 2009

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ - ಮಧುಚಂದ್ರ ViewPoint



ಸ್ನೇಹಿತರೆ,

ಇತ್ತೀಚಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಭಾಷೆಯಲ್ಲಿ ಬೋಧನೆ ಮಾಡಬೇಕು ಎಂಬ ಗೊಂದಲ ಹೈಕೋರ್ಟ್ ಮತ್ತು ರಾಜ್ಯಸರ್ಕಾರದ ಮುಸುಕಿನ ಗುದ್ದಾಟದ ನಂತರ ಈಗ ಚೆಂಡು ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿದ್ದಿದೆ ಮತ್ತು ಪೋಷಕರಿಗೆ ಅವರ ಮಕ್ಕಳಿಗೆ ಯಾವ ಮಾದ್ಯಮದಲ್ಲಿ ಕಲಿಸಬೇಕು ಎಂಬ ಬಗ್ಗೆ ಅವರಿಗೆ ಸ್ವಾತಂತ್ರ್ಯ ಕೊಡಿ ಅಂತ ನಿರ್ದೇಶನ ನೀಡಿದೆ .ಆದರು ಕನ್ನಡ ಸಾಹಿತಿಗಳು ಮತ್ತೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೊಧನೆಗೆ ನಿರ್ದೇಶನ ನೀಡಬೇಕೆಂದು ಮತ್ತೆ ಮನವಿ ಸಲ್ಲಿಸಿದ್ದಾರೆ .ಶಿಕ್ಷಣ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸ ಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಗಳನ್ನೂ ಹೇಳಲು ಬಯಸುತ್ತೇನೆ

ವಿಶ್ವದ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆಗಳಲ್ಲಿ ಕನ್ನಡ ಭಾಷೆ ೨೭ನೆ ಸ್ಥಾನ ಪಡೆದಿದೆ .ಭಾರತ ಸಂವಿದಾನದಲ್ಲಿ ಕನ್ನಡ ಅಧಿಕೃತ ಭಾಷೆಯೆಂದು ಮಾನ್ಯತೆ ಪಡೆದಿದೆ .ಇತ್ತೀಚಿಗೆ ಶಾಸ್ತ್ರಿಯ ಸ್ಥಾನಮಾನವು ದೊರಕಿದೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿದೆ .ಆದರು ಸಹ ಒಂದು ಅಂದಾಜಿನ ಪ್ರಕಾರ ಬಹುಬೇಗ ನಶಿಸಿ ಹೊಗುತ್ತಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದೆ .ಇದೆ ವೇಗದಲ್ಲಿ ಇದು ಮುಂದುವರೆದರೆ ಇನ್ನು ೫೦ ವರ್ಷಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯ ಪಡಲಾಗಿದೆ ....ಸುಮಾರು ೨೦೦೦ ಸಾವಿರ ವರ್ಷಗಳ ಇತಿಹಾಸವಿರುವ ಒಂದು ಭಾಷೆಗೆ ಈ ಸ್ಥಿತಿ ಬರಲು ಕಾರಣವೇನೆಂದು ಕೆದಕುತ್ತ ಹೋದರೆ ನಮ್ಮೆಲ್ಲರ ನಿರ್ಲಕ್ಷ್ಯತೆ ಕಂಡುಬರುತ್ತದೆ . ಒಂದು ಕಡೆ ನಮ್ಮ ಭಾಷೆಗೆ ಒದಗಿರುವ ಈ ಸ್ಥಿತಿಗೆ ಮರುಗಿದರೆ ಇನ್ನೊದು ಕಡೆ ವಾಸ್ತವದಲ್ಲಿ ಇದು ಅನಿವಾರ್ಯವೇನೋ ಎಂಬ ಸ್ಥಿತಿಯಲ್ಲಿ ಈಗ ನಾವಿದ್ದೇವೆ ....
ಒಬ್ಬ ಗ್ರಾಮೀಣ ಕನ್ನಡ ಮದ್ಯಮದಿಂದ ಬಂದ ನನ್ನಂಥ ಹಲವರು ಅಭ್ಯರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದಿದ್ದೆ ತಪ್ಪಾಯ್ತೇನೋ ಎಂದು ಬಹಳ ಸಾರಿ ಅನ್ನಿಸಿದೆ .ಯಾಕೆಂದರೆ ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಶಿಕ್ಷಕರು ಒಂದು ಸಾರಿ ಇಂಗ್ಲಿಷ್ ಪಠ್ಯ ಓದಿ ಯಾವುದೊ ಗೈಡ್ ನೋಡಿಕೊಂಡು ಒಮ್ಮೆಲೇ ಭಾವಾರ್ಥ ಓದಿ ಹೇಳಿ ಪಾಠ ಮುಗಿಸುತ್ತಿದ್ದರು .ಇಂಗ್ಲಿಷಿನ ಮುಲಪದಗಳನ್ನು ಪದಗಳನ್ನು ಕಲಿಯುವುದಕ್ಕೆ ಕಾಲೇಜಿನ ಮೆಟ್ಟಿಲೇರಬೇಕಾಯಿತು ..ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿ ಗೆ ಬಂದು ವಿಜ್ಞಾನ ವಿಷಯವನ್ನು ಅಇಚ್ಚಿಕ ವಾಗಿ ತೆಗೆದುಕೊಂಡರೆ ಒಮ್ಮೆಲೇ ಕುದಿಯುವ ಬಾಣಲೆಗೆ ಬಿದ್ದಂಥ ಅನುಭವವಾಗುತ್ತದೆ ...
ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಬರಿಯ ಕನ್ನಡ ಭಾಷೆ ಒಂದು ಗೊತ್ತಿದ್ದರೆ ಬಾಳುವೆ ಮಾಡಲು ಸಾದ್ಯವಿಲ್ಲ ..ಅದು ಅಲ್ಲದೆ ಉದ್ಯೋಗವಕಶವು ಕಡಿಮೆ ..ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ಒಂದು ರೀತಿಯ ಕೀಳರಿಮೆ ಬಂದುಬಿಡುತ್ತದೆ ...ಆಶ್ಚರ್ಯವೆಂದರೆ ಇಂದಿನ ಸ್ಥಿತಿಯಲ್ಲಿ ಯಾವ ಸ್ವಾಭಿಮಾನಿ ಕನ್ನಡಿಗನು ಕನ್ನಡ ಮಾದ್ಯಮದಲ್ಲಿ ಓಡಿಸಲು ದೈರ್ಯ ಮಾಡಲಾರ ..ಎಂಥಹ ಬಡವನಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾದ್ಯಮದಲ್ಲಿ ಓದಿಸಲು ಪ್ರಯತ್ನಿಸುತ್ತಾನೆ ...
ಈ ನಾಡಿನ ಹಲವು ಕನ್ನಡಪರ ಹೋರಾಟಗಾರರು ,ಸಾಹಿತಿಗಳು ,ರಾಜಕಾರಣಿಗಳು ಕನ್ನಡದ ಉಳಿವಿನ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬಿಗಿಯುತ್ತಾರೆ ಆದರೆ ಅವರಲ್ಲಿ ಎಷ್ಟುಜನ ತಮ್ಮ ಮಕ್ಕಳನ್ನು ಸರ್ಕಾರೀ ಶಾಲೆಯ ಕನ್ನಡ ಮಾದ್ಯಮದಲ್ಲಿ ಓದಿಸುತ್ತಿದ್ದಾರೆ? ಎಲ್ಲ ಉಳ್ಳವರು ,ಉತ್ತಮ ಇಂಗ್ಲಿಷ್ ಮಾದ್ಯಮದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದಾರೆ ಆದರೆ ಕನ್ನಡ ಮಾದ್ಯಮದಲ್ಲಿ ಓದಿದ ವಿಧ್ಯಾರ್ಥಿಗಳು ಡಿಗ್ರಿ, ಡಬಲ್ ಡಿಗ್ರಿ ಓದಿದ್ದರು ಇಂಗ್ಲಿಷ್ ಭಾಷಾ ಮಾದ್ಯಮದ ಕೊರತೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾರೆ.ಕೇವಲ ಗುಮಾಸ್ತ ಹುದ್ದೆಗೆ ಲಾಯಕ್ಕೆನೋ ಎಂಬಂಥ ವಾತಾವರಣ ಸೃಷ್ಟಿಸಲಾಗಿದೆ ...
ಕೇವಲ ಬಡವರು ಮತ್ತು ಸರ್ಕಾರೀ ಶಾಲೆಯಲ್ಲಿ ಓದುವವರು ಮಾತ್ರ ಯಾಕೆ ಕನ್ನಡ ಮಾದ್ಯಮದಲ್ಲಿ ಓದಬೇಕು?ನಮ್ಮ ಆಳುವ ವರ್ಗ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು "ನೀನು ಹೊಡೆದ ಹಾಗೆ ನಟಿಸು, ನಾನು ಅತ್ತ ಹಾಗೆ ನಟಿಸುತ್ತೇನೆ " ಎಂಬಂತೆ ವರ್ತಿಸುತ್ತಿವೆ ..ಇಂದಿನ ವ್ಯವಸ್ಥೆಯಲ್ಲಿ ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಸುವ ಬದ್ದತೆಯನ್ನು ಶಿಕ್ಷಣ ಸಂಸ್ಥೆಗಳು ಪ್ರದರ್ಶಿಸಬೇಕಿದೆ ,ಅದೇ ರೀತಿ ಸರ್ಕಾರಗಳು ಕನ್ನಡವನ್ನು ಎಲ್ಲ ರಂಗಗಳಲ್ಲೂ ಅಳವಡಿಸಿ ಕನ್ನಡ ಕಲಿತವರಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ .ಯುರೋಪಿನ ಹಲವಾರು ದೇಶಗಳು ತಮ್ಮ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಅದು ನಮ್ಮಲ್ಲೇಕೆ ಸಾದ್ಯವಿಲ್ಲ ಎನಿಸುತ್ತದೆ. ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡನ್ನು ಉತ್ತಮವಾಗಿ ಕಲಿಸಬೇಕಿದೆ ...ಇಲ್ಲವಾದರೆ ನಾವೆಷ್ಟೇ ಕನ್ನಡದ ಬಗ್ಗೆ ಅನುಕಂಪ ತೋರಿಸಿದರು ಅದು ಕೇವಲ ತೋರಿಕೆ ಎನಿಸುತ್ತದೆ,ಏಕೆಂದರೆ ಇಂದು ಕನ್ನಡವನ್ನು ಉಳಿಸಬೇಕಾದರೆ ಕನ್ನಡವನ್ನು ಅನ್ನವನ್ನು ದೊರಕಿಸಿಕೊಡುವ ಭಾಷೆಯನ್ನಾಗಿ ಮಾಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಇದೆ.
ಭಾಷೆ ಮತ್ತು ಅನ್ನ ಇವೆರಡನ್ನೂ ಒಂದು ಕಡೆ ಇಟ್ಟಾಗ ಮನುಷ್ಯ ಮೊದಲು ಅನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಏಕೆಂದರೆ ಹಸಿವು ಭಾಷೆಗಿಂತ ಮುಖ್ಯ .ತನ್ನ ಹಸಿವು ನೀಗಿಸಿಕೊಳ್ಳಲು ಯಾವ ಭಾಷೆ ಅನುಕೂಲ ಮಾಡಿಕೊದುತ್ತದೋ ಆ ಭಾಷೆಯನ್ನು ಆತ ಆಯ್ಕೆ ಮಾಡುತ್ತಾನೆ . ರಾಷ್ಟ್ರ ಮಟ್ಟದಲ್ಲಿ "ಏಕರೂಪ ನಾಗರೀಕ ಸಂಹಿತೆ "ಒತ್ತಾಯಿಸುತ್ತಿರುವ ರಾಷ್ಟ್ರೀಯ ಪಕ್ಷಗಳು "ಏಕರೂಪ ಶಿಕ್ಷಣ ನೀತಿ"ಯನ್ನು ಯಾಕೆ ಒತ್ತಾಯಿಸುತ್ತಿಲ್ಲ .ಈ ಬಗ್ಗೆ ಎಲ್ಲರು ಚಿಂತಿಸಬೇಕಾದ ಅಗತ್ಯ ಇದೆ ...ಶಿಕ್ಷಣ ರಾಷ್ಟ್ರೀಕರಣವಾಗಲಿ ..ಕೇಂದ್ರ ಸರ್ಕಾರ ಇದರ ಬಗ್ಗೆ ಚಿಂತಿಸಲಿ ಮತ್ತು ಅಗತ್ಯ ಕಾನೂನು ರೂಪಿಸಲಿ..."ಎಲ್ಲರಿಗು ಸಮಬಾಳು ,ಸಮಪಾಲು"ದೊರಕಲು ಅವಕಾಶ ದೊರಕಿಸಲು ಆಳುವ ವರ್ಗಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ.... ನೀವೇನ್ ಹೇಳ್ತಿರ ?


ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago