ಸ್ನೇಹಿತರೆಲ್ಲರ ಊಟದ ತರುವಾಯ ಸರಿಸುಮಾರು 2:30 ಕ್ಕೆ ಸ್ನೇಹಕೂಟದ ಎರಡನೇ ಘಟ್ಟ 'ಸಭಾ ಕಾರ್ಯಕ್ರಮ' ಶುರುವಾಯಿತು. ಇಲ್ಲಿ ಸಭಾ ಕಾರ್ಯಕ್ರಮ ಎನ್ನುವುದು ತುಂಬಾ ಹಿರಿದಾಯಿತೋ ಏನೋ, ಆಸಕ್ತರಿಂದ ಅಭಿಪ್ರಾಯ ಪಡೆಯುವ ಒಂದು ಪುಟ್ಟ ವೇದಿಕೆ ಕಾರ್ಯಕ್ರಮ ಶ್ರೀಮತಿ ಶ್ರೀವಾಣಿಯವರ ಕಂಠಸಿರಿಯ ಗಾನವಾಣಿಯೊಂದಿಗೆ ಪ್ರಾರಂಭವಾಯಿತು. ನಿರೂಪಣೆಯ ಹೊಣೆ ಹೊತ್ತುಕೊಂಡಿದ್ದ ರೇವಪ್ಪ, ಮಾತನಾಡ ಬಯಸುವವರ ಪಟ್ಟಿಯನ್ನು ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದರಿಂದ 'ನೀ ಹೇಳು, ನೀ ಹೇಳು' ಎಂದು ಒತ್ತಾಯಪಡಿಸಿ ಅಭಿಪ್ರಾಯ ಹೇಳಿಸಬೇಕಾದ ಗೋಜಲು ಇರಲಿಲ್ಲ.
ನಿರೂಪಕರ ಅಣತಿಯಂತೆ ಎರಡು ಮಾತನಾಡಲು ಮೊದಲು ಬಂದವರು ವಿಜಯ ಕುಮಾರ್. "ಅನ್ನದಾತ ಸುಖೀಭವಃ" ಎಂದು ಅನ್ನದಾತರನ್ನು ನೆನೆದು, 'ಹೊಟ್ಟೆಗೆ ಸವಿಯೂಟ ಸೇರಿ, ರಾಸಾಯನಿಕ ಕ್ರಿಯೆಗಳ ಪರಿಣಾಮದಿಂದ ಮನಸ್ಸಿಗೆ ನಿದ್ರೆ ತರಿಸುತ್ತಿರುವ ಈ ಸಂದರ್ಭದಲ್ಲಿ ನನ್ನ ಭಾಷಣ, ಭೂಷಣವಲ್ಲ' ಎಂದು ಅಳುಕುತ್ತಲೇ ಮಾತು ಆರಂಭಿಸಿದ ವಿಜಯಕುಮಾರ್ ಹೇಳಬೇಕೆಂದಿದ್ದನ್ನು ಅಚ್ಚುಕಟ್ಟಾಗಿ ಹೇಳತೊಡಗಿದರು. ಕಿರಿಯ ಸಹಾಯಕರ ತಂಡದ ಒಗ್ಗಟ್ಟಿನ ಬಗ್ಗೆ ಒತ್ತಿ ಹೇಳಿದ ವಿಜಯಕುಮಾರ್ ಈ ಒಗ್ಗಟ್ಟು ನಿರಂತರವಾಗಿರಬೇಕಾದರೆ ಒಬ್ಬನೇ ನಾಯಕನಿಂದ ಸಾಧ್ಯವಿಲ್ಲ. ಹಾಗೆಯೇ ಪ್ರತಿಯೊಬ್ಬರೂ ನಾಯಕರಾಗುವುದರಿಂದಲೂ ಸಾಧ್ಯವಿಲ್ಲ. ಆದುದರಿಂದ ಇಲಾಖೆಗೊಬ್ಬರಂತೆ ಮುಂದಾಳುಗಳನ್ನು ನೇಮಿಸುವ ಅಗತ್ಯತೆ ಇದೆ ಎಂದರು. ಕಿರಿಯ ಸಹಾಯಕರ ಈ ಸ್ನೇಹ ಕೂಟಕ್ಕೆ 'ಜೇನು ಮನೆ' ಎಂದು ನಾಮಕರಣ ಮಾಡುವ ಸಲಹೆಯನ್ನಿತ್ತರು. ಕೇವಲ ಊಟಕ್ಕೋಸ್ಕರ ಒಗ್ಗಟ್ಟಾಗಿರುವುದರಲ್ಲಿ ಅರ್ಥವಿಲ್ಲ ಈ ಊಟಕ್ಕೂ ಮೀರಿದ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ಜೇನ್ನೊಣಗಳಂತೆ ನಾವು ತೊಡಗಿಕೊಂಡು ಸಚಿವಾಲಯದಲ್ಲೇ ಈ ತಂಡ ಒಂದು ಉತ್ತಮ ಹೆಸರನ್ನು ಗಳಿಸಿ ಮಿಂಚುವಂತಾಗಬೇಕು ಎಂದು ಆಶಿಸಿದರು.
ನಂತರ ನೂರ್ ಹಾಜಿರಾ ರವರು ಮಾತನಾಡಿ ವಿಜಯಕುಮಾರ್ ರವರ ಮಾತುಗಳನ್ನು ಅನುಮೋದಿಸಿದರು. ನಮ್ಮ ಒಗ್ಗಟ್ಟಿನ ಬಗೆಗೆ ಸಂತಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮುನಿರಾಜು ರವರು ಪರಿಚಯಸ್ತ ಕಿರಿಯ ಸಹಾಯಕರಿಂದಲೇ ಈ ಮೊದಲು ಅವರಿಗಾದ ಕಹಿ-ಸಿಹಿ ಅನುಭವಗಳನ್ನು ಹಂಚಿಕೊಂಡರು. ಮುಂದೆ ಈ ರೀತಿಯ ಕಹಿ ಅನುಭವಗಳಿಗೆ ಆಸ್ಪದವಾಗದಂತೆ ನಮ್ಮೆಲ್ಲ ಮಿತ್ರರು ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ಕೋರಿದರು.
ನಂತರ ಹರೀಶ್ ರವರು ಮಾತನಾಡಿ, ಸಚಿವಾಲಯದಲ್ಲಿ ಅಸ್ತಿತ್ವದಲ್ಲಿರುವ ಭಾಷಾಂತರಕಾರರ ಹುದ್ದೆಗಳಿಗೆ ಗ್ರೂಪ್-ಸಿ ವರ್ಗದ ಅರ್ಹ ನೌಕರರನ್ನೇ ಭರ್ತಿಮಾಡಬೇಕು ಎಂಬ ಬಗ್ಗೆ ಹೋರಾಟ ನಡೆಯುತ್ತಲಿದ್ದು ಮುಂದಿನ ದಿನಗಳಲ್ಲಿ ನಮ್ಮ ತಂಡದ ಕಿರಿಯ ಸಹಾಯಕರು ಇಂತಹ ಸೇವಾ ವಿಷಯಗಳ ವಿಚಾರವಾಗಿ ನಡೆಯುವ ಹೊರಾಟಗಳಿಗೆ ಸಂಪೂರ್ಣ ಸಹಕಾರವನ್ನು ನೀಡಲು ಅಣಿಯಾಗಬೇಕು ಎಂದರು.
ಕಾರ್ಯಕ್ರಮದ ಅಂತ್ಯದಲ್ಲಿ ಇತ್ತೀಚೆಗೆ ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿರಿಸಿದ ಮಿತ್ರರಾದ ದತ್ತರಾಜ್ ಮಠದ್ ಹಾಗೂ ಪ್ರಕಾಶ್.ಎನ್. ಇವರಿಗೆ ಸ್ನೇಹ ಕೂಟದ ಪರವಾಗಿ ಶೀತಲ್ ಕುಮಾರ್ ಹಾಗೂ ಯಶವಂತ್ ರವರು ಕಿರುಕಾಣಿಕೆಗಳನ್ನು ನೀಡಿ ಗೌರವಿಸಿದರು.
ಸರಿಯಾಗಿ 3:00 ಗಂಟೆಯ ವೇಳೆಗೆ ನಮ್ಮ ಸ್ನೇಹಕೂಟದ ಎರಡನೇ ಘಟ್ಟವೂ ಸಮಾಪ್ತಿಗೊಂಡಿತು.
ಈ ಬಾರಿ ವಿಶೇಷವಾಗಿ ನಮ್ಮೊಂದಿಗೆ 2007 ರಲ್ಲಿ ಕಿರಿಯ ಸಹಾಯಕರಾಗಿ ಆಯ್ಕೆಯಾಗಿದ್ದು ತರುವಾಯ ಪಿ.ಡಿ.ಓ. ಆಗಿ ನೇರನೇಮಕ ಗೊಂಡು ಪ್ರಸ್ತುತ ಕೋಲಾರದಲ್ಲಿ ಪಿ.ಡಿ.ಓ. ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಬು ಶೇಷಾದ್ರಿ ಯವರು ಆಗಮಿಸಿದ್ದರು.
ಈ ಬಾರಿಯ ಸ್ನೇಹ ಕೂಟದ ಉಸ್ತುವಾರಿಯನ್ನು ಶಿವಕುಮಾರ್, ವೇಣುಗೋಪಾಲ್, ಪರಶುರಾಮ.ಕೆ., ಮಧುಚಂದ್ರ.ಬಿ.ಆರ್, ಫಿರೋಜ್ ಷಾ ಸೋಮನಕಟ್ಟೆ, ವಿಠ್ಠಲ ಮಾಲಿಕಗೊಂಡ, ಹೇಮಂತ್ ಕುಮಾರ್, ಗುರುರಾಜ ಎಸ್.ಆರ್., ದತ್ತರಾಜ ಮಠದ್, ರಾಮಗಣಪತಿ ಭಟ್, ಪ್ರಕಾಶ್ ಎನ್. ಹಾಗೂ ಫಣಿರಾಜಕುಮಾರ್ ಯು.ಎಲ್.ಎನ್. ಮೊದಲಾದ 12 ಮಂದಿ ಸ್ನೇಹಿತರು ವಹಿಸಿಕೊಂಡಿದ್ದರು.
ಇನ್ನು ಮುಂದಿನ ಬಾರಿಯಿಂದ ತಲಾ ಇಪ್ಪತ್ತಿಪ್ಪತ್ತು ಮಂದಿ ಸಂಭ್ರಮದ ದಿನದ ಜವಾಬ್ದಾರಿಯನ್ನು ವಹಿಸಿಕೊಂಡು ನಮ್ಮ ಸೇವೆಯಾಧ್ಯಂತ ಹೀಗೇ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಲಾಯಿತು.
ಅಂದಹಾಗೆ ನಮ್ಮ ತಂಡದಲ್ಲಿನ ಸ್ನೇಹಿತರು ಹಾಗೂ ಈ ಬಾರಿ ಪಾಲ್ಗೊಂಡು ಸ್ನೇಹ ಕೂಟಕ್ಕೆ ಕಳೆತಂದವರ ಸಂಖ್ಯಾ ವಿವರ ಹೀಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾದ 139 ಜನರಲ್ಲಿ
118 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು.
--
ತದನಂತರದಲ್ಲಿ 31 ಜನ ಬೇರೆ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದಾರೆ.
--
02 ಜನ ವಯಸ್ಸಲ್ಲದ ವಯಸ್ಸಲ್ಲಿ ಇಹಲೋಕ ತ್ಯಜಿಸಿದ್ದಾರೆ.
--
ಈಗ 139+12(ಹೆಚ್ಚುವರಿ ಆಯ್ಕೆ ಪಟ್ಟಿ) ಜನ ಕಿರಿಯ ಸಹಾಯಕರಾಗಿ ಆಯ್ಕೆಯಾಗಿ ಬಂದ ನಾವುಗಳು
ಇದೀಗ 10.01.2013ರಲ್ಲಿದ್ದಂತೆ 86 ಜನ ಕಿರಿಯ ಸಹಾಯಕರಾಗಿ ಉಳಿದುಕೊಂಡಿದೀವಿ.
(86 ಜನರ ಪೈಕಿ 54 ಜನ ಸಹಾಯಕರಾಗಿ ಮುಂಬಡ್ತಿ ಪಡೆದಿದ್ದು 22+9=31 ಜನರಿಗೆ ಇನ್ನೇನು ಬಡ್ತಿ ಸಿಗಲಿದೆ.)
--
ಇಂತಿಪ್ಪ 86 ಜನ ಕಿರಿಯ ಸಹಾಯಕರುಗಳ ಪೈಕಿ ನಿನ್ನೆ ಹಾಜರಾಗಿದ್ದು 70 ಜನ.
ಜೊತೆಗೆ
ಬೇರೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದ 07 ಜನ ನಮ್ಮ ಸಂಗಡ ನಿನ್ನೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಹೀಗಾಗಿ 10.01.2013 ರ ಸಂಭ್ರಮಕ್ಕೆ ಭರ್ತಿ 77 ಜನ ಸಾಕ್ಷಿಯಾದಂತಾಯ್ತು.
-ರೇಣುಕಾತನಯ
ಸಂಖ್ಯಾವಿವರ: ರೇವಪ್ಪ
1 comment:
ಉತ್ತಮ ಪದ ನಿರೂಪಣೆ ಪರಶುರಾಂ.
Post a Comment