( ನಿಮ್ಮ ಸಲಹೆಗಳಿಗೆ ನಾನು ಆಭಾರಿ...... )
ಮುಂದುವರಿದ ಭಾಗ...........
ರೈಲು ಪ್ರಯಾಣವೆಂದರೆ ಹುಡುಗಾಟದ ಮನಸ್ಸಿಗೆ ಒಂದು ರೀತಿಯ ಆನಂದ. ಪ್ರಯಾಣದ ಮಧ್ಯದಲ್ಲಿ ಬರುವ ತಿಂಡಿ-ತಿನಿಸುಗಳು ನಾಲಿಗೆಯ ರುಚಿಯನ್ನು ತಣಿಸುತ್ತವೆ. ಆ ಯುವತಿಯ ಅಕ್ಕ ಮತ್ತು ಸ್ನೇಹಿತೆ ಒಂದೊಂದು ಅಡಿಕೆ ಚೀಟು ಹಾಕಿಕೊಂಡರು. ಯುವತಿ ತನ್ನಲ್ಲಿದ್ದ ಅಡಿಕೆ ಚೀಟಿನಲ್ಲಿ ಆತನಿಗೆ " ತಗೊಳ್ಳಿ " ಎಂದಳು. ಆತ ಸಂಕೊಚಭರಿತನಾಗಿ "ಬೇಡ"ವೆಂದರೂ ಆಕೆ ಬಲವಂತದಿಂದ ಕೊಟ್ಟಳು. ಇವರಿಬ್ಬರಲ್ಲಿ ತಾವು ಬೇರೆ-ಬೇರೆಯಲ್ಲ ಎಂಬ ಉತ್ಕಟ ಭಾವ ನೆಲೆಯುರಿತ್ತು.
ಆತನ ಎದುರಿಗೆ ಕೂತಿದ್ದ ಮನು 'ವಿಜಯ ಕರ್ನಾಟಕ' ದಿನಪತ್ರಿಕೆ ಓದುತ್ತಾ ಗೊತ್ತಾಗದ ರೀತಿಯಲ್ಲಿ ಇವರಿಬ್ಬರ ಚಟುವಟಿಕೆಗಳನ್ನು ಹಾಸ್ಯಭಾರಿತನಾಗಿ ಗಮನಿಸುತ್ತಿದ್ದವನು, ತನ್ನ ಸ್ನೇಹಿತನಿಗೆ ತೊಂದರೆ ಕೊಡಲಿಲ್ಲ. ಇವರಿಬ್ಬರೂ ತುಂಬಾ ಆತ್ಮೀಯರಂತೆ ವರ್ತಿಸುತ್ತಿದ್ದರೂ ಆತ ಯುವತಿಯ ಹೆಸರನ್ನು ಕೇಳಿರಲಿಲ್ಲ.
ಆಗ "ಇಲ್ಲೀವರ್ಗು ನಿನ್ ಹೆಸರೆ ಹೇಳ್ಲಿಲ್ಲ" ಎಂದ. ಆ ಯುವತಿ "ಭಾರತಿ" ಎಂದಳು. ಭಾರತಿ ಆತನ ಹೆಸರನ್ನು ಕೇಳಲಿಲ್ಲ.ಮೊದಲೇ ತನ್ನ ಕುಟುಂಬದೊಂದಿಗೆ ಆತ ಮಾತಾಡುವಾಗ ಆತನ ಹೆಸರನ್ನು ತಿಳಿದಿದ್ದಳು. ಇವರ ಆತ್ಮೀಯತೆಯ ಬೆಸುಗೆ ಮುಂದುವರೆದಿತ್ತು.
"ನಿಮ್ ಊರಲ್ಲಿ ಮರಾಠಿ ಮಾತಾಡೋರ್ ಜಾಸ್ತಿ ಅಲ್ವ, ನೀನ್ ಕೂಡ ಮಾತಾಡ್ತಿಯ?."
"ಹ್ಞೂ, ನಮ್ ಸುತ್ತೆಲ್ಲ ಇರೋರ್ ಮರಾಠಿ ಮಾತಾಡ್ತಾರೆ. ನಂಗೂ ಮಾತಾಡೋಕೆ ಬರುತ್ತೆ."
"ನಿಮ್ ಉತ್ತರ ಕರ್ಣಾಟಕದ ಭಾಷೇನೆ ವಿಚಿತ್ರವಾಗೈತೆ. ಎಲ್ಲ ಭಾಷೇನೂ ಸೇರ್ಸಿ ಮಾತಾಡ್ತಾರೆ. ಒಂದ್ ಸಾರಿ ನಾನು & ನನ್ ಫ್ರೆಂಡು ಧಾರವಾಡದಗಿರೋ ಮಾರ್ಕೆಟ್ಗೆ ತರಕಾರಿ ತರೋಕೆ ಅಂತ ಹೋಗಿದ್ವಿ. ಅದು ಪಸ್ಟ್ ಟೈಮ್ ಹೋಗಿದ್ದು. ಅಲ್ಲಿ ತರಕಾರಿ ಹೆಂಗೆ ಅಂತ ಕೇಳಿದ್ರೆ 'ಪೂಣೆ ಕಿಲೋ, ಪಾವ್ ಕಿಲೋ ದೀಡ್ ರೂಪಾಯಿ, ಅದಾ ಕಿಲೋ' ಅಂತೆಲ್ಲ ಹೇಳಾಕ್ ಶುರುಮಾಡಿದ್ರು, ನಮಗೇನು ಗೊತ್ತಾಗದೆ ವಾಪಸ್ ಬಂದ್ಬಿತ್ವಿ."
" ಬಾಳ ತಮಾಸೆಯಾಗೈತೆ. ಹಿಂದಾಗಡಿಂದ ಕಾಯ್-ಪಲ್ಲೆ ತಾರಾಕ್ ಹೋಗ್ಲಿಲ್ರಿ?"
"ಆಮೇಲೆ ಅಲ್ಲಿಯವ್ನೇ ಆದ ಇನ್ನೊಬ್ಬ ಫ್ರೆಂಡ್ ಕರ್ಕೊಂಡ್ ಹೋದ್ವಿ"
"ನಮ್ ಚಿಗವ್ವನ್ ಊರ್ ದಾವಣಗೆರೆಗೆ ಆಗಾಗ್ ಹೋಗಿದ್ರಿಂದ ನಾನೂ ದಾವಣಗೆರೆ ಮಾತ್ ಕಲ್ತಿದೀನಿ. ನಮಗೂ ಬರುತ್ತೆ ಮಾತಾಡೋಕೆ"
"ನಮ್ ದಾವಣಗೆರೆ ಭಾಷೆ ಪ್ಯೂರ್ ಕನ್ನಡ. ನಾಮ್ ದಕ್ಷಿಣ್ ಕರ್ನಾಟಕದಲ್ಲೇ ಸ್ವಚ್ಛ ಭಾಷೆ ಇರೋದು."
ಹೀಗೆ ಮುಂದುವರಿದಿರುವಾಗಲೇ ಮಧ್ಯದಲ್ಲಿ ಬರುತ್ತಿದ್ದ ಚಕ್ಕಲಿ, ಕರಿದ ಸೆಂಗಾ ವನ್ನು ಭಾರತಿಯ ಚಿಕ್ಕಮ್ಮ ಅವರೆಲ್ಲರಿಗೂ ಕೊಡಿಸಿದರು. ಅವುಗಳನ್ನು ಭಾರತಿ ತಾನು ತಿನ್ನದೇ ಎಲ್ಲವನ್ನು ಆತನಿಗೆ ಬಲವಂತವಾಗಿ ಕೊಟ್ಟಳು. ಭಾರತಿಯಲ್ಲಿ ಆತನು ಗಾಢವಾದ ಒಂದು ಸ್ಥಾನವನ್ನು ಪಡೆದುಕೊಂಡಿದ್ದ.
ಆತ " ನೀನೂ ತಗೋ " ಎಂದು ಕೊಡಲು ಹೋದಾಗ ಆಕೆ "ನೀವೇ ತಿನ್ನಿ" ಎಂದಳು.
ಅಷ್ಟರಲ್ಲಿ ಆತನ ಇನ್ನೊಬ್ಬ ಸ್ನೇಹಿತ ರವಿ ಬಂದು ಮನು ಜೊತೆಗೆ ಕುಳಿತಿದ್ದ. ರವಿ ದಾವಣಗೆರೆಗೆ ಹೊರಟಿದ್ದವನು ಅಚಾನಕ್ಕಾಗಿ ರೈಲಿನಲ್ಲಿ ಸಿಕ್ಕಿದ್ದ. ಆತನಿಗೆ ಭಾರತಿ ತಿನಿಸುಗಳನ್ನು ಕೊಟ್ಟಾಗ ಮನು & ರವಿಗೆ ಸ್ವಲ್ಪ ಕೊಡಲು ಹೋದ. ಅದಕ್ಕವರು 'ಕೊಟ್ಟಿರೋದ್ ನಮಗಲ್ಲಪ್ಪ ನಿಂಗೆ ತಿನ್ನು-ತಿನ್ನು" ಎಂದು ಗೇಲಿ ಮಾಡಿದರು. ಆತ ಅವರೊಂದಿಗೆ ಹೆಚ್ಚು ಮಾತು ಮನ್ದುವರಿಸಲಿಲ್ಲ.
ಭಾರತಿಯಲ್ಲಿ ಆತನ ಮೇಲೆ ಯಾವ ರೀತಿಯ ಸ್ವಾರ್ಥತೆ ಮುಡಿತ್ತೆಂದರೆ ತನ್ನ ಚಿಕ್ಕಮ್ಮನ ಮಗನ ಹತ್ತಿರವಿದ್ದ ಒಂದು ಚಾಕೊಲೇಟನ್ನು ಉಪಾಯವಾಗಿ ತೆಗೆದುಕೊಂಡು ಆತನಿಗೆ ಕೊಟ್ಟಳು. ಭಾರತಿಯ ಆತ್ಮೀಯತೆ ಹೆಚ್ಚುತ್ತಿತ್ತು.
ಆಕೆಯ ಮನದಲ್ಲಿ ಯಾವ-ಯಾವ ಆಲೋಚನೆಗಳು ಏಳುತ್ತಿದ್ದವೋ, ಆತನ ವರ್ತನೆ ಹೇಗೆ ಅವಳಿಗೆ ಅನ್ನಿಸುತ್ತಿತ್ತೋ ಬಹುಶ; ಇವರ ಎದುರಿಗೆ ಕೂತು ಇವರನ್ನು ಆಗಾಗ ಛೇಡಿಸುತ್ತಿದ್ದ ಮನು ಮತ್ತು ರವಿಗೆ ತಿಳಿಯುತ್ತಿತ್ತೋ ಏನೋ? ಯಾಕೋ, ಏನೋ, ಆತನ ಮನಸ್ಸಿನಲ್ಲಿ ಯಾವ ಭಾವನೆ ಮುಡಿತೋ , ಆತ ತನ್ನ ಸಲುಗೆ ಹೆಚ್ಚಾಯಿತೆಂದು ಭಾವಿಸಿದನೋ, ಹೆಚ್ಚು ಮಾತಾಡುವುದು ಬೇಡವೆಂದು ತಿಳಿದು ಹಿಂದಕ್ಕೆ ಒರಗಿ ಕುಳಿತುಕೊಂಡ.
ಅಷ್ಟರಲ್ಲಿ ಭಾರತಿ ಬಾಲಕನೊಂದಿಗೆ ಕೀಟಲೆ ಮಾಡುತ್ತಿದ್ದವಳು ಅದನ್ನು ನಿಲ್ಲಿಸಿ ತಾನೂ ಹಿಂದಕ್ಕೆ ಒರಗಿ ಕುಳಿತಳು.
ಆಕೆ ಹೇಗಾಗಿದ್ದಳೆಂದರೆ, ಆತನ ಸನಿಹದಿಂದ ದೂರ ಇರುವುದು ಕೂಡ ಭಾರವೆನಿಸುತ್ತಿತ್ತು.
ಭಾರತಿ ಹಿಂದಕ್ಕೆ ಒರಗಿದ ತಕ್ಷಣವೇ ..............................
( ಮುಂದಿನ ಸಂಚಿಕೆಯಲ್ಲಿ .................)
1 comment:
ಇವತ್ತಿನ ಮಂಜಿನ ಹನಿ... ಬೆಚ್ಚಗಿದೆ....
’ ಈ ಸಂಭಾಷಣೆ ’ .... ಮೆಚ್ಚುವ ಹಾಗಿದೆ....
ಹುಡ್ಗೀರು ಇಷ್ಟು ಫಾಸ್ಟ್ ಇದ್ರೆ....
ಹುಡ್ಗರು ಸೈಕಲ್ ಹೊಡಿಯೋ ತ್ರಾಸ್ ಇರಂಗಿಲ್ಲ..ನೋಡ್ರಿ...
ಏನೇ ಆಗ್ಲಿ ಹುಡ್ಗಿ ಒರಗಿದಾಕ್ಷಣ ಕಟ್ ಹೇಳ್ಬಾರ್ದಿತ್ತು....
Post a Comment