ಈ ದಿನದ ಸಭೆಯಲ್ಲಿ 'ಕನ್ನಡದ ಶ್ರೇಷ್ಠ ಸಿನಿಮಾ, ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಟಿ' ಕುರಿತ ವಿಷಯದ ಬಗ್ಗೆ ಚರ್ಚಿಸಲಾಯಿತು.
ಮೊದಲಿಗೆ ವಿಷಯ ಮಂಡಿಸುತ್ತಾ ಮಾತನಾಡಿದ ಮಂಜುರವರು ಸಿನಿಮಾ ಮೌನ, ಮಾತು ಮತ್ತು ದೃಶ್ಯದ ಸಮ್ಮಿಳಿತಗೊಂಡ ಒಂದು ಮಾಧ್ಯಮವಾಗಿ ಅತ್ಯಂತ ಪ್ರಭಾವಯುತವಾಗಿದ್ದು, ಇಂತಹ ಸಿನಿಮ ನಮ್ಮ ಸಂಸ್ಕೃತಿ ಸಮಾಜ ಮತ್ತು ಜೀವಪರ ಕಾಳಜಿಯುಳ್ಳದ್ದಾಗಿದ್ದರೆ ಅದು ಶ್ರೇಷ್ಠ ಚಿತ್ರ ಎಂದೆನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಿನಿಮಾ ಒಂದು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾದರೂ ಅದು ಒಳಗೊಂಡಿರುವ ಹೂರಣ ಅಥವಾ ಕಥಾ ವಸ್ತುಗಳು ಮನುಷ್ಯ ಪ್ರೀತಿಯ ಮತ್ತು ಜೀವಪರ ಮೌಲ್ಯಗಳೇ ಆಗಿರುವುದು. ಕಾಲ ಚಲಿಸಿದಂತೆ ಮತ್ತು ತಂತ್ರಜ್ಞಾನ ವೃದ್ಧಿಯಾದಂತೆ ತೆರೆಯ ಮೇಲೆ ವಿಶಾಲವಾದ ಮತ್ತು ವಿಭಿನ್ನ ದೃಷ್ಟಿಕೋನದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆಯಾದರೂ ಸಂಸ್ಕೃತಿ, ಸಮಾಜ, ಕುಟುಂಬ, ಪಿಡುಗು ಈ ಎಲ್ಲಾ ಅಂಶಗಳು ಸಿನಿಮಾದ ಕಥನವಾಗಿದ್ದರೆ ಮತ್ತು ನಟ / ನಟಿ ಆ ಕಥಾವಸ್ತುವನ್ನು ಅರ್ಥೈಸಿಕೊಂಡು ತನ್ನದಾಗಿಸಿಕೊಂಡರೆ ಮಾತ್ರ ನೋಡುಗನೂ ಸಹ ಸಿನಿಮಾವನ್ನು ತನ್ನದಾಗಿಸಿಕೊಳ್ಳುತ್ತಾನೆ ಮತ್ತು ಅದು ಅವನ / ಅವಳ ದೃಷ್ಟಿಯಲ್ಲಿ ಉತ್ತಮ ಸಿನಿಮ ಎಂದೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಬಂಗಾರದ ಮನುಷ್ಯ ಸದಾ ಪ್ರಸ್ತುತವೆನಿಸುವ ಕಥಾವಸ್ತುವನ್ನು ಅದರ ನಿರೂಪಣೆ ಪಾತ್ರ ಪೋಷಣೆ ಮತ್ತು ಆ ಸಿನಿಮಾ ಉಂಟುಮಾಡುವ ಸಂವೇದನೆ ಸಿನಿಮಾ ಮತ್ತು ನೋಡುಗನ ನಡುವಣ ಸಾವಯವ ಸಂಬಂಧವು ಏರ್ಪಡುತ್ತದೆ. ಅಂತಹ ಸಿನಿಮಾಗಳಿಂದ ಪ್ರಭಾವಿತರಾದವರು ಸಾಮಾಜಿಕ ಪಿಡುಗುಗಳನ್ನು ಗುಣಪಡಿಸಲು ಮುಂದಾಗಿರುವ ಉದಾಹರಣೆಗಳು ಶ್ರೇಷ್ಠ ಸಿನಿಮಾದ ಸಾಕ್ಷಿಗಳಾಗಿವೆ.
ದತ್ತರಾಜ್ ರವರು ಒಂದು ಸಿನಿಮಾ ಕಥಾವಸ್ತುವಿನಿಂದಲೂ ತಂತ್ರಜ್ಞಾನದಿಂದಲೂ ಆ ದೇಶದ / ಪ್ರದೇಶದ ಸಂವೇದನೆಗೊಳಪಟ್ಟರೆ ಅಂತಹ ಚಿತ್ರದಗಳು ತಮ್ಮ ದೃಷ್ಟಿಯಲ್ಲಿ ಶ್ರೇಷ್ಠ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮುತ್ತಿನಹಾರ 'ತಂತ್ರಜ್ಞಾನ, ಕಥೆ, ಪಾತ್ರ, ಸಂಗೀತ' ಇವುಗಳನ್ನೊಳಗೊಂಡು ಒಂದು ಉತ್ತಮ ಸಿನಿಮಾ ಮತ್ತು ಅದೇ ಸಾಲಿಗೆ ಬಂಗಾರದ ಮನುಷ್ಯ ಸಿನಿಮಾ ಕೂಡ ಸೇರುತ್ತದೆ ಎಂದರು.
ರಾಮಗಣಪತಿಭಟ್ ರವರು ಮಾತನಾಡುತ್ತಾ ಸಿನಿಮಾ, ರಂಗಭೂಮಿ, ಯಕ್ಷಗಾನ ಇವೆಲ್ಲವೂ ಕೂಡ ಮನರಂಜನೆಯ ಮಾಧ್ಯಮವಾಗಿದ್ದು ಜನತೆಯನ್ನು ಒಳ್ಳೆಯ ಮಾರ್ಗದಲ್ಲಿ ತರುವುದಕ್ಕೆ 'ಸಿನಿಮಾ' ಅತ್ಯಂತ ಪ್ರಭಾವಿ ಮಾಧ್ಯಮ ಎಂದರು. ಮನರಂಜನೆಯ ಜೊತೆಗೆ ವಾಸ್ತವ ಜೀವನಕ್ಕೆ ಹತ್ತಿರವಿರುವ ಸಿನಿಮಾಗಳು ಕಮರ್ಷಿಯಲ್ ಅಂಶಗಳನ್ನು ಹೊರತುಪಡಿಸಿ, ಶ್ರೇಷ್ಠ ಸಿನಿಮಾ ಎಂದೆನಿಸಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಈ ಸಾಲಿನಲ್ಲಿ 'ಬಂಗಾರದ ಮನುಷ್ಯ, ಮಿಲನ' ಈ ರೀತಿಯ ಸಿನಿಮಾಗಳು ವಾಸ್ತವ ಜೀವನಕ್ಕೆ ಹತ್ತಿರವಿದ್ದು ಹೆಚ್ಚು ಯಶಸ್ಸುಗಳಿಸಿದ ಸಿನಿಮಾಗಳು ಸಹ ಆಗಿವೆ ಎಂದರು.
ಸೀನುರವರು ಇದಕ್ಕೆ ಸ್ಪಂದಿಸುತ್ತಾ 'ಕಮರ್ಷಿಯಲ್ ಅಥವಾ ಬರಿಯ ಲಾಭಾಂಶ'ವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಮೌಲ್ಯಗಳು ಕುಸಿಯುವ ಸಾಧ್ಯತೆಗಳೇ ಹೆಚ್ಚಿದ್ದು, ಸಿನಿಮಾವನ್ನು ಸಾಮಾಜಿಕ ಪರಿಣಾಮಕಾರಿ ಮಾಧ್ಯಮವನ್ನಾಗಿಸುವುದು ಅತ್ಯಂತ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಮೇಶ್ ರವರು ಸಿನಿಮಾ ಒಂದು ಉದ್ಯಮವಾಗಿದ್ದು ಬಂಡವಾಳ ಹೂಡಿಕೆಯ ಜೊತೆ ಜೊತೆಗೆ ಅದಕ್ಕಿರುವ ಮನರಂಜನಾತ್ಮಕ ಮೌಲ್ಯಗಳು ಹಾಗೂ ಸಾಮಾಜಿಕ ಸುಧಾರಣಾ ಮೌಲ್ಯಗಳನ್ನು ಕಡ್ಡಾಯವಾಗಿ ಒಳಗೊಂಡಿರಬೇಕು ಮತ್ತು ಈ ನಿಟ್ಟಿನಲ್ಲಿ ಬಂಗಾರದ ಮನುಷ್ಯದಂತಹ ಸಿನಿಮಾಗಳು ಗ್ರಾಮೀಣಮಟ್ಟದ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲೂ ಸಹ ಯಶಸ್ವಿಯಾಗಿರುವುದನ್ನು ಸ್ಮರಿಸುತ್ತಾ ಇತ್ತೀಚಿನ ದಿನಗಳಲ್ಲಿ ಅಂತಹ ಜೀವಪರ ಕಾಳಜಿಯ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂದು ತಿಳಿಸಿದರು. ಹಾಗಾಗಿ ಇಂದು ಯಶಸ್ವಿ ಬ್ಲಾಕ್ ಬಸ್ಟರ್ ಚಿತ್ರಗಳೂ ಸಹ ಶ್ರೇಷ್ಠ ಸಿನಿಮಾಗಳೆಂದೆನಿಸುತ್ತಿಲ್ಲವೆಂದು ಅಭಿಪ್ರಾಯಪಟ್ಟರು. 'ಕ್ಯಾಸ್ಟ್ ಅವೇ' ಎಂಬ ಇಂಗ್ಲಿಷ್ ಸಿನಿಮಾ ಮನುಷ್ಯನ ವಿಕಾಸನದ ಕತೆಯನ್ನು ಹೊಂದಿದ್ದು, ಅದನ್ನು ತಾವು 'ಮನುಷ್ಯ ವಿಕಾಸನದೊಂದಿಗೆ ದೇವರ ವಿಕಾಸನದ' ದೃಷ್ಟಿಕೋನದಲ್ಲಿ ವೀಕ್ಷಿಸಲು ಸಾಧ್ಯವಾಯಿತು ಮತ್ತು ಅಂತಹ ವಿಸ್ತೃತ ಸಾಧ್ಯತೆಗಳನ್ನು ಒಂದು ಸಿನಿಮಾ ಕಟ್ಟಿಕೊಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ನೂತನ ಸದಸ್ಯರಾದ ಏಕೇಶ್ ಬಾಬು ರವರು ಕಾಲಘಟ್ಟದ ಬದಲಾವಣೆಗಳಿಗೆ ತಕ್ಕಂತೆ ಸಿನಿಮಾಗಳು ರೂಪುಗೊಳ್ಳುವುದು ಸೂಕ್ತವಾಗಿದ್ದು, ಈ ಹಿಂದೆ ಇದ್ದಂತಹ ಸಮಸ್ಯೆಗಳಿಗೂ ಈಗಿರುವ ಸಮಸ್ಯೆಗಳಿಗೂ ವ್ಯತ್ಯಾಸವಿರುವುದನ್ನು ತಿಳಿಸುತ್ತಾ, ಈಗಿನ ಭೂಗತ ಲೋಕದ ಬಗ್ಗೆ, ಭಯೋತ್ಪಾದನೆಯ ಬಗ್ಗೆ ಎಚ್ಚರಗೊಳಿಸುವುದು ಅತ್ಯಂತ ಅಗತ್ಯವೆಂದು ತಿಳಿಸಿದರು. ಹಾಗಾಗಿ ಓಂ ಅಂತಹ ಸಿನಿಮಾಗಳು ಸಹ ಉತ್ತಮ ಚಿತ್ರಗಳ ಸಾಲಿಗೇ ಸೇರುತ್ತವೆ ಎಂದು ತಿಳಿಸಿದರು.
ಅದಕ್ಕೆ ಪೂರಕವಾಗಿ ಆಂಜಿರವರು ಮಾತನಾಡುತ್ತ ಸಿನಿಮಾದಲ್ಲಿ 'ಸಾಹಿತ್ಯ / ಕಥ' ಅತ್ಯಂತ ಮುಖ್ಯವಾಹಿನಿಯಾಗಿದ್ದು, ಮನರಂಜನೆ, ನವರಸಗಳು ಐಚ್ಛಿಕ ವಿಷಯವಾಗಿರುತ್ತವೆ ಎಂದು ತಿಳಿಸಿದರು. ಜೀವಪರ ಕಾಳಜಿಯ ಮತ್ತು ಮಣ್ಣಿನ ಮೂಲದ ವ್ಯವಸಾಯವನ್ನು ಬಿಂಬಿಸುವ, ಜಾಗೃತಿ ಮೂಡಿಸುವ ಚಿತ್ರಗಳು ಬದ್ಧತೆಯನ್ನು ಸೂಚಿಸುವುದರಿಂದ ಬಂಗಾರದ ಮನುಷ್ಯ, ಜೀವನಚೈತ್ರ ಚಿತ್ರಗಳು ಉತ್ತಮ ಎನಿಸಿವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಹುಣಸೂರು ಕೃಷ್ಣಮೂರ್ತಿ, ವಿಜಯ್, ರೇಣುಕಾಶರ್ಮ ಇವರು ಉತ್ತಮ ನಿರ್ದೇಶಕರ ಸಾಲಿಗೆ ಸೇರಿದ್ದಾರೆ ಎಂದು ತಮ್ಮ ಅನಿಸಿಕೆ ತಿಳಿಸಿದರು.
ಪರಶುರಾಮ್ ರವರು ಮಾತನಾಡುತ್ತಾ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ಚಿತ್ರಗಳೇ ಸರ್ವಕಾಲಕ್ಕೂ ಸಲ್ಲುವ ಕಥಾವಸ್ತುವಾಗಿದ್ದು, ಅಂತಹ ಅಂಶಗಳನ್ನೊಳಗೊಂಡ ಚಿತ್ರಗಳು ಉತ್ತಮವಾಗಿವೆ ಎಂದರು. ಈ ನಿಟ್ಟಿನಲ್ಲಿ ಯಜಮಾನ, ದ್ವೀಪ, ಸೈನಿಕ ಇವೆಲ್ಲವೂ ಪರಿಸರ ದೇಶಪ್ರಜ್ಞೆಯ ಜೊತೆಗೆ ಕುಟುಂಬ ಜೀವನದ ಪರಿಣಾಮಗಳನ್ನೂ ಸಹ ಬಿಂಬಿಸಿವೆ ಎಂದರು. ಕೇವಲ ಪ್ರಶಸ್ತಿಗೋಸ್ಕರ ಸಿನಿಮಾ ಮಾಡಿದಲ್ಲಿ ಹೆಚ್ಚು ಜನರಿಗೆ ತಲುಪದೆ ಉತ್ತಮ ಕಥಾಹಂದರ ನಡುವೆಯೂ ಸೋಲುವ ಸಾದ್ಯತೆಗಳಿರುತ್ತವೆ ಎಂದು ತಿಳಿಸಿದರು.
ಶ್ರೀಲಕ್ಷ್ಮಿರವರು ಮಾತನಾಡುತ್ತಾ, ನಾವು ಶಾಲೆಗಳಲ್ಲಿ ಓದುವಾಗ 'ಸಿನಿಮಾ'ಗೆ ಕರೆದುಕೊಂಡು ಹೋಗುತ್ತಿದ್ದರು. ಅಂದರೆ ಸಾಮಾಜಿಕವಾಗಿ ಪರಿಣಾಮ ಬೀರುವ, ಮಕ್ಕಳಿಗೆ ಮೌಲ್ಯಗಳನ್ನುಪರಿಚಯಿಸುವ ಮಾಧ್ಯಮವಾಗಿ ಸಿನಿಮಾ ಕಾಣಿಸುತ್ತಿತ್ತು, ಆ ನಿಟ್ಟಿನಲ್ಲಿ ದಂಗೆ ಎದ್ದ ಮಕ್ಕಳು ಉತ್ತಮ ಸಿನಿಮಾವಾಗಿದ್ದು, ಅಂತಹ ಸಿನಿಮಾಗಳು ಈಗಲೂ ನೆನಪಿನಲ್ಲಿ ಉಳಿದಿದೆ ಎಂದು ತಿಳಿಸಿದರು. ತಾವು ನೋಡಿದ ಸಿನಿಮಾಗಳಲ್ಲಿ 'ಮಾಯಾಬಜಾರ್, ಗೀತಾ' ಸಿನಿಮಾಗಳು ಉತ್ತಮವಾಗಿವೆ ಎಂದು ತಿಳಿಸಿದರು.
ಮಂಜುಳರವರು ಈಗಿನ ಚಿತ್ರಗಳಲ್ಲಿ ಕುಟುಂಬ ವ್ಯವಸ್ಥೆಯನ್ನಾಗಲಿ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನಾಗಲಿ ಅಥವಾ ಮಾನವೀಯ ಮೌಲ್ಯಗಳನ್ನಾಗಲಿ ಇಂದಿನ ಚಿತ್ರಗಳು ಬಿಂಬಿಸುತ್ತಿಲ್ಲವೆಂದು ತಿಳಿಸಿದರು.
ಮಹೇಂದ್ರರವರು ಮಾತನಾಡುತ್ತಾ ಕಾಲಘಟ್ಟದಲ್ಲಿ ನಾವು ಎದುರಿಸುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಂತೆ ಮತ್ತು ಅವುಗಳನ್ನು ಪ್ರತಿಭಟಿಸುವಂತೆ ನೈತಿಕ ಸ್ಥೈರ್ಯವನ್ನು ಕೊಡುವ ಚಿತ್ರಗಳು ಸದಾ ಕಾಲಕ್ಕೂ ಉತ್ತಮ ಮತ್ತು ಶ್ರೇಷ್ಠ ಚಿತ್ರಗಳೆನಿಸುತ್ತವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಲಾವಣ್ಯರವರು ಮಾತನಾಡುತ್ತಾ ಸಿನಿಮಾಗಳು ಒಳಗೊಳ್ಳುವ ಕಥನ ವಸ್ತು ನೈಜ ಜೀವನಕ್ಕೆ ಹತ್ತಿರವಾಗಿದ್ದರೆ ಅವು ಸದಾ ನೆನಪಿನಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ 'ಸ್ಕೂಲ್ ಮಾಸ್ಟರ್ ' ಚಿತ್ರ ಒಂದು ಉತ್ತಮ ಉದಾಹರಣೆಯಾಗಿದ್ದು ಅದರಲ್ಲಿನ ದೃಶ್ಯಗಳು ಈಗಲ ನಮ್ಮ ಕುಟುಂಬದ ಒಡನಾಟವನ್ನು ಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ ಸಿನಿಮಾ ಒಂದು ಉದ್ಯಮವಾಗಿದ್ದರೂ, ತಂತ್ರಜ್ಞಾನ ಮಾಧ್ಯಮವಾಗಿದ್ದರೂ ಸಹ ಅದರ ಬೇರು ಕಥನ ಜನಪದೀಯವಾಗಿರುವುದರಿಂದ, ಮಾತೃಭೂಮಿಕೆಯಾಗಿರುವುದರಿಂದ ಅಂತಹ ಜೀವಪರಕಾಳಜಿಯನ್ನಿಟ್ಟುಕೊಂಡು ಮಾಡುವ ಸಿನಿಮಾಗಳು ಶ್ರೇಷ್ಠವೆನ್ನುವ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಯಿತು. ಸಮಯ ಕಡಿಮೆ ಇದ್ದುದರಿಂದ ವಿಸ್ತೃತ ಚರ್ಚೆಗೆ ಅವಕಾಶವಾಗಲಿಲ್ಲ. ಆದುದರಿಂದ ತಮ್ಮ ಅನಿಸಿಕೆಗಳನ್ನು ಟಿಪ್ಪಣಿ ಮೂಲಕ ಸಲ್ಲಿಸುವಂತೆ ಮನನ ಸದಸ್ಯರಲ್ಲಿ ಕೋರಲಾಯಿತು.
ಹೊಸದಾಗಿ ಸಭೆಗೆ ಬಂದಿದ್ದ 'ಏಕೇಶ್ ಬಾಬು ಮತ್ತು ಶಿವಕುಮಾರ್' ರವರನ್ನು ಸ್ವಾಗತಿಸಲಾಯಿತು ಹಾಗು ಸಭೆಯಲ್ಲಿ ಭಾಗವಹಿಸಿದ್ದ ಮಂಜು, ದತ್ತರಾಜ್, ರಾಮ್ ಭಟ್, ಸೀನು, ಲಾವಣ್ಯ, ಮಹಾಲಕ್ಷ್ಮಿ, ಶ್ರೀಲಕ್ಷ್ಮಿ, ಮಂಜುಳ, ರಮೇಶ್, ಆಂಜಿ, ಶಿವಕುಮಾರ್, ಪರಶುರಾಮ್, ಮಹೇಂದ್ರ ಎಲ್ಲರಿಗೂ ವಂದಿಸಿ ಸಭೆ ಮುಕ್ತಾಯಗೊಳಿಸಲಾಯಿತು. ಈ ಬಾರಿ ಹೆಚ್ಚು ಸದಸ್ಯರು ಭಾಗವಹಿಸಿ ವಿಷಯವನ್ನು ಉತ್ತಮ ರೀತಿಯಲ್ಲಿ ಅರ್ಥೈಸುವುದಕ್ಕೆ ಸಹಕರಿಸಿದ ಎಲ್ಲರಿಗೂ ಮನನ ಧನ್ಯವಾದಗಳನ್ನು ತಿಳಿಸುತ್ತದೆ.
No comments:
Post a Comment