ಸಭೆ ಪ್ರಾರಂಭವಾಗುತ್ತಿದ್ದಂತೆ ಈ ಹಿಂದೆ ತಿಳಿಸಿದಂತೆ 'ಅನೌಪಚಾರಿಕ ಶಿಕ್ಷಣ ಹಾಗೂ ಅಕಾಡೆಮಿಕ್ ಶಿಕ್ಷಣ' ದ ವಿಷಯವನ್ನು ಮಂಡಿಸಲಾಯಿತು.
ವಿಷಯದ ಬಗ್ಗೆ ಮಂಜುರವರು ಸಂಕ್ಷಿಪ್ತವಾಗಿ ನಿರೂಪಿಸಿದರು.
ಮಂಜು ಮಾತನಾಡುತ್ತಾ ನಾವು ಇಂದು ಸ್ಪರ್ಧಾತ್ಮಕ ಯುಗದಲ್ಲಿ ಕಲಿಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಠ್ಯಕ್ರಮ ಮತ್ತು ಪಡೆಯುತ್ತಿರುವ ಶಿಕ್ಷಣ ಇವುಗಳು ಎಷ್ಟರ ಮಟ್ಟಿಗೆ ಜೀವಪರವಾಗಿವೆ ಮತ್ತು ನೈಸರ್ಗಿಕವಾಗಿದೆ ಎಂಬುದನ್ನು ತಿಳಿಯುವ ಅಗತ್ಯತೆಯ ಬಗ್ಗೆ ಹೇಳಿದರು.
ಇಂದು ನಾವು ಯಾವ ವಿದ್ಯೆಯನ್ನು ಆದ್ಯತೆಯ ಮೇರೆಗೆ ಮತ್ತು ಮುಂದಿನ ಜೀವನದ 'ಕಂಫರ್ಟ್' (ಆರಾಮಾಗಿರಬಹುದು) ಎಂದು ಕಲಿಯುತ್ತಿದ್ದೇವೆ ವಾಸ್ತವದಲ್ಲಿ ಅಂತಹ ವಿದ್ಯೆಗಳ ನಿಜಕ್ಕೂ ಅನಿವಾರ್ಯವೆ ಎಂಬುದು ಮುಖ್ಯ ಪ್ರಶ್ನೆ. ಪ್ರಾಕೃತಿಕವಾಗಿ ಬದುಕುವುದಕ್ಕೆ ಅಗತ್ಯವೇ ಇಲ್ಲದ ಇಂದಿನ ಶಿಕ್ಷಣ ಅಂದರೆ ಯಾವ ಕಲಿಕೆ ಸೇವೆ ಗುಣಗಳನ್ನು ಹೊಂದಬೇಕಾಗಿತ್ತೋ ಅದೇ ವೈದ್ಯ ಶಿಕ್ಷಣ ಇಂದು ಸ್ಪರ್ಧಾಯುಗದ ಮುಂಚೂಣಿಗೆ ಬಂದು ವ್ಯಾಪಾರಿಕರಣವಾಗುತ್ತಿರುವುದು ಗಂಭೀರವಾದ ಸಮಸ್ಯೆ. ಹಾಗೆಯೇ ಅದೇ ರೇಸ್ ನಲ್ಲಿರುವ 'ಇಂಜಿನಿಯರಿಂಗ್' ವಿದ್ಯೆ ಕೂಡ ಮಾನವ ಕೌಶಲ್ಯವನ್ನು ಹೆಚ್ಚಿಸಿಕೊಂಡು ತಾರತಮ್ಯವನ್ನು ಸೃಷ್ಟಿಸುತ್ತಾ, ಆಧುನೀಕರಣ ಎಂಬ ಸೋಗಿನಲ್ಲಿ 'ಕೈಗಾರಿಕೆ'ಗಳನ್ನು ನಿರ್ಮಿಸಿಕೊಂಡು ಯಂತ್ರವಾಗುತ್ತಿದ್ದಾನೆ ಮತ್ತು ಜೀವ ಸಂಕುಲಗಳಿಂದ ಬೇರೆಯಾಗುತ್ತಿದ್ದಾನೆ.
ಮನುಷ್ಯನು ಹೀಗೆ ಯಾಂತ್ರಿಕವಾಗಿ ಸಾಗುತ್ತಿರುವಾಗ ನಿಜಕ್ಕೂ ನೈಸರ್ಗಿಕವಾಗಿ ಬದುಕಲು ಅಗತ್ಯವಾಗಿರುವ ಔಪಚಾರಿಕ ಶಿಕ್ಷಣ ಅಂದರೆ ವ್ಯವಸಾಯ, ಹೈನುಗಾರಿಕೆ.. ಹೀಗೆ ಜೀವಾವಶ್ಯಕವಾಗಿರುವದನ್ನು ವಿದ್ಯೆಯನ್ನಾಗಿ ಕಲಿಯದೇ ಅದರ ಉಪ ಉತ್ಪನ್ನಗಳಿಂದ ಅಥವಾ ಕೃತಕವಾದವುಗಳನ್ನು ನಮ್ಮ ಜೀವನಕ್ಕೆ ತೀರಾ ಅನಿವಾರ್ಯ ಮಾಡಿಕೊಂಡಿರುವುದು ನಿಜಕ್ಕೂ ನಾಚಿಕೆಯ ವಿಷಯವಾಗಿದೆ. ಮನೆಯಲ್ಲಿ ಅಮ್ಮ ನಿರ್ವಹಿಸುವ ಪಾತ್ರವಾಗಲಿ, ಅವಳು ಮಾಡುವ ಅಡುಗೆಯಾಗಲಿ ಅಥವಾ ಅವಳು ಬಿಡಿಸುವ ರಂಗೋಲೆಯಾಗಲಿ ನಮಗೆ ಗುಣಾತ್ಮಕ ಶಿಕ್ಷಣ ಎಂದು ಅನಿಸುವುದೇ ಇಲ್ಲ ಮತ್ತು ವ್ಯವಸಾಯ, ಹೈನುಗಾರಿಕೆ ಇವ್ಯಾವುದೂ ನಮಗೆ ಪ್ರಾಥಮಿಕ ಶಿಕ್ಷಣದಲ್ಲಿ ಸಿಗುವುದೇ ಇಲ್ಲ.
ಇದಕ್ಕೆ ಸ್ಪಂದಿಸಿದ ಮಹೇಂದ್ರ ರವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಹೆಜ್ಜೆ ಮುಂದಿಡಬೇಕೆಂಬ ಹಪಾಹಪಿಸಿಕೆಯಲ್ಲಿ ಮನೆಯಲ್ಲಿಯೇ ಮಕ್ಕಳನ್ನು ಸ್ಪರ್ಧೆಗೆ ದೂಡುವ ವ್ಯವಸ್ಥೆ ನಿರ್ಮಾಣವಾಗಿರುವುದಾಗಿ ತಿಳಿಸಿದರು.
ಮಂಜುಳರವರು ತಮಗಾದ ಅನುಭವವನ್ನು ತಿಳಿಸುತ್ತಾ ತಮ್ಮ ಮಗಳಿಗೆ 'ಮಣ್ಣಿನಲ್ಲಿ ಬಳೆ ಚೂರನ್ನು ಹುಡುಕುವ' ಆಟವನ್ನು ಕಲಿಸಲು ಪ್ರಯತ್ನಿಸಿ ವಿಫಲರಾದದ್ದು ಮತ್ತು ಇಂದಿನ ಮಕ್ಕಳು ಕಂಪ್ಯೂಟರ್ / ಎಲೆಕ್ಟ್ರಾನಿಕ್ ಆಟಗಳನ್ನು ಬಹಳ ಬೇಗ ಕಲಿಯುವ / ಆಸಕ್ತಿ ಹೊಂದಿರುವ ಬಗ್ಗೆ ತಿಳಿಸುತ್ತಾ, ನಾವು ಅವರುಗಳು ಆಸಕ್ತಿಯಿಂದ ಜಾನಪದ ಆಟಗಳನ್ನು ಕಲಿಯುವ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ಇದಕ್ಕೆ ಶ್ರೀಲಕ್ಷ್ಮಿರವರು ಪ್ರಾಥಮಿಕ ಹಂತದಲ್ಲಿ ಯಾವ ತಂದೆ ತಾಯಿಯೂ ತಮ್ಮ ಮಕ್ಕಳು ಹೀಗೇ ಆಗಬೇಕೆಂದು ಒತ್ತಡ ಹೇರುವುದಿಲ್ಲ ಬದಲಾಗಿ ಅವರು ಚೆನ್ನಾಗಿ ಬೆಳೆಯಲಿ ಎಂಬ ಬಗ್ಗೆಯೇ ಗಮನವಹಿಸುತ್ತಾರೆ. ಆದರೆ ಅವರು ಪ್ರೌಢ ಶಿಕ್ಷಣಕ್ಕೆ ಬರುವ ವೇಳೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಡ್ಡಿ ಅವರಲ್ಲಿ ಕೀಳರಿಮೆ ಉಂಟು ಮಾಡುವ ಪರಿಸರ ನಿರ್ಮಾಣವಾಗಿಬಿಟ್ಟಿರುತ್ತದೆ. ಹೀಗಿರುವಾಗಿ ನಾವು ಅವರನ್ನು ಜೀವಮೂಲಕ್ಕೆ ಕರೆದೊಯ್ಯುವುದು ತುಸು ಕಷ್ಟಕರವೆಂದು ಹೇಳಿದರು.
ಇದಕ್ಕೆ ಉತ್ತರಿಸಿದ ಗುರುಪ್ರಕಾಶ್ ರವರು "ಮಣ್ಣನ್ನು ಹದ ಮಾಡಿ ನಮಗೆ ಬೇಕಾದ ಆಕಾರದ ಮಡಿಕೆಯನ್ನು ಪಡೆದುಕೊಳ್ಳುವ" ಹಾಗೆ ನಾವುಗಳು ನಮ್ಮ ಮಕ್ಕಳು ಸ್ಪರ್ಧೆಯಿಂದ ಹಿಂದುಳಿಯದಂತೆಯೂ ಮತ್ತು ಅವರು ಜೀವ ಮೂಲ ಬದುಕಿನ ಅಂತಃಸತ್ವವನ್ನು ಮನಗಾಣುವ ಹಾಗೆ ನಾವು ಮಾಡಬೇಕಾದ ಅತ್ಯಂತ ಪ್ರಜ್ಞಾತ್ಮಕ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತದನಂತರ ಮಾತನಾಡಿದ ಆಂಜಿರವರು ಇಂದು ನಾವು ಆಧುನಿಕ ಕಾಲಘಟ್ಟದಲ್ಲಿ ನಿಂತಿದ್ದು ಈ ನಿಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ಜೀವಪರವಾಗಿ ಬದುಕುವ ರೀತಿಯನ್ನು 'ಮೊರಾಲಿಟಿ'ಯ ನೆಲೆಗಟ್ಟಿನಲ್ಲಿ ತಿಳಿಸುವುದು ಕಷ್ಟವಾಗಿದ್ದು, ಅವರನ್ನು ಒಂದು ಹೆಜ್ಜೆ ಹಿಂದಕ್ಕೆ ಇಡಿ ಎಂದು ತಿಳಿಸುದರಲ್ಲಿರುವ ಅಪಾಯದ ಬಗ್ಗೆಯು ಆತಂಕ ವ್ಯಕ್ತಪಡಿಸುತ್ತಾ ಸಮಾನವಾಗಿ ಬದುಕುವುದಕ್ಕೂ ಸಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿರುವ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ಈ ಎಲ್ಲಾ ಅಂಶಗಳ ಚರ್ಚೆಯಲ್ಲಿ ಎಲ್ಲರೂ ಗುಣಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮುಂದಿನ ಜನಾಂಗದವರಿಗೆ ಜಾನಪದ ಮೂಲದ ಜೀವಪರ ನೀತಿಯನ್ನು ತಿಳಿಸುವ ಬಗೆಗಳ ಬಗ್ಗೆ ಹೆಚ್ಚು ತಿಳಿಯುವ ಅವಶ್ಯಕತೆಯಿದೆ ಎಂದು ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಹಾಗೆಯೇ ಮನನ ತಂಡದ ಸದಸ್ಯರು ಪ್ರಯೋಗಾತ್ಮಕವಾಗಿ ಜೀವಪರ ಕಾಳಜಿಯನ್ನು ನೈಸರ್ಗಿಕವಾಗಿ ಬದುಕುವ ರೀತಿಯ ಮಾರ್ಗಗಳ ಬಗ್ಗೆ ಹೆಚ್ಚೆಚ್ಚು ಚರ್ಚಿಸಿ 'ತಿಳಿದು ತಿಳಿಯಾಗಬೇಕು' ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು.
No comments:
Post a Comment