ದಿನಾಂಕ: 5.3.2011ರಂದು ನಡೆದ ಮನನ ಅಧ್ಯಯನ ತಂಡದ ನಡವಳಿಗಳು :
1. ಮನನ ಅಧ್ಯಯನ ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ಶ್ರೀ ಎಂ.ಶಿವಾನಂದರವರನ್ನು ಸ್ವಾಗತಿಸಲಾಯಿತು.
2. ಸಚಿವಾಲಯದಿಂದ ಪಿ.ಡಿ.ಓ. ಆಗಿ ಆಯ್ಕೆಗೊಂಡು ಬೆಳಗಾವಿಯಲ್ಲಿ ತರಬೇತಿ ಪಡೆಯುತ್ತಿರುವ ರೇವಪ್ಪರವರು ಇಂದು ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಂಡರು.
ಮೊದಲಿಗೆ ಒಂದು ತಿಂಗಳ ಅವಧಿಯಲ್ಲಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳು, ಪಿ.ಡಿ.ಓ.ಗಳ ಜವಾಬ್ದಾರಿ, ನಿರ್ವಹಿಸಬೇಕಾದ ಕೆಲಸಗಳ ಬಗ್ಗೆ ಕೇಳಲಾಯಿತು.
ರೇವಪ್ಪರವರು ತಾವು ಇನ್ನೂ ತರಬೇತಿಯ ಹಂತದಲ್ಲಿದ್ದು, ವಿಶೇಷವಾಗಿ ನಿಯಮಗಳ ಅಡಿಯಲ್ಲಿ, ವ್ಯವಸ್ಥೆಯ ಜೊತೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ತುಸು ಕಷ್ಟದ ಕೆಲಸವೆಂದೇ ಹೇಳುತ್ತಾ, ಒಟ್ಟಾರೆಯಾಗಿ ಜನರಿಗೆ ಸ್ಪಂದಿಸುವ ಮತ್ತು ಜನರಿಗೆ ನೆರವಾಗುವ ಅವಕಾಶಗಳು ಹೆಚ್ಚಿವೆಯೆಂದು ತಿಳಿಸಿದರು. ಮತ್ತು ಒಟ್ಟಾರೆಯಾಗಿ ರಾಜಕಾರಣಿಗಳಿಂದ ಹಿಡಿದು ಅಧಿಕಾರಿಗಳವರೆಗೂ ಮತ್ತು ಜನಸಾಮಾನ್ಯರೂ ಕೂಡ ಲಾಭಿಗೆ ಒಳಗಾಗಿರುವುದರಿಂದ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಆತ್ಮಸ್ಥೈರ್ಯ ಹೆಚ್ಚಾಗಬೇಕೆಂದು ಅಭಿಪ್ರಾಯಪಟ್ಟರು.
ಇದಕ್ಕೆ ಸ್ಪಂದಿಸಿದ ಶಾಂತರಾಮ್, ಅಂಜನಪ್ಪ ಮುಂತಾದ ಎಲ್ಲರೂ ಅದಕ್ಕೆ ಸಹಮತಿಸುತ್ತಾ ಆಂಜನಪ್ಪನವರು 'ನಾವು ಇರುವ ವ್ಯವಸ್ಥೆಯಲ್ಲಿಯೇ ಮಾನವೀಯತೆಯಿಂದ ಮತ್ತು ಆ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು' ತಿಳಿಸಿದರು.
3. ನಂತರ ಮನನ ತಂಡವನ್ನು ಇನ್ನಷ್ಟು ಸಕ್ರಿಯವಾಗಿ ಕೊಂಡೊಯ್ಯಲು ಸದಸ್ಯರ ಪಾಲ್ಗೊಳ್ಳುವಿಕೆಯ ಜೊತೆಗೆ ಸಲಹೆಗಳನ್ನು ನೀಡುವಂತೆ ಕೋರಲಾಗಿ, ಮಹೇಂದ್ರ, ಶಾಂತರಾಮ್, ಶ್ರೀಲಕ್ಷ್ಮಿ, ಲಕ್ಷ್ಮಣ್, ರಾಮಗಣಪತಿ ಭಟ್, ಮಂಜು, ಸೀನು ಇವರೆಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಚರ್ಚೆಯಲ್ಲಿ ಮನನ ತಂಡದಲ್ಲಿ ಈ ಹಿಂದೆ ಮಾಡಿದ್ದ ಗುಂಪುಗಳನ್ನೇ ಮುಂದುವರೆಸಿ ಆ ಮೂಲಕ ಚರ್ಚಿಸುವುದು ಮತ್ತು ಒಂದು ವಾರ ದೀರ್ಘಕಾಲಿಕ ಜಿಜ್ಞಾಸೆಯುಳ್ಳ ವಿಷಯವನ್ನು ಚರ್ಚೆಗೆ ಆಯ್ದುಕೊಂಡು ಮತ್ತೊಂದು ವಾರ ಪ್ರಚಲಿತ ವಿದ್ಯಮಾನಗಳಿಗೆ ಮೀಸಲಿಡುವ ಬಗ್ಗೆ ಒಮ್ಮತದ ನಿರ್ಧಾರ ವ್ಯಕ್ತವಾಯಿತು. ಅದರಂತೆ ಕೇವಲ ಚರ್ಚೆಗೆ ಮೀಸಲಾಗದೆ ಅದರ ಫಲಪ್ರದವಾಗಿ ಕ್ರಿಯಾತ್ಮಕವಾಗಿ ಮನನ ಹೊರಹೊಮ್ಮಬೇಕೆಂಬ ಆಶಯವನ್ನು ಲಾವಣ್ಯ, ಮಂಜುಳ, ಸೀನು, ಶ್ರೀಲಕ್ಷ್ಮಿ ಇವರೆಲ್ಲರೂ ವ್ಯಕ್ತಪಡಿಸಿದರು ಮತ್ತು ಅದಕ್ಕೆ ಸಭೆ ಅನುಮೋದಿಸಿತು.
4. ವಾರಕ್ಕೆ ಒಂದು ವಿಷಯದ ಬಗ್ಗೆ ಚರ್ಚೆ ನಡೆಸಲು ಅನುವಾಗುವಂತೆ 'ಇ-ಮೇಲ್' ಮೂಲಕ ವಾರದ ಮೊದಲ ದಿನ (ಸೋಮವಾರ) ರವಾನಿಸುವ ವಿಷಯದ ಬಗ್ಗೆ ಸದಸ್ಯರ ವೈಯಕ್ತಿಕ ಅಭಿಪ್ರಾಯಗಳನ್ನು ಮೇಲ್ ಮೂಲಕ ಅಥವಾ ಲಿಖಿತ ಮೂಲಕ ರವಾನಿಸುವಂತೆ ಕೋರಲಾಯಿತು. ಇದಕ್ಕೆ ಎಲ್ಲರೂ ಸ್ಪಂದಿಸುವಂತೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.
5. ಮಹೇಂದ್ರ, ರಾಮಗಣಪತಿ ಭಟ್ ಮತ್ತು ಲಕ್ಷ್ಮಣ್ ರವರು ಮಾತನಾಡಿ ಅಧ್ಯಯನ ತಂಡಕ್ಕೆ ಹೆಚ್ಚು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಬೇರೆ ಬೇರೆ ವಿಷಯಗಳನ್ನು ಚರ್ಚಿಸಬೇಕೆಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಅದನ್ನು ಒಪ್ಪಿಕೊಂಡು ಇನ್ನುಮುಂದೆ ಚರ್ಚೆಗೆ ತೆಗೆದುಕೊಳ್ಳುವ ವಿಷಯಗಳ ಜೊತೆಗೆ ಯಾವುದೇ ಸದಸ್ಯರು ತಮಗೆ ಚರ್ಚಿಸಬೇಕೆಂದು ಬಯಸುವ ವಿಷಯವನ್ನು ಚರ್ಚಿಸಲು ಸಹಮತಿಸಲಾಯಿತು.
6. ಮನನ ತಂಡ ಹೊರತರಲು ಉದ್ದೇಶಿಸಿರುವ 'ಮಾಸಪತ್ರಿಕೆ'ಯನ್ನು ಮನನ ತಂಡವೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಸ್ವತಂತ್ರ್ಯವಾಗಿ ಹೊರತರಬೇಕೆಂಬ ಅಭಿಪ್ರಾಯವನ್ನು ಗುರುಸ್ವಾಮಿ ಆದಿಯಾಗಿ ಸದಸ್ಯರೆಲ್ಲರೂ ಒಮ್ಮತದಿಂದ ಅನುಮೋದಿಸಿದರು.
7. ಒಟ್ಟಾರೆಯಾಗಿ ಇನ್ನುಮುಂದೆ ಮನನ ತಂಡದ ಸದಸ್ಯರು ಹೆಚ್ಚು ಕ್ರಿಯಾಶೀಲರಾಗಿ ಉತ್ತಮವಾದ ಅಧ್ಯಯನ ತಂಡವನ್ನು ಮುನ್ನಡೆಸಲು ಸಹಕರಿಸುವಂತೆ ಕೋರಿ ನೂತನ ಸದಸ್ಯರಾದ ಶಿವಾನಂದ.ಎಂ., ಮತ್ತು ವಿಶೇಷವಾಗಿ ಆಗಮಿಸಿದ್ದ ರೇವಪ್ಪ ಹಾಗೂ ಗುರುಸ್ವಾಮಿ ಮತ್ತು ಭಾಗವಹಿಸಿದ್ದ ಮಂಜು, ಗುರುಪ್ರಕಾಶ್, ರಮೇಶ್, ಹುಲಿಯಪ್ಪ, ಶ್ರೀಲಕ್ಷ್ಮಿ, ಮಂಜುಳ, ಲಾವಣ್ಯ, ಮುನಿಆಂಜಿನಪ್ಪ, ಮಂಜುನಾಥ.ವಿ.ಎಂ., ಶಾಂತರಾಮ, ಶಿವಕುಮಾರ್, ಲಕ್ಷ್ಮಣ್, ರಾಮಗಣಪತಿಭಟ್, ಸೀನು.ಪಿ. ಎಲ್ಲರಿಗೂ ವಂದನೆಗಳನ್ನು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಮುಂದಿನ ಮನನ ತಂಡದ ಸಭೆ ದಿನಾಂಕ: 19.3.2011.
-ಮನನ ತಂಡದ ಪರವಾಗಿ
No comments:
Post a Comment