ಡಿಯರ್ ಫ್ರೆಂಡ್ಸ್..
ಮಂಜುನಾಥ್ ಅವರು ಆರಂಭಿಸಿರುವ ಚರ್ಚೆಯ ಪೀಠಿಕೆಗೆ ನನ್ನ ಅನಿಸಿಕೆ ಇದು.
ನಿಜವಾಗಿಯೂ ನನಗೆ ಇಂತಹ ವಿಷಯದ ಕುರಿತು ಬರೆಯುವಂತಹ ಯಾವುದೇ ಅನುಭವವಿಲ್ಲ. ಇದುವರೆವಿಗೂ ಈ ವಿಷಯ ಕುರಿತಾದ ಪುಸ್ತಕಗಳನ್ನಾಗಲೀ, ಪ್ರಬುದ್ಧ ಲೇಖನಗಳನ್ನಾಗಲೀ ಓದಿಲ್ಲ. ಓದುವ ಮನಸ್ಸೂ ಆಗಿಲ್ಲ. ಎಲ್ಲೋ ಒಂದಿಷ್ಟು ಪತ್ರಿಕೆಯಲ್ಲಿ ಬಂದ ಸುದ್ದಿಗಳ ಬಗ್ಗೆ ಕಣ್ಣಾಡಿಸಿರಬಹುದಷ್ಟೇ. ನಕ್ಸಲ್ ಪಿಡುಗಿನಂತಹ ಸಮಸ್ಯೆಗಳು ಪದೇ ಪದೇ ಮರುಕಳಿಸುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯ ನಮ್ಮ ಭವ್ಯಭಾರತದ ಆಂತರಿಕ ಭದ್ರತೆಯನ್ನು ಹದಗೆಡಿಸುವ ಪುಟ್ಟ ಪುಟ್ಟ ಪ್ರಯತ್ನಗಳಷ್ಟೇ ಎಂದು ನನಗನಿಸುತ್ತಿದ್ದುದು ಇದರೆಡೆಗಿನ ನನ್ನ ತಾತ್ಸಾರಕ್ಕೆ ಕಾರಣವಿರಬಹುದೇನೋ.
ನಮ್ಮ ವ್ಯವಸ್ಥೆಯಲ್ಲಿ ಕಂಡುಬರುವ ಅಸಮಾನತೆ, ಮೇಲು-ಕೀಳು, ಬೇದಭಾವಗಳು ಇಂದು ನಿನ್ನೆಯ ನಮ್ಮ ಸಮಸ್ಯೆಗಳಲ್ಲ. ಕಾಲಾದಿಕಾಲದಿಂದಲೂ ಇವು ನಮ್ಮ ಸಮಾಜವನ್ನು ಕಾಡುತ್ತಲೇ ಇವೆ. ಇವುಗಳ ಬಗ್ಗೆ ಹಿಂದಿನಿಂದ ಹೋರಾಡುವ ನಕ್ಸಲ್ ವಾದದಂತಹ ಅಹಿಂಸಾತ್ಮಕ ಮಾರ್ಗಗಳೇಕೋ ಸರಿಯಾದ ವಿಧಾನಗಳೆನಿಸಲಾರವು. ಎಲ್ಲರಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ವಿಧಾನಗಳಿಂದಲೇ ಎದುರಾ ಬದುರು ನಿಂತು ಆಳುವ ಸರ್ಕಾರವನ್ನು ಕೇಳಿ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನೇಕೆ ಕಂಡು ಕೊಳ್ಳಬಾರದು.? ಸಮಾಜದ ಅಸಮಾನತೆ ನಿವಾರಣೆಯ ದೃಷ್ಠಿಯಲ್ಲಿ ಹೋರಾಟಕ್ಕೆ ನಿಂತು ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಿ ಅಲ್ಲಿನ ಜನತೆಯನ್ನು ಭಯದ ನೆರಳಿನಲ್ಲಿ ಬದುಕುವಂತೆ ಮಾಡುವುದು ಎಷ್ಟು ಸರಿ. ನಕ್ಸಲ್ ಪೀಡಿತ ಪ್ರದೇಶಗಳು ಎಂದು ಹೆಸರಿಸಿರುವ ಪಶ್ಚಿಮಘಟ್ಟದ ಹಲವು ಪ್ರದೇಶಗಳಲ್ಲಿ ಇಂದು ಅಲ್ಲಿನ ನಾಗರೀಕರು ತಮ್ಮ ಜೀವವನ್ನು ಕೈಯಲ್ಲಿಡಿದು ಬದುಕುವಂತಹ ದುಸ್ತಿತಿ ಬಂದೊದಗಿದೆ. ಈಗಾಗಲೇ ಅದೆಷ್ಟೋ ಮುಗ್ದ ಜೀವಗಳು ತಮ್ಮದಲ್ಲದ ತಪ್ಪಿಗೆ ಜೀವ ತೆತ್ತಿದ್ದು ಇತಿಹಾಸವಾಗಿದೆ. ಇಂದು ಹೀಗಿದೀವಿ ನಾಳೆ ಹೇಗೋ ಎಂಬ ಆತಂಕದಲ್ಲೇ ಜೀವನವನ್ನು ಕಳೆಯುತ್ತಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸುವ ಸೋಗಿನಲ್ಲಿ ಪ್ರಸ್ತುತ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುವುದು ಸರಿಯೇ..? ಇಂತಹ ಹೋರಾಟದಲ್ಲಿ ಭಾಗಿಗೊಂಡವರ ಕುಟುಂಬಗಳಾದರೂ ನೆಮ್ಮದಿಯ ಜೀವನವನ್ನು ನಡೆಸುತ್ತಿವೆಯೇ ?
ಅತ್ಯನ್ನತ ಶಿಕ್ಷಣ ಪಡೆದ ನಮ್ಮ ಯುವ ಪಡೆಯೇ ಇಂದು ಯಾವುದೋ ಒಂದು ಸೆಳೆತಕ್ಕೆ ಸಿಕ್ಕಿ ಇಂತಹ ‘ಇಸಂ’ ಗಳ ಮೂಲಕ ಹೋರಾಟಕ್ಕಿಳಿಯುತ್ತಿರುವುದನ್ನು ಗಮನಿಸಿದರೆ, ಶಿಕ್ಷಣದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬಹುದೆಂಬ ನಮ್ಮ ನಂಬಿಕೆಯೂ ಪೊಳ್ಳಾದದ್ದು ಎನಿಸುತ್ತಿದೆ. ಮಾನವೀಯ ನೆಲೆಗಟ್ಟಿನ, ಪ್ರೀತಿ ವಾತ್ಸಲ್ಯಗಳಿಂದೊಡಗೂಡಿದ ಸಹಬಾಳ್ವೆಯ ಬದುಕು ಮಾತ್ರ ಇಂತಹ ಪಿಡುಗಿಗೆ ಪರಿಹಾರ ಸೂಚಿಸಬಲ್ಲದೇನೋ..?
ಪರಶು
1 comment:
ಧನ್ಯವಾದಗಳು :
ಈ ವಿಷಯದ ಬಗ್ಗೆ ನೀವು ಸ್ಪಂದಿಸಿದ್ದಕ್ಕೆ ಮಾತು ಇದರ ಬಗ್ಗೆ ನಿಮ್ಮ ಅನಿಸಿಕೆ ನೀಡಿದ್ದಕ್ಕೆ ನಮಸ್ಕಾರ.
ಪ್ರತಿವಾರ ಒಂದು ವಿಷಯದ ಬಗ್ಗೆ ಚರ್ಚೆಯಲ್ಲಿ ನಿಮಗೆ ಪ್ರಸ್ತುತ / ಪ್ರಮುಖ ವಿಷಯಗಳ ಬಗ್ಗೆ ನೀವು ಬರೆಯಿರಿ
ಒಂದಷ್ಟು "ತಿಳಿದು ತಿಳಿಯಾಗೋಣ"
-ಮಂಜು
Post a Comment