ಅರಳಿ ಮರ....
ಒಂದು ಅರಳಿ ಮರ,
ತುಂಗೆ ತೀರದ ಬಳಿ.
ನಾ ಅದರ ಮುಂದೆ ಅಜ;
ಅದು ನೂರ್ಮಡಿಗಳಷ್ಟು ಗಜ.
ಮಳೆಯಲ್ಲೊಮ್ಮೆ
ಬುಡದಲ್ಲಿ ನಿಂತಿದ್ದೆ.
ಪಕ್ಕದ ಬೇವಿನೊಂದಿಗೆ
ಮದುವೆಯಾಗಿತ್ತು.
ಕಲ್ಲುಗಳ ರಾಶಿಗೆ
ಪೂಜೆ ಸಾಗಿತ್ತು.
ಕೆಳಗೆ ಅರಳಿಯ ಹಣ್ಣುಗಳು,
ಬಿಡಿಸಿದರೆ ಬರೀ ಹುಳುಗಳು.
ಬಿತ್ತು ಕೊಂಬೆಯೊಂದು ಮಳೆಗೆ.
ಹೊತ್ತೊಯ್ದೆ ಮನೆಗೆ.
ಅರಳಿ ಮರ ಶ್ರೇಷ್ಠ,
ಒಲೆಗೆ ಒಡ್ಡಬಾರದೆಂದಳಮ್ಮ.
ಪಕ್ಕದ ಹುಸೇನಣ್ಣನ ಮನೆಯಲಿ
ಒಡ್ಡಿ ಅರಳಿಯ ಕೊಂಬೆ,
ರೊಟ್ಟಿ ಮಾಡಿ ತಿಂದು;
ಜಾರಿದರು ಸುಖ ನಿದ್ದೆಗೆ...!
ನಿರ್ವಾಣ...
ನನ್ನಜ್ಜ
ಗಾಣದೆತ್ತಿನ ಜೀವ.
ಅವನಿಗೆ ಅಸಾಧ್ಯ
ಅಳುನಗುಗಳು.
ಅಪಘಾತಕ್ಕೊಳಗಾದ.
ಹೊತ್ತಿ-ಸುತ್ತಿ ಬಂದರು,
ಊರು-ನಗರಗಳ ಆಸ್ಪತ್ರೆ.
"ಪ್ರಾಣ" ಹೋಗದೆ
ತಂದರು ಮನೆಗೆ.
ನಡುಮನೆಯಲಿ
ನಿಶ್ಚಲನಾಗಿದ್ಧವನು
ಮನದಲ್ಲೇ ಮನೆನೋಡಿದ.
ಕಣ್ಣಂಚಲಿ ಕಂಬನಿ ಮಿಡಿಯಿತು.
ಮನೆಯ ಮೇಲೆ ಕೂತಿದ್ದ ಹಕ್ಕಿ ಹಾರಿತ್ತು.
-ಸಂತೋಷ್ ಸಿಹಿಮೊಗೆ.
6 comments:
ಸಂತೋಷ್ ಬ್ಲಾಗ್ ಗೆ ಎಂಟ್ರಿ ಕೊಟ್ಟಿದ್ದಕ್ಕೆ ಸ್ವಾಗತ. ನಿಮ್ಮ ತಿಳಿ ಹಾಸ್ಯದ, ಚಿಂತನಾಪರ ಕವಿತೆಗಳು ನನಗೆ ತುಂಬಾ ಇಷ್ಟವಾಗುತ್ತವೆ. ಪ್ರಸ್ತುತ ಅರಳಿ ಮರ ಕವಿತೆಯಲ್ಲಿಯ ಅರಳಿಯ ವಿಶಿಷ್ಟತೆ ಹಾಗೂ ನಮ್ಮ ಸಂಸ್ಕೃತಿಯ ನಡುವಿನ ಬಂಧವು ತಿಳಿ ಹಾಸ್ಯದ ಮುಖೇನ ಚನ್ನಾಗಿ ಮೂಡಿಬಂದಿದೆ. ನಿರ್ವಾಣದಲ್ಲಿನ ವೃದ್ಧನ ಅಂತ್ಯವನ್ನು ಪೂರ್ವದ ಆತನ ತುಮುಲದ ಜೊತೆಗೆ ಮುಷ್ಟಿಯಲ್ಲಿ ಹಿಡಿದಂತಿದೆ,ಅರ್ಥವತ್ತಾಗಿದೆ.
ಮಂಜು ಧನ್ಯವಾದಗಳು, ನಿಮ್ಮ ಸಲಹೆ ಸೂಚನೆಗಳು ನನ್ನ ಬೆಳವಣಿಗೆಗೆ ಸ್ಪೂರ್ತಿದಾಯಕ. ಸ್ನೇಹಿತನಿಗೆ ಸ್ನೇಹಪೂರ್ವಕ ಕೋರಿಕೆ.
ಸಂತು... ನಮ್ಮ ಬ್ಲಾಗ್ ಗೆ ನಿನಗೆ ಹೃತ್ಪೂರ್ವಕ ಸ್ವಾಗತ....
ಅರಳಿ ಮರ ಕವನ, ಮೌಢ್ಯತೆಯ ಲೇವಡಿ ಅಷ್ಟೇ ಅಲ್ಲ, ಬದಲಾವಣೆ ಮತ್ತು ಅನಿವಾರ್ಯತೆಗೆ ಒಗ್ಗಿಕೊಂಡ ಬದುಕಿನ ವಾಸ್ತವಿಕತೆಗೆ ಹಿಡಿದ ಕನ್ನಡಿ
ನಿರ್ವಾಣ ಬದುಕಿನದೋ,ದುಡಿಮೆಯದೋ, ಸಾರ್ಥಕತೆ(?)ಯದೋ... ಅಪೂರ್ಣತೆಯದೋ... ಚಿಂತನೆಗೆ ಹಚ್ಚುವಂತ ಕವನ...
ಅರ್ಥಪೂರ್ಣ ಕವನಗಳು....
ಮುಂದಿನ ಕವನಗಳ ನಿರೀಕ್ಷೆಯಲ್ಲಿ....
ಹಾಯ್
ಇಷ್ಟು ದಿನ ಎಲ್ಲಿದ್ರಿ ಸಂತೋಷ್...!?
ಕವನಗಳೆರಡೂ ತುಂಬಾ ಚೆನ್ನಾಗಿವೆ... ಒಬ್ಬರಿಗೆ 'ಪವಿತ್ರ'ವೆನಿಸಿರುವುದು, ಇನ್ನೊಬ್ಬರಿಗೆ ಹಾಗೆನಿಸದೇ ಇರುವುದನ್ನು ತುಂಬಾ ಸೂಚ್ಯವಾಗಿ ಅರಳಿಮರ ಕವನದಲ್ಲಿ ಬಿಂಬಿಸಿದ್ದೀರ...
ಇನ್ನು ನಿರ್ವಾಣ....
"ಪ್ರಾಣ" ಹೋಗದೆ
ತಂದರು ಮನೆಗೆ...
ಪ್ರಾಣ ಹೋಗಲೆಂದು ಹೊತ್ತು ಸುತ್ತಿ ಬಂದರಾ
ಊರು-ನಗರ ಆಸ್ಪತ್ರೆ..?
ಅರ್ಥವಾಗದ ಮನುಷ್ಯ ಜೀವನದ ಜಠಿಲತೆ ...
ಸೂಪರ್..
ಪ್ರಯತ್ನ ನಿರಂತರವಾಗಿರಲಿ...
ಸಂತೋಷ್ ಬ್ಲಾಗ ಗೆ ಸ್ವಾಗತ .ನೀವು ಕವನ,ಕಥೆಗಳನ್ನು ಚೆನ್ನಾಗಿ ಬರೀತೀರಾ ಅಂತಾ ಗೊತ್ತಿತ್ತು ಆದರೆ ಓದೋ ಅವಕಾಶ ಸಿಕ್ಕಿರಲಿಲ್ಲಾ ಇವತ್ತು ನಿಮ್ಮ ಕವನ ಓದಿ ತುಂಬಾ ಖುಷಿ ಆಯ್ತು....
ಮೇಲ್ನೋಟಕ್ಕೆ ಸರಳ ಅಂತ ಅನ್ನಿಸಿದರೂ...ತುಂಬಾ ಅರ್ಥಪೂರ್ಣವಾದ ಕವನಗಳು...
ನಿಮ್ಮ ಮುಂದಿನ ಕಥೆ ಕವನಗಳ ನಿರೀಕ್ಷೆಯಲ್ಲಿ....
ಹಾಯ್ (ಸಾಧು) ಸಂತೋಷ್ ,ನಮ್ಮ blog ಗೆ ನೀನು ಪ್ರವೇಶಿಸಿದ್ದು ನನಗೆ ತುಂಬಾ ಕುಶಿಯಾಯಿತು .ಸಚಿವಾಲಯದಲ್ಲಿ ಎಳೆಯ ಮರೆಯ ಕಾಯಿಯಂತಿರುವ ನೀನು ಈಗಲಾದರೂ ನಮಗೆ blog ನ ಮೂಲಕ ನಮಗೆ ಕಾಣಸಿಗುವನ್ತಾಗಿದ್ದಕ್ಕೆ ನಾನು ಹರ್ಷಿಸುತ್ತೇನೆ .ನೀನು ಬೂದಿ ಮುಚ್ಚಿದ ಕೆಂಡದಂತ ಪ್ರತಿಬೆ ಎಂಬುದನ್ನು ನಾನು ಬಲ್ಲೆ .ನಿಜ ಹೇಳಬೇಕೆಂದರೆ ನಿಮ್ಮಂತವರ ಸಾಹಿತ್ಯವನ್ನು ವಿಮರ್ಶಿಸುವ ಸಾಮರ್ಥ್ಯ ನನಗಿಲ್ಲ. ಆದರು ಗ್ರಹಿಸಲು ಪ್ರಯತ್ನಿಸುವೇನು ."ಅರಳಿ ಮರದಲ್ಲಿ" ನ ಅಂಧ ಶ್ರದ್ದೆ ಯಾ ವಿಡಂಬನೆ ಹಾಗು "ಅಜ್ಜ" ನ ಗತಕಾಲದ ನೆನಪು ಹಾಗು ನಾಗರಿಕ ಬದುಕಿನ ನಡುವಿನ ಸಂಗರ್ಷ ಗಳಿಗೆ ಒಗ್ಗಲಾಗದ ಅಸಹಾಯಕತೆ ಚೆನ್ನಾಗಿ ಮೂಡಿಬಂದಿದೆ
Post a Comment