ಸಾಯೋ ಟೇಮಿಗೆ ಮಾಳಪ್ಪ ಮೀನು ತಿಂದು ಸತ್ನಂತೆ
ರತ್ನಕ್ಕನ ಚಹಾದಂಗಡಿಯ ಕಟ್ಟೆಯಮೇಲೆ ಎಲ್ಲರೂ ಕುಳಿತಿದ್ದರು. ಹದಿನೈದಿಪ್ಪತ್ತು ದಿನಗಳ ಹಿಂದೆ ಬಂದು
ಅಸ್ತವ್ಯಸ್ತಗೊಳಿಸಿ ಹೋಗಿದ್ದ ಮಳೆರಾಯ ತಿರುಗಿ ಬಂದಿರಲಿಲ್ಲ. ಮಳೆ ಬಿದ್ದ ಕುರುಹೂ ಮರೆಯಾಗಿ ರಸ್ತೆಯ ಮಣ್ಣಿನ
ಕಣಗಳೆಲ್ಲಾ ಗಾಳಿಯಲ್ಲಿ ಸೇರಿ ಹಾರಾಡುತ್ತಿತ್ತು. ಬಿಸಿಲಧಗೆಯಲ್ಲಿ ಚಹಾ ಕುಡಿಯಲೊಪ್ಪದ ಎಲ್ಲರಿಗೂ ರತ್ನಕ್ಕ ನಿಂಬೆ
ಹಣ್ಣಿನ ಶರಬತ್ತು ಮಾಡಿ ಕೊಟ್ಟಿದ್ದಳು. ಒಂದೆಡೆ ಕಟ್ಟೆಯ ತುದಿಯ ಕಂಬಕ್ಕೊರಗಿ ಬೀರ ಶರಬತ್ತು ಹೀರುತ್ತಿದ್ದ.
ಅವನಿಗಿಂತ ಅನತಿ ದೂರದಲ್ಲಿ ಕುಕ್ಕರಗಾಲಿನಲ್ಲಿ ಕುಳಿತ ಬಸ್ಯ ಬಾಯಿಗೆ ಸಿಕ್ಕಿದ ನಿಂಬೆ ಬೀಜವನ್ನು 'ಥುಫ್' ಎಂದು
ಉಗಿದು ಮಾತಿಗೆ ಶುರುವಿಟ್ಟ..
ಬಸ್ಯ : ರತ್ನಕ್ಕಾ... ಯಾರ್ ಕೊಟ್ಟ ನಿಂಬೆ ಕಾಯಿವು...? ಸ್ವಲ್ಪನೂ ಹುಳಿಲ್ಲ, ಬರಿ ಬೀಜೊಂದು ಸಿಕ್ತಾವು...
ಸೀತೆ: ಬಸ್ಯಣ್ಣಾ.... ಹಿಂಗೇ ಮಳಿ ಹೋದ್ರೆ ಹುಳಿನೀರಲ್ಲ, ಕುಡಿಯಾಕೆ ನೀರೂ ಸಿಗಾದಿಲ್ಲ. ಸುಮ್ನೆ ಕುಡಿ...!
ಡೋಂಟಿ : ಎಗ್ ಜಾಕ್ಟ್ ಲಿ ಕರೆಕ್ಟ್ ಸೀತಕ್ಕಾ... ಬಸ್ಯಣ್ಣಾ ಮಳೆ ಇಲ್ದದ್ದಕೆ ನಿಂಬೇಕಾಯಾಗಿನ ಹುಳ್ಯೂ
ಒಣಗಿ ಹೋಗಿರ್ಬೇಕು...!
ಬಸ್ಯ : ಇರಬೈದು... ಆದ್ರೆ ಏನಿಲ್ಲ ಅಂದ್ರೂ ಈ ಮನುಸ್ರು 'ಹುಳಿ' ಮಾತ್ರ ಕಡಿಮ್ಯಾಗದಿಲ್ಲ...!!
ರತ್ನಿ : ಸಾಕು ಸುಮ್ನಿರ್ರೋ... ಮಾಂವನ ಮಾತಾಡ್ಸಾನ,,, ಏನ್ ಮಾಂವಾ ಯಾಕೆ ಸುಮ್ನೇ ಕುಂತು ಬಿಟ್ಟೆ..? ಹೀಂಗೇ ಮಳೆ ಹೋದ್ರೆ ನಮ್ಮಂಥೋರ ಕಥಿ ಏನು ಅಂತಾ..?
ಬೀರ : ಏನ್ಕಥ್ಯೋ...? ಏನ್ ವ್ಯಥ್ಯೋ..? ಈ ರೈತ್ರು ಜೀವ್ನನೇ ಸಾಕಾಗಿ ಬಿಟ್ಟೈತಿ.. ಹೀಂಗೇ ಆದ್ರೆ
ಇದ್ದು ಬದ್ದು ಜಮೀನು, ಮನೇನಲ್ಲ ಹುಟ್ಟಿದಷ್ಟುಕ್ಕೆ ಮಾರಿ ಪಟ್ಣುಕ್ಕೆ ಸೇರಿ ಬಿಡಾನ ಅಂತ....
ಸೋಮ : ಏನ್ ಚಿಗಪ್ಪಾ ಮೊನ್ನೆ ಮೊನ್ನೆ ಪಟ್ಣದ ಜೀವ್ನ ತುಂಬಾ ಕಷ್ಟ ಅಂತ ನೀನೇ
ಹೇಳಿದಂಗಿತ್ತು...!?
ಬೀರ : ಹ್ಞೂ ಹೇಳಿದ್ದೆ,, ಪಟ್ಣದಾಗಿದ್ದ ಎಲ್ರ ಜೀವ್ನನೂ ಕಷ್ಟದಾಗಿರತೈತಾ...? ಇಲ್ಲಿ ಹಳ್ಯಾಗಿದ್ದು ನಾವೇನು
ಸುಖ ಅನುಭವಿಸ್ತಿದೀಂವೀ...?
ಡೋಂಟಿ : ಚಿಗಪ್ಪಾ ನಿನ್ ಮಾತು ಕೇಳಿದ್ರೆ ಅದೇನೋ ಹೇಳ್ತಾರಲ್ಲ ''ಸಾಯೋ ಟೇಮಿಗೆ ಮಾಳಪ್ಪ
ಮೀನು ತಿಂದು ಸತ್ನಂತೆ'' ಹಂಗ್ಯಾತು...!
ಸೀತೆ : ಏಯ್ ಡೋಂಟಿ ಸಂಮ್ಮಂದಿಲ್ಲದ ಮಾತಾಡ್ ಬೇಡ.. ಅದ್ಯಾವನೋ ಮೀನು ತಿಂದು
ಸಾಯೋದ್ಕೂ.... ಬೀರ್ಮಾಂವ ಪಟ್ಟಣಕ್ ಸೇರ್ತ್ನೀ ಅಂದುದ್ಕೂ ಏನೈತಿ ಸಮ್ಮಂದ...?
ಡೋಂಟಿ : ಡೋಂಟ್ವರಿ ಸೀತಕ್ಕಾ ಸಮ್ಮಂದ ಐತಿ.... ಮಾಳಪ್ಪನ ಕಥೆ ಗೊತ್ತಾ ನಿಂಗೇ...?
ಸೀತೆ : ಯಾವ ಮಾಳಪ್ಪನ ಕಥೆ...!? ಗೊತ್ತಿಲ್ಲ.
ರತ್ನಿ : ಅವುಳಿಗೆ ಸೋಮಪ್ಪನ ಕಥೆ ಬಿಟ್ರೆ ಯಾವಪ್ಪನ ಕಥೇನೂ ಗೊತ್ತಿಲ್ಲ.....!
( ಹ್ಹ ಹ ಹ್ಹ ಹ್ಹ ಹ )
ಡೋಂಟಿ : ಅಂಗ್ಯಾರೆ.. ಸಣ್ಣೀರನ ಕೇಳು ಹೇಳ್ತಾನೆ... ಮಾಳಪ್ಪನ ಕಥೇನ. ಹೇಳೋ ಸಣ್ಣೀರಾ..?
ಸಣ್ಣೀರ : ನೀನೇ ಹೇಳು...?
ಡೋಂಟ್ವರಿ : ಇಲ್ಲಿಲ್ಲ... ನೀನೇ ಚೆನ್ನಾಗಿ ಹೇಳ್ತೀಯ ಹೇಳು.... ಕಥೆಗಾರರಿಂದಲೇ ಕಥೆ ಕೇಳ್ಬೇಕು...
ಸಣ್ಣೀರ : ಸರಿ ಬಿಡು... ಸೀತಕ್ಕಾ ಹೇಳ್ತೀನಿ ಕೇಳು... ಒಂದೂರಾಗೆ ಮಾಳಪ್ಪ ಅಂತ ಒಬ್ಬ ಬ್ರಾಮಣ
ಇದ್ನಂತೆ,,,,,
ಸೋಮ : ನಮ್ಮ ಕಡೇಮನೆ ಕಿಟ್ಟಿ ಹೆಗ್ಡಿ ತರಾ..!
ಬಸ್ಯ : ಅಲ್ಲ ಅವರಪ್ಪನ ತರ... ಸುಮ್ನೇ ಕೇಳು...
ಸಣ್ಣೀರ : ಹೌದೌದು ನಮ್ಮ ಕಿಟ್ಟಿ ಹೆಗ್ಡಿ ಅಪ್ಪನ ತರಾನೆ ಇದ್ನಂತೆ, ಅವುನಂಗೇನೆ ಊರಿನ ದೇವಸ್ಥಾನದ
ಪೂಜೆ ಮಾಡೋವ್ ನಂತೆ, ಮೂರೊತ್ತು ಮಡಿ ಮಡಿ ಮಡಿ ಅನ್ನೋವ್ನಂತೆ, ದಿನಕೈದೊತ್ತು ಸಾನ
ಮಾಡೋವ್ನಂತೆ....!
ಬಸ್ಯ : ಎಲ್ಲೋ ನೀರಾಗುಟ್ಟಿದ್ನೋ... ಏನೋ..!!
( ಹ ಹ್ಹ ಹ್ಹಾ......)
ಸೋಮ : ನೀನು ಬೀಡಿ, ಬೀಡಿ, ಬೀಡಿ ಅಂತೀಯಲ್ಲಾ....ನೀನೇನು ಬೀಡ್ಯಾಗುಟ್ಟಿದ್ಯಾ...?
( ಹ ಹ ಹ್ಹ ಹ್ಹಾ )
ಡೋಂಟ್ವರಿ : ಏಯ್ ... ಏನ್ ಹೊಡದೈತಿವತ್ತು ನಿಮ್ಗೇ...? ರತ್ನಕ್ಕಾ ಸರಬತ್ತಿಗೇನಾರ ಹಾಕಿದ್ಯಾ...?
ರತ್ನಿ : ಏನ್ ಹಾಕಿದೀನಿ...? ಹಾಕಿದ್ದೂ ಕಡಿಮ್ಯಾಗೈತಂತೆ...! ನೀನ್ ಹೇಳೋ ಸಣ್ಣೀರಾ ಮಾಳಪ್ಪನ ಕಥೆ
ಹೇಳು..
ಸಣ್ಣೀರ : ಇಂತಹ ಅಪ್ಪಟ ಬ್ರಾಮಣ ಮಾಳಪ್ಪನಿಗೆ ಒಂದು ಸಾರಿ ಮೀನು ತಿನ್ಬೇಕು ಅಂತ ಆಸೆ
ಶುರುವಾಯ್ತಂತೆ...!
ಬೀರ : ಬಾಪ್ಪರೇ....! ಆಮೇಲೆ...
ಸೀತೆ : ಅದ್ಕೇನಂತೆ ಪಟ್ಣದಾಗೆ ಯಾವುದಾದ್ರೂ ಹೋಟ್ಲಿಗೆ ಹೋಗಿದ್ರೆ ತಿನ್ ಬೋದಿತ್ತು...
ಸಣ್ಣೀರ : ಅವ್ನೂ ಅಂಗೇ ಯೋಚನೆ ಮಾಡಿದ್ನಂತೆ... ಆದ್ರೆ ಅವ್ನು ಹೋಟ್ಲಿಗೋಗಿ ಮೀನು ತಿಂದಿದ್ದು
ಜಾತಿಯವ್ರಿಗೆ, ಊರ್ನವ್ರಿಗೆ ಗೊತ್ತಾದ್ರೆ ಸುಮ್ನೆ ಬಿಡ್ತಾರಾ...?
ಡೋಂಟಿ : ಸೀತಕ್ಕಾ ಇಟ್ ಈಸ್ ಓಲ್ಡ್ ಸ್ಟೋರಿ..ಆಗಿನ ಕಾಲದಾಗೆ ಒಬ್ಬ ಬ್ರಾಮಣ ಮೀನು
ತಿನ್ನೋದಲ್ಲ.. ಮೀನು ಮುಟ್ಟಿದ ಅಂದ್ರೂನು ಮನೆಯಿಂದ ಹೊರಗಾಗ್ತಿದ್ರು, ಊರಿಂದ ಹೊರಗಾಗ್ತಿದ್ರು,
ಇಲ್ಲಾ ಜಾತಿಯಿಂದನೇ ಹೊರಗಾಗ್ತಿದ್ರು...!!
ಬೀರ : ಹೌದೌದು... ನಮ್ಮ ಕಿಟ್ಟಿ ಹೆಗ್ಡಿ ಚಿಗಪ್ಪ ಒಬ್ಬ ಬಾಡು ತಿನ್ನೋರ ಮನೇಲಿ ನೀರು ಕುಡಿದಿದ್ಕೇ ಒಂದು ವರ್ಷ ಕಟ್ಟು ಕೊಟ್ಟಿದ್ರು...!!
ಡೋಂಟಿ : ಕೇಳಿದ್ಯಾ...!?
ರತ್ನಿ : ಸಣ್ಣೀರಾ... ಆಮೇಲೇನಾಯ್ತು..?
ಸಣ್ಣೀರ : ಆಸೆ ಯೇನೋ ಮನಸಿನ್ಯಾಗಿತ್ತು... ಆದ್ರೆ ತನ್ನ ಊರಿನ ಜನಕ್ಕೆ, ಜಾತಿಗೆ, ಮರ್ಯಾದೆಗೆ ಅಂಜಿ
ಸುಮ್ನಿದ್ದ.. ಹೀಂಗೇ ವರ್ಸಗಳು ಕಳೆದುವು ಮುದುಕ ಆಗ್ತಾ ಬಂದ್ರೂ ಆಸೆ ಹೋಗಿರಲಿಲ್ಲ..
ಬಸ್ಯ : ಆಮೇಲೆ..?
ಸಣ್ಣೀರ : ಆಮೇಲೇನು ನೆನಪಾಗಾಗಲೆಲ್ಲ 'ಛೇ.. ಮೀನು ರುಚಿನೋಡ್ದೇ ಸಾಯ್ತೀನಲ್ಲಾ' ಅಂತ
ಮನಸಿನ್ಯಾಗೇ ಕೊರಗ್ತಾ ಇದ್ನಂತೆ... ಹೀಂಗೆ ಹತ್ತತ್ರ ಬೀರ್ಮಾಂವನಿಗಿಂತ ವಯಸ್ಸಾದಾಗೊಮ್ಮೆ 'ಮೈ
ಉಸಾರಿಲ್ಲ, ಕೈ ಕಾಲೆಲ್ಲ ಸೆಳೆತ ಡಾಕ್ಟ್ರು ಹತ್ರ ಹೋಗ್ಬೇಕು' ಅಂತ ದುಡ್ಡು ಇಸ್ಕೊಂಡು
ಪ್ಯಾಟಿಗೋಗಿದ್ನಂತೆ... ಡಾಕ್ಟ್ರು ಮನಿಗೋಗಾ ದಾರ್ಯಾಗೆ ಒಂದು ಹುರುದು ಮೀನ್ ಮಾರೋ ಅಂಗಡಿ
ಕಂಡ್ನಂತೆ...!
ಬೀರ : ತಗಾಳಪ್ಪಾ..... ಆಮೇಲೆ.
ಸಣ್ಣೀರ : ಮಾಳಪ್ಪುಗೂ ಮೀನು ತಿನ್ಬೇಕು ಅನ್ನ ಆಸೆ ಇತ್ತಲ್ಲ. ಆಗಿದ್ದಾಗೋಗ್ಲಿ ಅಂತ ಯೋಚ್ನೆ ಮಾಡಿ,
ಅತ್ತಿತ್ತಗೆ ನೋಡಿ ಆ ಮೀನಂಗಡಿ ಹೊಕ್ಕನಂತೆ...
ಬಸ್ಯ : ಬಡ್ಡಿ ಮಗಂದು ಆಸೆ ಸುಮ್ನೆ ಬಿಡ್ತೈತಾ...? ಬ್ರಾಮ್ಣ ಆದ್ರೇನು..? ಗೌಡಾದ್ರೇನು..? ಅದ್ಸರಿ
ಆಮೇಲೇನಾತು..?
ಸಣ್ಣೀರ : ಯಾವುದೋ ಮೀನು ತಗಂದ... ಅತ್ತಿತ್ತಗೆ ನೋಡ್ದ, ಸ್ವಲ್ಪ ತಿಂದ... ರುಚಿ ರುಚಿ ಇತ್ತು.. ಇಲ್ಲೇ
ಬಾಳಾ ಹೊತ್ತಿದ್ರೆ ಯಾರಾದ್ರೂ ಗುರುತಿದ್ದೋರು ನೋಡಿ "ಏನು ಭಟ್ರೆ ನೀವಿಲ್ಲಿ" ಅಂದ್ರೆ
ಮರ್ಯಾದುಳಿಯಾದಿಲ್ಲ ಅನ್ನೋದು ಗ್ಯಾಪನಾಗಿ ಬೇಗ ಬೇಗ ಗಬಗಬ ತಿನ್ನಕೋದ್ನಂತೆ... ಎತ್ತೆತ್ತಾಗೋ
ಆಗಿ ಒಂದು ದೊಡ್ಡ ಮುಳ್ಳು ಗಂಟ್ಳಾಗೆ ಸಿಕ್ಕಾಕಿ ಬಿಡ್ತಂತೆ....!!
ಸೀತೆ : ಛೇ..! ಅಯ್ಯೋ ಪಾಪ
ರತ್ನಿ : ಆಮೇಲೇನಾತು ಮುಳ್ಳು ತೆಗುದ್ರಾ....?
ಸಣ್ಣೀರ : ಹ್ಯಾಂಗೆ ತೆಗಿತಾರೆ ರತ್ನಕ್ಕಾ...? ಮುಳ್ಳು ಸಿಕ್ಕಿಕೊಂಡ್ ತಕ್ಸಣ ಮುದುಕ ಹೆದಿರಿ ಹೋಗಿದ್ದ.
ಅಲ್ಲಿದ್ದೋರೆಲ್ಲ ಮಾಳಪ್ಪ ಕೆಮ್ಮೋದ, ಕ್ಯಾಕರಿಸೋದ ನೋಡಿ... ಡಾಕ್ಟ್ರು ಮನಿಗೆ ಹೊತ್ಕೊಂಡು
ಹೋದ್ರಂತೆ, ಡಾಕ್ಟ್ರು ಬಂದು ನೋಡೋದ್ರೊಳಗೆ ಮುದುಕ ಗೊಟಕ್ ಅಂದಿದ್ನಂತೆ...
ಸೀತೆ : ಅಯ್ಯೋ ಶಿವನೇ ... ಮೀನು ತಿಂದದ್ದಕ್ಕೆ ಸತ್ತೋದ್ನಾ..!?
ಸಣ್ಣೀರ : ಮೀನು ತಿಂದಿದ್ದಕ್ಕೆ ಸತ್ನೋ... ! ಮರ್ಯಾದೆ ಹೋತಲ್ಲಾ ಉಳಿದೇನು ಪ್ರಯೋಜ್ನ ಅಂತ
ಪ್ರಾಣ ಬಿಟ್ನೋ..!! ಒಟ್ನಲ್ಲಿ ಬ್ರಾಮಣ ಮುದುಕ ಮೀನು ತಿಂದು ಸತ್ನಂತೆ ಅನ್ನೋದು ಸುದ್ಯಾತು...
ಡೋಂಟಿ : ಭೆಷ್.. ಸಕತ್ತಾಗಿ ಕಥೆ ಹೇಳ್ದೆ ಸಣ್ನೀರ.... ಸೀತಕ್ಕಾ ಸಮ್ಮಂದ ಗೊತ್ತಾಯ್ತಾ..?
ಸೀತೆ : ಗೊತ್ತಾಯ್ತು ಬಿಡು...
ಡೋಂಟಿ : ಈಗೇಳು ಚಿಗಪ್ಪಾ... ಮಾಳಪ್ಪ ಹುಟ್ಟಿದಾಗಿಂದ ಮಡಿ ಮೈಲಿಗೆ ಅಂತ ಸುದ್ದುವಾಗಿ ಬದುಕಿ
ಏನುಪಯೋಗಾತು..? ನೋಡು ಚಿಗಪ್ಪಾ ಯಾರಾದ್ರೂ ಅಷ್ಟೇ.. ಕೊನೇ ಗಳಿಗೇಲಿ ಯಾವುದೇ ಕೆಟ್
ಡಿಸಿಶನ್, ತೀರ್ಮಾನ ತಗಾಳಕೆ ಹೋಗ್ಬಾರ್ದು... ಹೋದ್ರೆ ಏನಾಕ್ತೈತಿ ಹೇಳೂ...
ಸೋಮ : ಇನ್ನೇನಾಕ್ತೈತಿ.... ಮಾಳಪ್ಪನ ಗತಿ ಆಕ್ತೈತಿ...
ಡೋಂಟಿ : ಅಷ್ಟೇ ಅಲ್ಲ... ಬಂಗಾರಪ್ಪನಂಗೆ ಸೋತು ಮೂಲ್ಯಾಗೆ ಕೂತ್ಕ ಬೇಕಾಕ್ತೈತಿ...!!
( ಹ್ಹ ಹ್ಹ ಹ್ಹ ಹ್ಹ )
ರತ್ನಿ : ಡೋಂಟಿ ನೀನು ಎಲ್ಲಿಗೋದ್ರೂ ಅಲ್ಲಿಗೇ ಬರ್ತೀಯ ನೋಡು.
ಡೋಂಟಿ : ಡೋಂಟ್ವರಿ ರತ್ನಕ್ಕಾ ಇಟ್ ಈಸ್ ಮೈ ಸ್ಪೆಷಾಲಿಟಿ....!!!
******************************
1 comment:
ಕಟ್ಟೆ ಮ್ಯಾಲಿನ ಮಾತಿನ ನ ಮೂಲಕ ,ಪ್ರಸ್ತುತ ಹಳ್ಳಿಯ ಜನರ ಮನಸ್ಥಿತಿಯ ನೈಜ ಚಿತ್ರಣವನ್ನು ನೀಡಿದ್ದೀರಾ.ನೀವು ಬಳಸಿದ ಭಾಷೆ,ಸಂಭಾಷಣೆ ಮತ್ತು ಕತೆ ಎಲ್ಲವೂ ಚೆನ್ನಾಗಿದೆ.
Post a Comment