ಆಘಾತ
ಮಾಘ ಮಾಸದ ಚಳಿಗಾಲವಾದ್ದರಿಂದ ಹೊರಗೆ ಇಬ್ಬನಿ ಮುಂಜಾವಿನಲ್ಲಿ ಸುರಿಯುತ್ತಿರುವ ಸೋನೆ ಮಳೆಯೇನೋ ಎಂಬಂತೆ ಬೀಳುತ್ತಿತ್ತು. ಹೊರಗೆ ಬಂದು ಇಣುಕಿದರೂ ಮುಖ ಕೈಗಳಿಗೆ ಚಳಿ ರಪ್ಪನೆ ತಾಕಿದಂತಾಗಿ ಕರುಳಿನಾಳದಿಂದ ನಡುಕದ ಅಲೆಯನ್ನು ಎಬ್ಬಿಸುವಂತಿತ್ತು. ಇಂತಹ ಚಳಿಯಲ್ಲೇ ಕೋಳಿ ಕೂಗುವ ಜಾವದಲ್ಲೇ ಎದ್ದ ಕರಿಯಪ್ಪ, ಚೌಡಪ್ಪರಿಬ್ಬರೂ ಕಣದಲ್ಲಿ ರಾತ್ರಿಯೇ ತುಂಬಿಸಿಟ್ಟಿದ್ದ ಭತ್ತದ ಚೀಲಗಳೊಂದೊಂದನ್ನೇ ಹೊತ್ತು ಎತ್ತಿನ ಗಾಡಿಗೆ ಹಾಕಿದರು. ಆದಷ್ಟು ಬೇಗೆ ಪೇಟೆಗೆ ಹೋಗಿ ಭತ್ತ ಒಡೆಸಿ, ಅಕ್ಕಿ ಮಾಡಿಸಿಕೊಂಡು ಹೊತ್ತು ನೆತ್ತಿಗೆ ಏರುವುದರೊಳಗೆ ವಾಪಸ್ಸು ಬರಬೇಕು ಎಂಬುದು ಒಂದು ಉದ್ದೇಶ ಹಾಗೂ ಪೇಟೆಗೆ ಹೋಗುತ್ತೇವಲ್ಲಾ ಎಂಬ ಉತ್ಸಾಹದಿಂದಾಗಿ ಅವರಿಗೆ ಇಂತಹ ಚಳಿಯ ಯಾವ ಘೋರ ಪ್ರಭಾವವೂ ಉಂಟಾಗುವಂತಿರಲಿಲ್ಲ. ಆದರೆ ಎತ್ತುಗಳನ್ನು ಬಲವಂತವಾಗಿ ಎಳೆದು ತಂದು ಗಾಡಿಗೆ ಕಟ್ಟಲೆತ್ನಿಸಿದಾಗ ಅವು ಪ್ರತಿಭಟಿಸಿದವು. ಕರಿಯಪ್ಪನ ಎತ್ತುಗಳು ಯಾವ ತೊಂದರೆಯನ್ನು ಕೊಡಲಿಲ್ಲವಾದರೂ, ಚೌಡಪ್ಪನ ಒಂದು ಕರಿ ಎತ್ತಂತೂ ಬೆಳ್ಳಂಬೆಳಿಗ್ಗೆ ಭಾರ ಹೊರಲು ಸುತಾರಾಂ ಒಪ್ಪದೆ ಮೇಲೇಳಲೇ ಇಲ್ಲ. ಬೇರೆ ವೇಳೆಯಲ್ಲಾದರೆ ಚೌಡಪ್ಪ "ಮ್.. ಮ್... ಹ್ಹ...ಹ್ಹ..ಹ್ಹ" ಎಂದು ಚಿಟಿಕೆ ಹೊಡೆದ ತಕ್ಷಣ 'ಗುಡುಗ್' ಎಂದು ಎದ್ದು ನಿಲ್ಲುತ್ತಿದ್ದ ಎತ್ತನ್ನು ಈಗ ಎಬ್ಬಿಸಲು ಚೌಡಪ್ಪ ಬಾರುಕೋಲಿನಿಂದ 'ಫಟಾರ್' ಎಂದು ಶಬ್ದ ಮಾಡಲೇ ಬೇಕಾಯ್ತು. ಅಂತೂ ಒಡೆಯನ ಚಳಿಬಿಡಿಸುವ ಆಯುಧದ ಶಬ್ದ ಕೇಳಿದ ಕರಿ ಎತ್ತು ಮನದಲ್ಲೇ ಒಡೆಯನನ್ನು ಶಪಿಸಿ ಎದ್ದು ನಿಂತು ತನ್ನ ದೇಹವನ್ನು ನೆಟ್ಟಗೆ ಮಾಡಿ ಲಟಿಗೆ ಮುರಿದು ಚೌಡನೊಂದಿಗೆ ನಡೆಯಿತು.
ಎತ್ತುಗಳ ಕೊರಳಿಗೆ ಗಾಡಿನೊಗವನ್ನಿಟ್ಟು ಗಾಡಿಯ ಮೂಕಿನ ಬದಿಯಿಂದ ಹಾರಿ ಹತ್ತಿಕುಳಿತ ಇಬ್ಬರೂ " ಹೈ.... ಹೈ..." ಎಂದು ಎತ್ತುಗಳು ಮುಂದೆಹೋಗಲು ಸೂಚನೆ ಕೊಟ್ಟರು. ಇವರೆಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೌಡಪ್ಪನ ಕಿರಿಮಗಳು ಮುದ್ದಿನಿಂದ ಸಾಕಿದ ಕಂತ್ರಿ ನಾಯಿ ಬಸವ ಪಟ್ಟಣಕ್ಕೆ ಹೋಗುವ ಆಸೆಯಿಂದ ಗಾಡಿಗಳನ್ನು ಹಿಂಬಾಲಿಸಲು ಬಯಸಿತಾದರೂ ಚಳಿಯ ತೀಕ್ಷಣತೆಗೆ ಅಂಜಿ ಬೂದಿಗುಡ್ಡೆಯ ಮೇಲಿನ ವೃತ್ತಾಕಾರದ ತನ್ನ ಶಯನ ಮುದ್ರೆಯನ್ನು ಮತ್ತಷ್ಟು ಬಿಗಿಗೊಳಿಸಿ ನಿದ್ರೆಗೆ ಜಾರಿತು.
ಕಲ್ಲಿನ ರಸ್ತೆಯಲ್ಲಿ ಗಡ-ಗಡ ಉರುಳುವ ಗಾಡಿಯ ಶಬ್ದದಿಂದಾಗಿ ಚೌಡ-ಕರಿಯಪ್ಪರಿಗೆ ಪರಸ್ಪರ ಮಾತನಾಡಲಾಗದಿದ್ದರೂ ಎತ್ತುಗಳಿಗೆ ಹಾ.... ವೂ.... ಎನ್ನುತ್ತ ಹೋಗುತ್ತಿದ್ದರು. ಅಲ್ಲಲ್ಲಿ ಮಣ್ಣಿನ ರಸ್ತೆಯಲ್ಲಿ ಗಾಡಿಯ ಹಳಿ ಸುಯ್ಯನೆ ಉರುಳುವಾಗ ಇಬ್ಬರಿಗೂ ಸುಮ್ಮನಿರಲಾಗುತ್ತಿರಲಿಲ್ಲ. ಕರಿಯಪ್ಪನೇನೋ ಕ್ಷಣಕ್ಕೊಂದು 'ಗಣೇಶ'ನ್ನ ಸುಟ್ಟು ಚಳಿ ಓಡಿಸುತ್ತಿದ್ದ. ಆದರೆ ಈ ಚಟಗಳಿಲ್ಲದ ಚೌಡಪ್ಪನಿಗೆ ಮಾತನಾಡಿ ಚಳಿ ಓಡಿಸದೆ ಗತ್ಯಂತರವಿರಲಿಲ್ಲ. ಹೀಗಾಗಿ ಕರಿಯನನ್ನು " ಈ ತರ ಇಬ್ನಿ ಬಿದ್ರೆ ಈ ವರ್ಸ ಸಂಪು ಮಳೆ ಆಕ್ತೈತಿ ನೋಡು" ಎಂದು ಮಾತಿಗೆಳೆದ, ಅದಕ್ಕೆ ಕರಿಯನೂ " ಇಬ್ನಿ ಬಿಳ್ಲಿ, ಬಿಳ್ದೆ ಇರ್ಲಿ ಮಲ್ನಾಡಲ್ಲಿ ಮಳಿಗೇನು ಕಮ್ಮಿ" ಎಂದು ಮಾತಿಗಿಳಿದ. ಹೀಗೆ ಶುರುವಾದ ಅವರ ಮಾತು ಊರಿನ ಗೌಡ-ಗೌಡರ ನಡುವಿನ ಒಳಜಗಳದ ಬಗ್ಗೆ, ಕಡೇ ಮನೆ ಕರಿಸ್ವಾಮಿ ಮಗಳು, ಸಣ್ಣ ಗೌಡರ ಮಗ ನಾಗರಾಜನೊಡನೆ ಓಡಿ ಹೋದುದರ ಬಗ್ಗೆ, ನಂತರದ ಆಗು-ಹೋಗುಗಳ ಬಗ್ಗೆ. ಅಂಗಡಿ ನಾಗಶೆಟ್ಟಿಯ ರಸಮಯ ಮಾತಿನ ಹಿಂದಿರುವ ಅವನ ಅಪಾರ ಅನುಭವಗಳ ಬಗ್ಗೆ... ಹೀಗೆ ಮಾತಿಗೊಂದು 'ಗತಿ' ಎಂಬುದಿರದೆ ಊರಿನ ಎಲ್ಲಾ ಸಂಗತಿಗಳ ಬಗ್ಗೆಯೂ ಮುಂದುವರಯುತ್ತಿತ್ತು. ಕರಿಯಪ್ಪನೇನೋ ಎತ್ತಿನ ಪಾಡಿಗೆ ಗಾಡಿಯನ್ನು ಬಿಟ್ಟು ಭತ್ತದ ಚೀಲಗಳಿಗೆ ಒರಗಿ ಮುದುಡಿ ಕುಳಿತಿದ್ದ. ಆದರೆ ಚೌಡಪ್ಪ ಮಾತ್ರ ತನ್ನ ಕರಿ ಎತ್ತಿನ ಹಿಕಮತ್ತಿನಿಂದಾಗಿ ಆಗಾಗ ರಸ್ತೆಯ ಅಂಚಿಗೆ ಹೋಗುತ್ತಿದ್ದ ಗಾಡಿಯನ್ನು ನಡುರಸ್ತೆಗೆ ತರುತ್ತಾ ಜಾಗೃತನಾಗಿಯೇ ಇದ್ದ.
ಹೀಗೆ ಆರೇಳು ಮೈಲಿ ಕ್ರಮಿಸುವಷ್ಟರಲ್ಲಿ ದೂರದ ಬೆಟ್ಟಗಳ ಸಂದಿಯಿಂದ ಕಪ್ಪನೆಯ ಇಬ್ಬನಿಯ ಹೊದಿಕೆಯನ್ನು ಕಷ್ಟಪಟ್ಟು ಸರಿಸುತ್ತಾ ದಿನಕರ ಮೇಲೇಳಲು ಪ್ರಯತ್ನಿಸುತ್ತಿದ್ದ. ಹೊನ್ನಿನ ಬಣ್ಣದ ರಶ್ಮಿಗಳು ಬಾನಂಚಿನಲ್ಲಿ ಓಕುಳಿ ಚೆಲ್ಲುತ್ತಿದ್ದಂತೆ ಹೆದರಿದಂತೆ ಕಂಡ ಚಳಿರಾಯ ನಿಧಾನವಾಗಿ ಓಡಲಾರಂಭಿಸಿದ. ಕೌದಿಯಂತೆ ಕಪ್ಪಗೆ ಕಾಣುತ್ತಿದ್ದ ಇಬ್ಬನಿಯ ದಟ್ಟ ಮಂಜು ಕ್ರಮೇಣ ಸೊಳ್ಳೆ ಪರದೆಯಂತಾಗಿ ಹತ್ತಿರ ಹತ್ತಿರ ಹೋದಂತೆ ಮಾಯವಾಗಲಾರಂಬಿಸಿತು. ನಿಚ್ಚಳವಾಗಿ ಸೂರ್ಯನ ಕಿರಣ ಮೈಗೆ ತಾಗುವ ವೇಳೆಗಾಗಲೇ ಚೌಡ-ಕರಿಯರು ಅಕ್ಕಿ ಗಿರಣಿಯ ಬಾಗಿಲಲ್ಲಿ ಗಾಡಿ ನಿಲ್ಲಿಸಿದರು.
ಮುಂದುವರೆಯುವುದು....
2 comments:
ಉತ್ತಮ ಆರಂಭ...ಪೂರ್ತಿ ಕತೆ ಕೇಳಲು ಕುತೂಹಲ ಉಳಿಸಲಿಕ್ಕೆ ಶೀರ್ಷಿಕೆಯೊಂದೇ ಸಾಕು...ಶೀಘ್ರದಲ್ಲೇ ಪೂರ್ತಿ ಕತೆ ಹೇಳಿ ಮುಗಿಸಿ...
Hai Parashu, kateyalli Bhashe haagu
Bhasheya balake chennagide.Grameena Parisara haagu
jeevanada chitrana kanna munde baruvantide. Munjaneya Manjina haagu Sooryodayada Varnane nanage bahala mecchuge aayitu. adu yava "aagatha" kaadideyo namage embudu tiliyadaagide . neenu namagaagi kaadirisiruva aa"aagata"vannu aadashtu bega bayalu maadi namma kutuhalavannu tanisuttiya endukondiddene .ninna akshara payana namma kanna munde haagu manada holage nirantaravaagi saagali endu manasaare bayasuttene haagu hruthpoorvakavaagi haaraisuttene
---endu nimmava
sacchi
Post a Comment