ಮೆಟ್ಟಿಲುಗಳು....
ಕಾಡುತ್ತಿವೆ ನನಗೆ
ಈ ಮೆಟ್ಟಿಲುಗಳು.
ಸುರುಳಿ, ಸುರುಳಿಯಾಗಿ ಮೇಲೇರಿ
ನಭಕೆ ಚುಂಬಿಸುತ್ತಿವೆ.
ಹತ್ತಲಾರೆನೆಂದು ಅಡಿಯಲ್ಲಿದ್ದೆ.
ಅಶಕ್ತ ಕೈಗಳಾಸರೆಯಲಿ ಹತ್ತಿಬಿಟ್ಟ.
ಹತ್ತಿದವನೊಬ್ಬ ಸುಲಭದಲಿ ಇಳಿದು;
ಮತ್ತೆ ಹತ್ತಿದ.
ನನ್ನೊಡನಿದ್ದವರು;
ನನ್ನಿಂದೆ ಬಂದವರು ಎಲ್ಲರೂ
ಮೆಟ್ಟಿಲುಗಳ ಏರಿ, ಮೀರಿ
ಮುಗಿಲೆಡೆ ಇದ್ದರು.
ನಾ ಮಾತ್ರ ಇದ್ದಲೇ ಇದ್ದೆ.
ದಿಟ್ಟಿಸುತ್ತಿದ್ದೆ ಅವನ್ನೇ,
ಮೂರ್ತವಾದ ಇವು
ಅಮೂರ್ತವಾದದ್ದೇನೋ ಹೇಳುತ್ತಿದ್ದವು.
ಅಮೂರ್ತವ ಅರ್ಥೈಸಿಕೊಳ್ಳುವುದರಲ್ಲಿ
ಮೀರಿತ್ತು ಮೆಟ್ಟಿಲೇರುವ ಸಮಯ.
******
ಕುರುಡ...
ರೈಲಿನಲ್ಲಿ ನಿದ್ದೆಯಲ್ಲಿದ್ದೆ,
ಇಂಪಾದ ಧ್ವನಿಯೊಂದು ತೇಲಿ ಬಂತು.
ಗಾನ ಕುರುಡನದು; ಬಿಕ್ಷೆಗಾಗಿ.
ಜನರು ಜಾಸ್ತಿ,
ಎದ್ದರೆ ಸ್ಥಾನ ವಂಚನೆಯ ಭಯ.
ಅಂತರಾತ್ಮ ಮರಗುತ್ತಿತ್ತು.
ತೊಳಲಾಟದಲ್ಲಿ ಅಂತಾತ್ಮ ಸೋತಿತು.
ನೋಡುತ್ತಿದ್ದೆ ಅವನನ್ನೇ...
ಇವುಗಳನ್ನೆಲ್ಲವ ಮೀರಿ ಮುಂದೆ ಸಾಗುತಿದ್ದ...
***** ಸಂತೋಷ್ ಸಿಹಿಮೊಗೆ
3 comments:
ಹಾಯ್ "ಸಾಧು" ಸಂತು, ನಿನ್ನ ಕವಿತೆಗಳನ್ನು ಓದುವ ಮುನ್ನವೇ ನಾನು ಈ ಪ್ರತಿಕ್ರಿಯೆಯನ್ನು ನೀಡುತಿದ್ದೇನೆ. ಕಳೆದ ಬಾರಿಯೇ ನಾನು ಈ ಮಾತನ್ನು ಹೇಳಬೇಕಿತ್ತು ಆದರೇಳಲಾಗಲಿಲ್ಲ.ಅದೇನೆಂದರೆ ನಿನ್ನ ಕವಿತೆಯೆಂಬ "ನದಿಯಲ್ಲಿ" ಸಾಮಾನ್ಯವಾಗಿ "ಒಳಸುಳಿಗಳಿರುತ್ತವೆ".ನನ್ನಂತ "ನೇರ ನೇರ"-"ಸೀದಾ ಸಾದಾ" ಬರೆಯುವ(ಕೊರೆಯುವ)ವನಿಗೆ ಅಂದರೆ ನನ್ನಂತ "ಜ್ಞಾನ ಶೂನ್ಯನಿಗೆ " ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ ಹಾಗು ತಡವಾಗುತ್ತದೆ .
ಆದ್ದರಿಂದ ನೀನು ಮುಂದಿನ ಬಾರಿ ಒಮ್ಮೆಲೇ ಎರಡು ಮೂರು ಕವಿತೆಗಳನ್ನು ಹಾಕುವ ಬದಲಾಗಿ; ನನ್ನಂತ "ಸಾಹಿತ್ಯದ ವಿದ್ಯಾರ್ಥಿಗೆ(ಇನ್ನೂ L.K.G. ಮಟ್ಟದಲ್ಲಿರುವವನಿಗೆ) ಅನುಕೂಲವಾಗುವಂತೆ ;ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಲು ಅನುವಾಗುವಂತೆ "ಒಂದು ಬಾರಿಗೆ-ಒಂದೇ ಕವಿತೆಯನ್ನು " ಹಾಕಿದರೆ ಚೆನ್ನಾಗಿರುತ್ತೆ . ಸಹಕರಿಸುವೆ ಎಂದು ನಂಬಿರುತ್ತೇನೆ. ಇಂದಿನ ಎರಡು ಕವಿತೆಗಳನ್ನು ಓದಿದ ನಂತರ ಮತ್ತೊಮ್ಮೆ ಪ್ರತಿಕ್ರಿಯಿಸುತ್ತೇನೆ
-----ನಿಮ್ ಹುಡ್ಗ
------ಸಕ್ಕತ್ ಸಚ್ಚಿ
ಸಂತೋಷ್ ನಿಮ್ಮ ಮೆಟ್ಟಿಲುಗಳು ಕವನ ಬಹಳ ಗಮನ ಸೆಳೆಯುತ್ತದೆ. ನಿಜವಾಗಲು ಎಲ್ಲರ ಜೀವನವೂ ಹಾಗೇನೆ ಆದರೆ ಮೇಲೆ ಏರಿದವರು ಹತ್ತುವುದು ಇಳಿಯುವುದರ ನಡುವೆ ಇಂದಿಪೆರೆನ್ಸ್ ಆಗಿರುತ್ತಾರೆ ನಮಗೆ ಅದು ದಿಪೆರೆನ್ಸ್ ಅನಿಸುತ್ತದೆ ಅದೇನೇ ಜೀವನ.
ದನ್ಯವಾದಗಳು
ರಮೇಶ್
ಹಾಯ್ ಸಂತು ,ನಿನ್ನ "ಮೆಟ್ಟಿಲುಗಳು" ಹಾಗು "ಕುರುಡ" ಕವನಗಳನ್ನು ಓದಿದೆ. ಮೆಟ್ಟಿಲುಗಳು ಕವನದಲ್ಲಿ ,ಒಬ್ಬ ವ್ಯಕ್ತಿ ಜೀವನದಲ್ಲಿ ಯಾವುದೇ ವಿಷಯದ ಬಗ್ಗೆ ,ತನ್ನೆದುರಿಗಿರುವ ಅವಕಾಶಗಳ ವಿಚಾರದಲ್ಲಿ ಸೋಜಿಗದಿಂದ ,ಕುತೂಹಲದಿಂದ ,ಮೂಕವಿಸ್ಮಿತನಾಗಿ ಮಂತ್ರಮುಗ್ದನಾಗಿ ಆಲೋಚನೆ ಮಾಡುತ್ತಾ ನಿಲ್ಲದೆ ಒಮ್ಮೆ ಅದನ್ನು ತಿಳಿಯಲು ಇಲ್ಲವೇ ತನ್ನದಾಗಿಸಕೊಳ್ಳಲು ಮುಂದಾಗಬೇಕು ಇಲ್ಲವೇ ತಾನು ನಿಂತಲ್ಲೇ ನಿಲ್ಲಬೇಕಾಗುತ್ತದೆ ,ತಾನು ಮುಂದಾಗಬೇಕು ಎನ್ನುವಷ್ಟರಲ್ಲಿ ಕಾಲಮೀರಿರುತ್ತದೆ ಎಂಬುದನ್ನು ಚೆನ್ನಾಗಿ ತಿಳಿಸಿದ್ದೀಯ.
"ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಜೀವನದಲ್ಲಿ ನಾವು ಆಶಕ್ತರಿಗಿಂತಲೂ ಆಶಕ್ತರೆನಿಸಿಕೊಂಡುಬಿಡುತ್ತೇವೆ"ಎಂಬ ಹೆಚ್ಚರಿಕೆಯನ್ನೂ ನೀಡಿರುವೆ.
ಇನ್ನು "ಕುರುಡ" ಕವನದಲ್ಲಿ ಒಂದು ಕೆಲಸವನ್ನು ನಿತ್ಯ ಮಾಡುವವನ ಮನಸಿಗೂ ನೋಡುವವನ ಕಣ್ಮನಸಿಗಳಿಗೂ ಇರುವ
ವ್ಯತ್ಯಾಸವನ್ನು ತೋರಿಸಿರುವೆ. ನೋಡುವವನಿಗೆ ಅಂತರಂಗದ ಕಣ್ಣು ತೇವವಾದರು ಕಾಲಾತೀತನಾಗಿ ಮುನ್ನುಗ್ಗುತ್ತಿರುವ ಕಣ್ಣಿಲ್ಲದವನಿಗೆ ಯಾವ ಪರಿವೆಯೂ ಇಲ್ಲ -ಇದೆ ನೋಡುವವನ ಮನಸ್ಥಿತಿಗೂ ಮಾಡುವವನ ಪರಿಸ್ಥಿತಿಗೂ ಇರುವ ವ್ಯತ್ಯಾಸ -ಇದೆ ಜೀವನ.
ಒಟ್ಟಿನಲ್ಲಿ ಎಂದಿನಂತೆ ಒಳಾರ್ಥಗಳನ್ನು ಒಳಗೊಂಡ ಎರಡು ಸರಳ(?!) ಸುಂದರ ಕವನಗಳನ್ನು ನೀಡಿರುವೆ ಸಂತು .ಇದು ಹೀಗೆ ಮುಂದುವರಿಯಲಿ .
ನಿನ್ನ ಕಥೆಗಳನ್ನು ನಾವು ಓದುವುದೆಂದು ಸಂತು?
ನಿನ್ನ ಕತೆಗಳ ನಿರೀಕ್ಷೆಯಲ್ಲಿ
------ಸಕ್ಕತ್ ಸಚ್ಚಿ
Post a Comment