ಮರೆವು' ಮನುಷ್ಯನ ಅತಿದೊಡ್ಡ ದೌರ್ಬಲ್ಯಗಳಲ್ಲೊಂದು. ಮನಸ್ಸು ಮೆದುಳಿನಲ್ಲುಳಿಸಿದ ವ್ಯಕ್ತಿ, ವಿಷಯ,
ವಸ್ತು, ಘಟನೆಗಳೆಲ್ಲಾ ನೆನಪುಗಳೆನಿಸಿದರೆ, ಉಳಿಸಿ ಅಳಿಸಿದವುಗಳೆಲ್ಲಾ ಮರೆವುಗಳೇ..!. ನಮ್ಮ
ಮೆದುಳಿನ ವೈಖರಿಯೇ ವಿಚಿತ್ರ. ನಾವು ಅಳಿಸಲೇ ಬೆಂಕೆಂದವುಗಳನ್ನೆಲ್ಲ ಉಳಿಸಿ ನೆನಪಾಗಿಸಿರುತ್ತದೆ.
ಉಳಿಸಲೇ ಬೇಕೆಂದವುಗಳನ್ನೆಲ್ಲ ಅಳಿಸಿ ಮರೆವಾಗಿಸಿರುತ್ತದೆ. ಸಾಮಾನ್ಯವಾಗಿ ನಮ್ಮ ಸಂತೋಷದ
ಕ್ಷಣಗಳು ಬಹುಬೇಗ ಮರೆತು ಹೋಗ್ತಾವಂತೆ. ನಮ್ಮ ದುಃಖದ ಕ್ಷಣಗಳು ಮಾತ್ರ ಮರೆಯದೇ ನೆನಪಾಗಿ
ಬಹುಕಾಲ ಕಾಡ್ತಾವಂತೆ. . ನಾನು ಮನೆಯಲ್ಲಿ ಪುಸ್ತಕವನ್ನೋ, ಪೆನ್ನನ್ನೋ, ಇನ್ನೇನನ್ನೋ ಇಟ್ಟಿದ್ದನ್ನು
ಮರೆತು ಆಮೇಲೆ ತಲೆಕೆಡಿಸ್ಕೊಂಡು ಹುಡುಕ್ತಾ ಇದ್ದಾಗ ನಮ್ಮಜ್ಜಿ ಹೇಳ್ತಿದ್ರು "ಎಲ್ಲಿ ಎಡಗೈಯಲ್ಲಿ
ಇಟ್ಟಿದ್ದೀಯೋ ನೆನಪು ಮಾಡ್ಕೋ" ಅಂತ.. ಸಿಕ್ಕಿದ ಮೇಲೆ ನೆನಪು ಮಾಡಿದ್ರೆ ಹೌದು ನಾನು
ಎಡಗೈಯಲ್ಲೇ ಎತ್ತಿಟ್ಟಿದ್ದು ನೆನಪಾಗ್ತಿತ್ತು. ಎಡಗೈಯಿಗೂ ನಮ್ಮ ಮೆದುಳಿಗೂ 'ಲಿಂಕ್' ಕಡಿಮೆ
ಇರಬಹುದೇನೋ..! ಇದರ ವೈಜ್ಞಾನಿಕ ಸತ್ಯಾಸತ್ಯತೆಗಳೇನೋ ಗೊತ್ತಿಲ್ಲ. ನೀವೂ ಅಷ್ಟೇ ಎಡಗೈಯಲ್ಲಿ
ಫೈಲ್ ಗಳನ್ನು ಎತ್ತಿಡುವಾಗ, ಅಥವಾ ಯಾರಿಗಾದ್ರೂ ಏನನ್ನಾದ್ರೂ ಕೊಡುವಾಗ ಕೊಂಚ ಯೋಚಿಸಿ..
ಹಿಂದಿನ ಪೀಳಿಗೆಗೆ ಹೋಲಿಸಿದ್ರೆ ಇಂದಿನವರ ನೆನಪಿನ ಶಕ್ತಿ ತುಂಬಾ ತುಂಬಾ ಕಡಿಮೆ. ಹಿಂದೆ ಋಷಿ
ಮುನಿಗಳು ವೇದೋಪನಿಷತ್ತುಗಳ ಅಖಂಡ ಶ್ಲೋಕಗಳನ್ನೆಲ್ಲಾ ನೆನಪಿಟ್ಟುಕೊಂಡು ಪಟಪಟನೆ
ಹೇಳುತಿದ್ರಂತೆ. ಆದ್ರೆ ನಮಗಿಂದು ಅಕ್ಕಪಕ್ಕದ ನಾಲ್ಕು ಸೆಕ್ಷನ್ ಗಳ ನಾಲ್ಕಂಕಿಯ ಇಂಟರ್ನಲ್ ಫೋನ್
ನಂಬರ್ ಗಳನ್ನು ನೆನಪಿನಲ್ಲಿ ಇಟ್ಕೊಳ್ಳೋದೂ ಸಹ ಸಾಧ್ಯವಾಗ್ತಾ ಇಲ್ಲ. ನಮ್ಮ ಮೆಮೋರಿ ಪವರ್
ನ್ನೆಲ್ಲಾ ಕೆ.ಬಿ., ಎಂ.ಬಿ, ಜಿ.ಬಿ.ಗಳ ಲೆಕ್ಕದಲ್ಲಿ ಮೊಬೈಲು, ಕಂಪ್ಯೂಟರ್ ಗಳಿಗೆ ಹಂಚಿ ಬಿಟ್ಟಿದ್ದೀವಾ..?
ಇರಬಹುದು. ನಾವು ನೆನಪಿಟ್ಟುಕೊಳ್ಳಬೇಕಾದವನ್ನೆಲ್ಲಾ ಅವುಗಳಿಗೆ ತುಂಬಿ ಹಾಯಾಗಿದೀವಿ ಅನ್ಸುತ್ತೆ.
ಮರೆವಿನಲ್ಲೂ ವೆರೈಟಿ, ವೆರೈಟಿ. ಕೆಲವರು ಕೊಟ್ಟಿದ್ದನ್ನು ಮರೆತರೆ, ಕೆಲವರು ಕೊಟ್ಟವರನ್ನೇ ಮರಿತಾರೆ.
ಕೆಲವರು ಇಸ್ಕೊಂಡಿದ್ದನ್ನು ಮರೆತರೆ, ಕೆಲವರು ಇಟ್ಟಿದ್ದನ್ನು ಮರಿತಾರೆ. ಕೆಲವರು ಹೇಳಿದ್ದನ್ನು ಮರೆತರೆ,
ಕೆಲವರು ಕೇಳಿದ್ದನ್ನು ಮರಿತಾರೆ. ಹೀಗೆ ಒಬ್ಬಬ್ಬರದೂ ಭಿನ್ನ-ವಿಭಿನ್ನ ಮರೆಗುಳಿತನ. ಕೆಲವರದು ಸಹಜ
ನೈಜ ಮರೆವಾದರೆ. ಇನ್ನು ಕೆಲವರದು 'ಜಾಣ ಮರೆವು'. ಮರೆಯದಿದ್ದರೂ ಮರೆತವರಂತೆ ನಟಿಸ್ತಾರೆ.
ನಿಜವಾಗಿಯೂ ಮರೆತವರಿಗೆ ಜ್ಞಾಪಿಸಬಹುದು. ಆದರೆ ಮರೆತಂತೆ ನಟಿಸುವವರಿಗೆ...!? ಕಷ್ಟ ಕಷ್ಟ...
ಎಲ್ಲರೂ
ಒಂದೊಂದು ರೀತಿಯ ಮರೆಗುಳಿತನದಲ್ಲಿ ನಿಪುಣರಾಗಿರುವಂತೆ ನನಗೂ ಒಂದು ವಿಧದ ಮರೆವಿದೆ.
ಏನಪ್ಪಾ ಅಂದ್ರೆ, ನನಗೆ ಕೆಲವರು ಪರಿಚಯವಾಗಿ ತುಂಬಾ ತುಂಬಾ ತುಂಬಾ ದಿನಗಳಾದಮೇಲೆ,
ಎಂದೋ ಒಂದು ದಿನ, ಎಲ್ಲೋ ಒಂದು ಕಡೆ ಭೇಟಿಯಾದಾಗ ಅವರ ಮುಖ ಚರ್ಯೆ ತಿಳಿಯುತ್ತೆ. ಅವರು
ಯಾರು ಅನ್ನೋದು ಜನರೇಟರ್ ಆನ್ ಆಗೋ ತರ ಹೊಳೆಯುತ್ತೆ. ಆದ್ರೆ ಅವರ ಹೆಸರು ಮಾತ್ರ
ತಿಪ್ಪರಲಾಗ ಹಾಕಿದ್ರೂ ನೆನಪಿಗೇ ಬರಲ್ಲ. "ಓ ಹೋ ಹೋ ನಮಗೂ ಹೀಗೇ ಆಗುತ್ತೆ ಬಿಡಪ್ಪಾ " ಅಂತ
ಅನ್ಕೊಳ್ತಿದೀರಾ..? ನಿಮಗೂ ನನಗೂ ವ್ಯತ್ಯಾಸ ಇದೇರೀ...! ನಿಮ್ಮಲ್ಲಾದ್ರೆ ನೀವೂ ಮರೆತಿರ್ತಿರ,
ಅವರೂ ಮರೆತಿರ್ತಾರೆ. so ನೆನಪಿಸಿಕೊಳ್ಳೋ ಪ್ರಮೇಯವೇ ಇಲ್ಲ. ನನಗೆ ಹಾಗಲ್ಲ. ನಾನು
ಮರೆತಿರ್ತೀನಿ ಆದ್ರೆ ಅವರು ಮರೆತಿರೋದಿಲ್ಲ. ಎಲ್ಲೇ ಸಿಕ್ಕಿದ್ರೂ, ಎಷ್ಟೇ ಜನರ ನಡುವೆ ಇದ್ರೂ "ಹಾಯ್
ಪರಶು" ಅಂತ ಮಾತಾಡ್ಸಿರ್ತಾರೆ.. ಯಾಕೆ ಗೊತ್ತಾ ಯಾರು ಬೇಕಾದ್ರೂ ನೆನಪಿಟ್ಟುಕೊಳ್ಳುವಂತಿದೆ ನನ್ನ
ಸ್ಟ್ರಕ್ಚರ್..! ಹಾಗೇ ನನ್ನ ಹೆಸರು..!! ಹೆಸರಿಗೆ ತಕ್ಕಂತೆ ಕೈಯಲ್ಲೊಂದು 'ಪರಶು' ವಿಲ್ಲದ ಕಾವು...!!!
ಒಂದ್ಸಾರಿ
ಹೀಗೇ ಆಯ್ತು..
ಬಸ್
ಗಾಗಿ ಕಾಯ್ತಾ ಸಾಗರದ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದೆ. (ಬಸ್ ಸ್ಟ್ಯಾಂಡಿನಲ್ಲಿ ಬಹುಪಾಲು ಮಂದಿ ಬಸ್
ಗಾಗಿಯೇ ಕಾಯ್ತಾ ನಿಂತಿರ್ತಾರೆ. ಹಾಗೆ ನಾನೂ ನಿಂತಿದ್ದೆ.) ಹೀಗಿರುವಾಗ ಹಿಂದಿನಿಂದ ಯಾರೋ ನನ್ನ
ಭುಜದ ಮೇಲೆ ಕೈ ಇಟ್ಟಂತಾಯ್ತು. ತಿರುಗಿದೆ, ನನಗಿಂತಲೂ ಎರೆಡಿಂಚು ಎತ್ತರದ, ದಷ್ಟಪುಷ್ಟ ದೇಹದ,
ದುಂಡು ಮುಖದ ವ್ಯಕ್ತಿಯೊಬ್ಬ ನನ್ನ ಪ್ರಶ್ನೆಗೂ ಅವಕಾಶ ಕೊಡದೆ. ನನ್ನ ಪ್ರಶ್ನಾರ್ಥಕ ಮುಖಭಾವವನ್ನೂ
ಅರ್ಥೈಸಿಕೊಳ್ಳದೆ, "ಹಾಯ್ ಪರಶು ಹೇಗಿದೀಯಾ..?" ಅಂದ. ನಾನು ನನ್ನೊಳಗಿನ ಅನುಮಾನವನ್ನು
ತೋರಗೊಡದೆ. ನನ್ನ ಹೆಸರಿಡಿದು ಕರೆಯುವ ಈತ ನನ್ನ ಗತಕಾಲದ ಗೆಳೆಯನಿರಬೇಕೆಂದು ಊಹಿಸಿ.
"ಆರಾಮಿದೀನಿ, ನೀವು ಹೇಗಿದೀರಾ..?" ಎಂದೆ. ತಕ್ಷಣ "ಏನೋ ಬಹುವಚನದಲ್ಲಿ ಕರೆಯುವಷ್ಟು
ದೊಡ್ಡವನಾಗಿಬಿಟ್ಟಿದೀಯಾ..?" ಎಂದು ಕುಟುಕಿದ. ಇದೊಳ್ಳೆ ಗ್ರಹಚಾರ ಮರ್ಯಾದೆ ಕೊಟ್ರೂ ಜನ
ಮುನಿಸಿಕೊಳ್ತಾರಲ್ಲಪ್ಪಾ ಎಂದೆಣಿಸಿದ ನಾನು "ನೀನು ಹೇಗಿದೀಯಾ? ಎಲ್ಲಿದೀಯಾ?" ಎಂದೆಲ್ಲಾ
ಕೇಳಿದೆ. ಅವನು ತಾನು ಮಿಲಿಟ್ರಿಗೆ ಸೇರಿ ಶಿಮ್ಲಾದಲ್ಲಿರುವುದೆಂದೂ, ಏಳೆಂಟು ವರ್ಷಗಳ ನಂತರ ಇಲ್ಲಿಗೆ
ಬಂದಿರುವುದೆಂದೂ ಹೇಳಿದ. ಅಷ್ಟರಲ್ಲಾಗಲೇ ಅವನ ಮುಖಚರ್ಯೆಯನ್ನು ನನ್ನ ಮೆದುಳು ಕಂಡು
ಹಿಡಿದಿತ್ತು. ಅವನ ಹೆಸರಿನ ಹುಡುಕಾಟಕ್ಕೆ ಮನಸ್ಸು ತೊಡಗಿತ್ತು. ಇಷ್ಟು ಆತ್ಮೀಯನಾಗಿ
ಮಾತನಾಡುವಾಗ ನಿನ್ನ ಹೆಸರೇನೆಂದು ಕೇಳಿ ಮುಜುಗರ ಪಟ್ಟುಕೊಳ್ಳಲು ಮನಸ್ಸು ಒಪ್ಪಲಿಲ್ಲ.
ಸುಮ್ಮನಾದೆ. ಅಷ್ಟರಲ್ಲಾಗಲೇ ಪಕ್ಕದಲ್ಲಿದ್ದ ಪವಿತ್ರ ಹೋಟೆಲ್ ನಲ್ಲಿ ಚಹಾ ಕುಡಿಯೋಣವೆಂದು
ಒತ್ತಾಯಿಸಿದ. ಒತ್ತಾಯಕ್ಕೆ ಮಣಿದೆ. ಬೇಡ ಬೇಡವೆಂದರೂ ಮಸಾಲೆ ದೋಸೆಗೂ ಆರ್ಡರ್ ಮಾಡಿದ.
ನಾನು ಯಾಂತ್ರಿಕವಾಗಿ ಅವನೊಡನೆ ಮಾತನಾಡುತ್ತಿದ್ದೆ. ಮನಸ್ಸು 'ಯಾರಿವನು.?' ಅಂತ
ಯೋಚಿಸುತ್ತಿತ್ತು. ಹೀಗೆ ಇಬ್ಬರ ನಡುವಿನ ಉಭಯ ಕುಶಲೋಪರಿಯ ನಡುವೆಯೇ ಅವನು ನಮ್ಮ
ಹೈಸ್ಕೂಲು, ಅಲ್ಲಿನ ಶಿಕ್ಷಕರ ಬಗ್ಗೆ ಮಾತನಾಡಿದಾಗ ಇವನು 'ಹೈಸ್ಕೂಲು ಗೆಳೆಯ' ಎಂಬುದು
ಖಾತ್ರಿಯಾಯಿತು. ದೋಸೆ ತಿನ್ನುತ್ತಿದ್ದಾಗ ಕಳೆದ ಹೈಸ್ಕೂಲು ದಿನಗಳನ್ನು ನೆನಪಿಸಿದ. ಮುಂದಿನ
ಬೆಂಚಿನ ಹುಡುಗಿಯರನ್ನು, ಅವರಿಗೆ ಕೊಡುತ್ತಿದ್ದ ಕೀಟಲೆಗಳನ್ನು ನೆನೆನೆದು ನಗುತ್ತಿದ್ದ. ನಾನು ತುಟಿ
ಬಿಚ್ಚಿ ನಗುತ್ತಲೇ ಮನದಲ್ಲಿ ಮೌನವಾಗಿದ್ದೆ.! ಹೈಸ್ಕೂಲಿನ ಪ್ರತಿ ಬೆಂಚಿನ ಹುಡುಗರನ್ನೂ
ನೆನಪಿಸಿಕೊಂಡು ಇವನ ಹೆಸರು ಹುಡುಕುತ್ತಿದ್ದೆ. ಶಂಕ್ರ, ಶೇಖ್ರ, ಮುಕುಂದ, ರಾಘು,.... ನೆನಪಾದರೇ
ಹೊರತು ಇವನ ಹೆಸರೇ ನೆನಪಿಗೆ ಬರಲಿಲ್ಲ. ಅದಾಗಲೇ ಅರ್ಧ ದೋಸೆ ತಿಂದಿದ್ದೆ.
ಅವನಿಗೇನನ್ನಿಸಿತೋ ಏನೋ, ನನ್ನ ಮೌನ ಅವನ ಅನುಮಾನಕ್ಕೆ ಕಾರಣವಾಯಿತೋ ಅಥವಾ ಅವನ
ಮಾತಿನ ರಭಸಕ್ಕೆ ನಾನು ಹೊಂದಿಕೊಳ್ಳಲಾಗದೇ ಚಡಪಡಿಸುತ್ತಿದ್ದುದು ತಿಳಿಯಿತೋ ಗೊತ್ತಿಲ್ಲ " ಅದ್ಸರಿ
ನಾನು ಯಾರು ಅಂತ ಗೊತ್ತಾಯ್ತಾ..!?, ನನ್ನ ಹೆಸರು ಹೇಳು ನೋಡೋಣ..?" ಎಂದ. ನನಗೆ ಅರ್ಧ
ತಿಂದಿದ್ದ ದೋಸೆ ಅಜೀರ್ಣವಾಗಿ ಹೊರಬಂದಂತಾಯ್ತು..! ಕುಡಿದ ಚಹಾ ನಾಲಿಗೆಯಲ್ಲೇ ಆವಿಯಾದಂತಹ
ಅನುಭವ.!! ಮಾತಿಗೆ ತಡವರಿಸಿದೆ, ಪದಗಳಿಗೆ ಹುಡುಕಾಡಿದೆ.. ಪಾಪಿ ಮೊದಲೇ ಹೀಗೆ
ಕೇಳಬಾರದಿತ್ತಾ..? ದೋಸೆ ತಿನ್ನಲುಕೊಟ್ಟು ನನ್ನ ಪರೀಕ್ಷೆ ಮಾಡೋದಾ..? ಮನದಲ್ಲೇ ಶಪಿಸಿದೆ.
ವಾಸ್ತವಿಕತೆಯನ್ನು ತೆರೆದಿಟ್ಟೆ. ಅವನಾಗಿಯೇ ತನ್ನ ಹೆಸರು ಹೇಳುವಂತೆ ಬೇಡಿಕೊಂಡೆ. ಹು.. ಹುಂ. ಆತ
ಹೇಳಲಿಲ್ಲ. ನನ್ನ ಬಾಯಿಂದಲೇ ಕೇಳಬೇಕೆಂದು ಪಣತೊಟ್ಟಂತಿತ್ತು..! "ನಾನು ಹೇಳೊಲ್ಲ ನೀನೇ
ಯೋಚಿಸಿ ಈ ಅರ್ಧ ದೋಸೆ ಖಾಲಿಯಾಗುವಷ್ಟರಲ್ಲಿ ಹೇಳು" ಎಂದ. ಅರ್ಧ ದೋಸೆ ತಿನ್ನಲು
ಅರ್ಧಗಂಟೆ ಟೈಂ ತಗೊಂಡೆ. ಇಲ್ಲ ನನಗೆ ಹೊಳೆಯಲೇ ಇಲ್ಲ. ಇಂತಹ ಹತ್ತು ದೋಸೆ ತಿನ್ನುವ ಸಮಯ
ಕೊಟ್ಟಿದ್ದರೂ ನನಗೆ ಅವನ ಹೆಸರು ಹೊಳೆಯುವುದು ಕಷ್ಟವಿತ್ತು. ಕೊನೆಗೂ ಹಾಳಾದವನು ತನ್ನ ಹೆಸರು
ಹೇಳಲಿಲ್ಲ. ಬದಲಿಗೆ "ನನ್ನ ಹೆಸರು ನೆನಪಾದಾಗ ಫೋನ್ ಮಾಡು" ಎಂದು ಫೋನ್ ನಂಬರ್ ಕೊಟ್ಟು
ಹೊರಟು ಹೋದ.. ಯೋಚಿಸಿದೆ.. ಯೋಚಿಸಿದೆ.. ಏಷ್ಟೇ ಯೋಚಿಸಿದರೂ ನೆನಪಿನಾಳಕ್ಕೆ ಇಳಿಯದೇ
ಸೋತು ಸುಣ್ಣವಾಗಿದ್ದ ನನ್ನ ಬುದ್ದಿಯನ್ನು ಶಪಿಸಿದೆ. ಅರ್ಧ ತಾಸಿನ ನಂತರ ಆ ನಂಬರ್ ಗೆ ಡಯಲ್
ಮಾಡಿ " ಹಲೋ ಯಾರು?" ಎಂದೆ. "ನಾನು ಗುರುಪ್ರಕಾಶ್ ಅಂತ ತಾವ್ಯಾರೂ.." ಅಂದಿತು ಅವನ
ಧ್ವನಿ. "ನಾನು ಕಣೋ ಗುರುಪ್ರಕಾಶ ಈಗಷ್ಟೇ ನಿನ್ನೊಡನೆ ದೋಸೆ ತಿಂದವನು" ಎಂದು ಗಹಗಹಿಸಿ
ನಕ್ಕೆ...
ಅವತ್ತೇ
ಕೊನೆ ಯಾರೇ ಆದ್ರೂ ಪೂರ್ಣ ಪರಿಚಯವಾಗೋ ವರೆಗೆ ಏನೇ ಕೊಟ್ರೂ ತಿನ್ನಲ್ಲ, ಕುಡಿಯೊಲ್ಲ..
ಮರೆವಿನ ಬಗ್ಗೆ ಬರೆಯಲು ಹೊರಟಾಗ ಮರೆತಿದ್ದೆಲ್ಲಾ ನೆನಪಾಯಿತು...!!!
2 comments:
ಮರೆಯುವುದು ಮನುಷ್ಯನ ಸಹಜ ಗುಣ .ಅದೇನೋ ಹೇಳ್ತಾರಲ್ಲ ಕಾಲ ಎಲ್ಲವನ್ನು ಮರೆಸುತ್ತದೆ ಅಂತ ಹಾಗೆ ಕಾಲ ಮೀರಿ ನಾವು ಎಲ್ಲವನ್ನು ನೆನಪಿಟ್ಟಿಕೊಳ್ಳುವುದು ಸ್ವಲ್ಪ ಕಷ್ಟವೇ.ನಿಮ್ಮ ನಿಜ ಬದುಕಿನಲ್ಲಿ ನಡೆದ ಘಟನೆಯೊಂದನ್ನು ಆದರಿಸಿ ನೀವು ಮರೆವಿನ ಬಗ್ಗೆ ಬರೆದಿರುವ ಲೇಖನವು ಬಹಳ ಸರಳವಾಗಿ ಹಾಗು ವಾಸ್ತವಿಕವಾಗಿ ಮೂಡಿ ಬಂದಿದೆ .ಇಂಥ ಇಕ್ಕಟ್ಟಿನ ಪೇಚಿನ ಹಾಗು ಮುಜುಗರದ ಸನ್ನಿವೇಶಗಳು ಯಾರ ಬದುಕಿನಲ್ಲಾದರು ನಡೆಯಬಹುದಾದನ್ತದ್ದು.ಗೆಳೆಯರ ಹೆಸರುಗಳನ್ನು ನೆನಪಿಸಿಕೊಳ್ಳಲು ನಾನು ಕಂಡುಕೊಂಡಿರುವ ಒಂದು ಸುಲಭ ವಿಧಾನವೆಂದರೆ ಅವರಿಗೆ ಅಡ್ಡ ಹೆಸರುಗಳು ,ಗಿಡ್ಡ ಹೆಸರುಗಳನ್ನು ಕಟ್ಟುವುದು ಇಲ್ಲವೇ ಅವರಿಗೆ ಏನಾದರು ಒಂದು ಬಿರುದನ್ನು ನೀಡುವುದು .ಪರಶು ,ಸಾಧ್ಯವಾದರೆ ಒಮ್ಮೆ ಪ್ರಯತ್ನಿಸಿ ನೋಡಿ-ನಿಮ್ಮನ್ನೆಂದು ಮರೆಯದ ಸಚ್ಚಿ
ಆತ್ಮೀಯ ಪರಶು ,ನಿನ್ನ ಮರೆವಿನ ಲೇಖನಾನುಭವ ಓದಿ ನಾನೊಂದೆರಡು ಹಂಚಿಕೊಳ್ಳೋಣ ಅನ್ನಿಸಿತು ...ನಿನಗಾಗಿರುವ ಈ ಅನುಭವ ಎಲ್ಲರೂ ಒಂದಲ್ಲ ಒಂದು ಸಾರಿ ಅನುಭವಿಸಿ ಮುಜುಗರಕ್ಕೆ ಒಳಗಾಗಿರುತ್ತೇವೆ...ನಿನ್ನ ಲೇಖನದಲ್ಲಿ ಮರೆವು ಅತಿ ದೊಡ್ಡ ದೌರ್ಬಲ್ಯ ಎಂದು ಹೇಳಿರುವುದು ಸತ್ಯ ವಾದರೂ "ಮರೆವು" ಮಾನವನೆಂಬ ಪ್ರಾಣಿಗೆ ದೇವರು ಕೊಟ್ಟ ದೊಡ್ಡ ವರ ಎಂಬುದು ನನ್ನ ಅನಿಸಿಕೆ ಯಾಕೆಂದರೆ ಮನುಷ್ಯನ ಜೀವನದಲ್ಲಿ ನಡೆದುದೆಲ್ಲವೂ ಮನುಷ್ಯ ತನ್ನ ಸ್ಮೃತಿ ಪಟಲದಲ್ಲಿಟ್ಟು ಕೊಳ್ಳುವಂತಿದ್ದರೆ ಮಾನವರೆಲ್ಲ ಮಾನವರಗಿರಲು ಸಾದ್ಯವಿಲ್ಲ ....ತನ್ನ ಜೀವನದಲ್ಲಿ ನಡೆದ ಎಲ್ಲ ದುಃಖಕರ ಅನುಭವವೆಲ್ಲ ತನ್ನ ನೆನಪಿನಲ್ಲಿ ಉಳಿಯುವನ್ತಿದ್ದರೆ ಅವನ ಸ್ಥಿತಿ ಉಹಿಸಲಾಸದ್ಯ...ಅವನು ಬಹುಬೇಗ ತನ್ನ ಪ್ರೀತಿ ಪಾತ್ರರ ಸಾವಿನಿಂದ ಅದ ಆಘಾತವನ್ನು ಕ್ರಮೇಣ ಮರೆಯುತ್ತಾನೆ ..ಅದರ ತೀವ್ರತೆ ದಿನದಿನಕ್ಕೂ ಕಡಿಮೆಯಾಗುತ್ತದೆ ...ಪ್ರಿಯತಮೆಯಿಂದ ಆದ ಮೋಸವನ್ನು ಬಹು ಬೇಗ ಅದರ ಹ್ಯಾಂಗ್ ಓವರ್ ನಿಂದ ಹೊರಬರುತ್ತಾನೆ...
ಏನೇ ಆಗಲಿ ನಿನ್ನ ಲೇಖನದಲ್ಲಿ ಮನೋವ್ಯಜ್ಞಾನಿಕ ಮತ್ತು ವ್ಯಜ್ಞಾನಿಕವಾಗಿ ಚಿಂತಿಸಿ ಬರೆದಿದ್ದರೆ ಇನ್ನು ಪರಿಣಾಮಕಾರಿಯಾಗಿರುತಿತ್ತು ....
Post a Comment