ನಮಸ್ತೆ...
ನಿಮ್ಮನ್ನ ಭೇಟಿಯಾಗಿ ಸುಮಾರು 500 ದಿನಗಳೇ ಕಳೆದು ಹೋಗಿವೆ. ಈ 500 ದಿನಗಳಲ್ಲಿ ಜೀವನ 'ಅನಿಶ್ಚಿತ ತಿರುವುಗಳ ಕತೆ' ಥರ ಅನ್ನೋದು ನಂಗೆ ಮನದಟ್ಟಾಗಿದೆ. ಅದೇ ರೀತಿ ಮತ್ತೆಂದೂ ಸಚಿವಾಲಯದಲ್ಲಿ ನಾನು - ನೀವು ಹೀಗೆ ಎದುರು ಬದುರು ಕೂತು ಪುರುಸೊತ್ತಿಂದ ಮಾತಾಡೋದು ಸಾಧ್ಯ ಇಲ್ಲ ಅನ್ಕೊಂಡಿದ್ದೆ ನಾನು. ಆದರೆ ಅದು ಸುಳ್ಳು ಅಂತ ಸಾಬೀತಾಯ್ತು. ಮೊನ್ನೆ ಜೂನ್ 25ಕ್ಕೆ.
ಹೌದು ನಾನು ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆನ ನನ್ನದಲ್ಲ ಅಂತ ಮರೆತು ಮತ್ತೆ ಸಚಿವಾಲಯ ಸೇರಿದೀನಿ. ಮೊನ್ನೆ ಜೂನ್ 25ಕ್ಕೆ ಇಲ್ಲಿಗೆ ಬಂದು ಹಾಜರಾಗಿದೀನಿ. ಬಂದ ಕೂಡ್ಲೇ ನಿಮ್ಮನ್ನೆಲ್ಲ ವಿಚಾರಿಸೋಣ ಅನ್ಕೊಂಡಿದ್ದೆ. ಆದ್ರೆ ಯಾರು ಯಾರು ಎಲ್ಲೆಲ್ಲಿದಾರೆ ಹೇಗೆಲ್ಲ ಬದಲಾಗಿದಾರೆ ಅಂತ ತಿಳ್ಕೊಂಡು ಮಾತಾಡೋಣ ಅಂತ 20 ದಿನ ಕಾದು ಈಗ ಬರೀತಾ ಇದೀನಿ.
ನಿಖರವಾಗಿ ಹೇಳೋದಾದ್ರೆ ನಾನು ಇಲ್ಲಿಂದ ಅಲ್ಲಿಗೆ ಹೋಗಿ ಇಂದಿಗೆ 546 ದಿನ ಆಯ್ತು. ಆದರೆ ಈ ಬ್ಲಾಗ್ ತಾಣದಲ್ಲಿ ಕೊನೆಯದಾಗಿ ನಾನೇ ಬರೆದದ್ದು 27 ಅಕ್ಟೋಬರ್ 2010ಕ್ಕೆ. ಅಂದರೆ 626 ದಿನಗಳ ಹಿಂದೆ.
ಈ 'ಅನವಶ್ಯಕ' ಲೆಕ್ಕ ಯಾಕೆ ಕೊಡ್ತಿದೀನಿ ಅಂದ್ರೆ ನಮ್ಮ ಜೀವನ ಹೇಗೆ ದಿನಗಳ ಪರಿವೆಯಿಲ್ಲದೆ ಸಾಗುತ್ತೆ ಅನ್ನೋದಕ್ಕೆ ನಿದರ್ಶನವಾಗಲಿ ಅನ್ನೋ ಕಾರಣಕ್ಕೆ. ದೇವರು ನಮ್ಮ ಆಯುಷ್ಯದ ಅಕೌಂಟಲ್ಲಿ ಹೆಚ್ಚು ಅಂದ್ರೆ 100 ವರ್ಷ ನಮ್ಮ ಖರ್ಚಿಗೆ ಜಮೆ ಮಾಡಿ ಕಳಿಸಿರ್ತಾನೆ ಅನ್ಕೊಳೋಣ. ನಮ್ಮ ಹತ್ತಿರ ಇರೋ 10 ರೂಪಾಯಿಗೂ ಪಕ್ಕಾ ಲೆಕ್ಕ ಇಡುವ ನಾವು ಸುಮಾರು 36500 ದಿನಗಳ ಬಗ್ಗೆ ಅದೆಷ್ಟು ಅಜಾಗರೂಕತೆಯಿಂದ ಇರ್ತೀವಿ ಅಂತ ಸುಮ್ನೆ ಮೇಲ್ನೋಟದ ವಿಮರ್ಶೆ ಮಾಡೋಣ.
ಹೋಗ್ಲಿ. ಈ ಖಾಲಿ ಪೀಲಿ ಮಾತು ಬಿಡೋಣ. ವಿಷಯಕ್ಕೆ ಬರೋಣ.
ಇಷ್ಟು ದಿನಗಳ ವಿರಾಮದಲ್ಲಿ ನಮ್ಮಲ್ಲನೇಕರು ಬದಲಾಗಿದೀವಿ. ಮಾನಸಿಕವಾಗಿ - ವೈಚಾರಿಕವಾಗಿ. ಒಟ್ಟು ಏನಾದರೊಂದು ವಿಷಯದಲ್ಲಿ ಮೊದಲಿಗಿಂತ ನಮ್ಮ ಸಂಪತ್ತು ವೃದ್ಧಿಯಾಗಿದೆ ಅನ್ಕೊಳೋಣ. ಬುದ್ಧಿ - ಹಣ - ಜ್ಞಾನ. ಏನೂ ಇಲ್ಲ ಅಂದ್ರೆ ಹೊಟ್ಟೆ(ಬೊಜ್ಜು)ಯಾದ್ರೂ ಬಂದಿರ್ಬೇಕು. ಹೀಗೆ ಕಾಲಾನುಕ್ರಮದಲ್ಲಿ ವೃದ್ಧಿಯಾಗಿರುವ ನಮ್ಮ ಜ್ಞಾನ ಸಂಪತ್ತನ್ನ - ವೈಚಾರಿಕ ಸಂಪತ್ತನ್ನ ಕೊಳೆಯಲು ಬಿಡದೆ ಮತ್ತೆ ಹಂಚಿಕೊಳ್ಳೋ ಸಮಯ ಬಂದಿದೆ. ನಮ್ಮ ಈ ವಿಚಾರ ಚಾವಡಿಯನ್ನ ಮತ್ತೊಮ್ಮೆ ಪ್ರಾರಂಭಿಸೋಣ. ನೀವೇ ಸ್ವಂತ ಹೆಣೆಯುವ ಕಥೆ - ಕವನ ಕಳಿಸಿ. ನಿಮ್ಮ ಸ್ನೇಹಿತರು ಓದಿ ನಿಮಗೆ ಪ್ರೋತ್ಸಾಹ ನೀಡೋದಿಕ್ಕೆ ಕಾಯ್ತಿದಾರೆ. ಅದೇ ಕನ್ನಡ ಚಿತ್ರ ರಂಗದ ಕೆಲ ನಿರ್ದೇಶಕರು ಮಾಡೋ ಹಾಗೆ ಬೇರೊಬ್ಬ (ಕಲಾ)ಕೃತಿ ಗಳಿಂದ ಸ್ಫೂರ್ತಿ ಪಡೆದು ನಿಮ್ಮದೆಂದು ಹೇಳಿಕೊಳ್ಳಬಹುದಾದ ನಿಮ್ಮತನ ಇರುವ ಕೃತಿಗಳನ್ನು ಕಳಿಸಿಕೊಡಿ. ಹಂಚಿಕೊಳ್ಳೋಣ. ಜ್ಞಾನ ಯಾವ ಬಿಲದಿಂದ ಬಂದ್ರೂ ಸ್ವೀಕರಿಸ್ಬೇಕು ಅಂತ ಗುರುಪ್ರಸಾದ್ ಅವ್ರು ಮಠ ಸಿನ್ಮಾದಲ್ಲಿ ಹೇಳಿಲ್ವೇ ? ಹಾಗೆ.
ನಮ್ಮಲ್ಲಿ ಸಂಗ್ರಹವಾಗಿರುವ ಬೌದ್ಧಿಕ ಮೋಡ ಮಳೆ ಸುರಿಸಿ
ನಮ್ಮ ಮನದಾಕಾಶ ನಿಚ್ಚಳವಾಗಲಿ.. ಹೊಸತನಕ್ಕೆ ಸ್ಫುಟ ಪುಟವಾಗಲಿ
ಅತಿ ಶೀಘ್ರ ನನ್ನ ಈ ಆಹ್ವಾನಕ್ಕೆ ಪ್ರತಿಫಲದ ಪ್ರತಿಕ್ರಿಯೆಗಳು ಬರ್ತಾವೆ ಅಂತ ಹಾರೈಸುತ್ತಾ...
ಶೀಘ್ರದಲ್ಲೇ ಮತ್ತೆ ಭೇಟಿಯಾಗುವ ಭರವಸೆಯೊಂದಿಗೆ,
ಇಂತಿ ನಿಮ್ಮ ,
ರೇವಪ್ಪ
2 comments:
ಪುನರ್ನವಕ್ಕೆ ಅದ್ದೂರಿಯ ಸ್ವಾಗತ..
ಮೋಡಸರಿದ ಆಗಸದಲಿ ಬೆಳಗಲಿ ನವ ರವಿತೇಜ
ಪಸರಿಸಲಿ ಹೊಸ ರವಿಕಿರಣ..!
wishing you good luck
Post a Comment