ಮೊದಲಿಗೆ ಹೊಸದಾಗಿ ಮನನ ತಂಡದ ಸದಸ್ಯರಾದ ಉಷಾ, ಶಶಿಕಲಾ, ಗೌರೀಶ್ ಹಾಗೂ ಹರಿಪ್ರಸಾದ್ ಇವರುಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮನನ ತಂಡಕ್ಕೆ ಹೆಚ್ಚು ಸದಸ್ಯರು ಸೇರ್ಪಡೆಗೊಳ್ಳುತ್ತಿರುವುದು ಸಂಭ್ರಮದ ವಿಷಯವೂ ಆಗಿದೆ.
ಈ ವಾರದ ಅತ್ಯಂತ ವಿಶಿಷ್ಟವಾದ 'ಸೂಪರ್ ಮೂನ್- ಅದರ ಪರಿಣಾಮಗಳು' ವಿಷಯದ ಬಗ್ಗೆ ಚರ್ಚಿಸಲಾಗಿ:
ಮೊದಲಿಗೆ ಮಾತನಾಡಿದ ಮಂಜುರವರು ಭೂಮಿ ಏಳು ಚಿಪ್ಪುಗಳಿಂದ ರಚನೆಯಾಗಿದ್ದು, ಅವುಗಳು ಒಂದಕ್ಕೊಂದು ತಮ್ಮ ಕಕ್ಷೆಯಲ್ಲಿಯೇ ಸಮರ್ಪಕವಾಗಿ ಕಾಯರೂಪವನ್ನು ಪಡೆಯಲು ಘರ್ಷಣೆಗೊಳಗಾಗುವಾಗ ಸಂಭವಿಸುವ ಪ್ರಕ್ರಿಯೆಯೇ ಭೂಕಂಪನವಾಗಿದ್ದು, ಇದು ಐದು ನೂರು ಕೋಟಿ ವರ್ಷಗಳಿಂದಲೂ ಸಹಜವಾಗಿ ಪ್ರಕೃತಿಯಲ್ಲಿ ಸಂಭವಿಸುತ್ತಿರುವ ಕ್ರಿಯೆ. ಈಗ ಜಪಾನಿನಲ್ಲಿ ಉಂಟಾಗಿರುವ ಭೂಕಪಂನ ಮತ್ತು ಅದರ ಸುನಾಮಿ ಪರಿಣಾಮವೂ ಸಹ 'ಉತ್ತರ ಅಮೇರಿಕಾ ಪ್ಲೇಟ್'ನ ತಳ ಚಿಪ್ಪುಗಳು ಒಂದಕ್ಕೊಂದು ಕೂಡಿಕೊಳ್ಳುವ ಕ್ರಿಯೆಯಿಂದ ಉಂಟಾಗಿದ್ದು, ಅದು ಸಮುದ್ರ ತಳದ ನೆಲದಲ್ಲಿ ಉಂಟಾಗಿರುವುದರಿಂದ ಸುನಾಮಿಯಾಗಿದೆ ಎಂದು ತಿಳಿಸಿದರು. ನಂತರ ಭೂಮಿಯ ಸುತ್ತಲೂ ಮೊಟ್ಟೆಯಾಕಾರದಲ್ಲಿ ಸುತ್ತುವ ಚಂದ್ರ ಈ ಬಾರಿ ಕೇವಲ 28 ಸಾವಿರ ಕಿ.ಮೀ.ಗಳಷ್ಟೇ ಹತ್ತಿರಕ್ಕೆ ಬರುತ್ತಿದ್ದು ಇದರ ಗುರತ್ವ ಯಾವ ರೀತಿಯಲ್ಲಿ ಭೂಮಿಯ ಮೇಲೆ ಉಂಟಾಗುವುದಿಲ್ಲ ಮತ್ತು ಅದರಿಂದ ಭೂಕಂಪನಕ್ಕೆ ಯಾವುದೇ ಸಂಬಂಧವಿಲ್ಲವೆಂದು ಹೇಳಿದರು. ಭೂಮಿ 33 ಡಿಗ್ರಿಯ ಓವಲ್ ಶೇಪ್ (ಮೊಟ್ಟೆಯಾಕಾರದಲ್ಲಿದ್ದು)ಗೆ ವಾಲಿಕೊಂಡು ಸೂರ್ಯನ ಸುತ್ತಲೂ ಸುತ್ತುತ್ತಿರುವುದರಿಂದ ಮತ್ತು ಹಾಗೆಯೇ ಚಂದ್ರನೂ ಸುತ್ತುತ್ತಿರುವುದರಿಂದ ಎರಡು ಕೇಂದ್ರ ಬಿಂದುಗಳು ಏರ್ಪಟ್ಟು ಒಮ್ಮೆ ದೂರಕ್ಕೂ ಮತ್ತೊಮ್ಮೆ ಹತ್ತಿರಕ್ಕೂ ಬರುವುದುಂಟು. ಇದು ಪ್ರತಿ ತಿಂಗಳು ನಡೆಯುವ ಕ್ರಿಯೆಯೇ ಹೊರತು ಅದು ಯಾವುದೇ ಭ್ರಮೆಯನ್ನು ಉಂಟು ಮಾಡುವುದಿಲ್ಲ ಮತ್ತು ಅತ್ಯಂತ ಸುಂದರವಾಗಿರುವ ಚಂದ್ರನನ್ನು ನೋಡಿ ನಾವೆಲ್ಲರೂ ಸಂಭ್ರಮಿಸಬೇಕು ಎಂದು ಹೇಳಿದರು. ಒಟ್ಟಾರೆಯಾಗಿ ವೈಜ್ಞಾನಿಕ ಮತ್ತು ವೈಚಾರಿಕ ಹಿನ್ನೆಲೆಯಿಂದ ಇದನ್ನು ವಿಶ್ಲೇಷಿಸಬೇಕೇ ಹೊರತು ಅನಗತ್ಯ ಭಯದಿಂದ ಪ್ರಕೃತಿಯ ಸುಂದರವಾದ ನೋಟದಿಂದ ವಂಚಿತರಾಗಬಾರದು. ಹಾಗೆಯೆ ಭೂಕಂಪನದ ನಂತರ ಪರಿಣಾಮಗಳಲ್ಲಿ ಒಂದಾದ ಅಣುಸ್ಥಾವರ ಸ್ಫೋಟ ಅದು ಮನುಷ್ಯನದೇ ವಿಕೋಪವೇ ಹೊರತು ಪ್ರಕೃತಿಯದಲ್ಲ; ಹಿಂದೆ ನಾಗಸಾಕಿ ಹಿರೋಶಿಮಾ ಅಣುಬಾಂಬ್ ಗೆ ತುತ್ತಾಗಿದ್ದು ಈಗ ಅದು ಅಣುಸ್ಥಾವರ ಸ್ಪೋಟಕ್ಕೆ ಗುರಿಯಾಗಿರುವುದು ಮನುಷ್ಯ ಯುದ್ಧದ ಬಣ್ಣಗಳೇ ಹೊರತು ಪ್ರಕೃತಿ ಉಂಟು ಮಾಡಿರುವ ಹಾನಿಯಲ್ಲ. ನಾವು ನಿಜಕ್ಕೂ ಇದರಿಂದ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ಇಂದಿನ ವಿಷಯವನ್ನು ನೀಡಿದ್ದ ಪರಶುರಾಮ್ ಈ ಬಗ್ಗೆ ಮಾತನಾಡುತ್ತಾ ಭೂಕಂಪನಗಳು ಉಂಟಾಗುವ ರೀತಿ ಮತ್ತು ಭೂಮಿಯ ಸಮೀಪಕ್ಕೆ ಬರುವ ಚಂದ್ರ ಒಂದಕ್ಕೊಂದು ತಾಳೆ ಹಾಕುವ ವಿಷಯವಲ್ಲವೆಂದು ತಿಳಿಸುತ್ತಾ ಕೆಲವೊಮ್ಮೆ ಹುಣ್ಣಿಮೆಯ ದಿನ ಗುರತ್ವದಿಂದ ಉಬ್ಬರಗಳು ಉಂಟಾಗುತ್ತವೆಯೇ ಹೊರತು ಅದು ವಿಕೋಪಕ್ಕೆ ಕಾರಣವಲ್ಲವೆಂದು ತಿಳಿಸಿದರು. ಈ ರೀತಿಯಾಗಿ ಮಾಧ್ಯಮಗಳಲ್ಲಿ ಹೆಚ್ಚು ಭಯದ ವಾತಾವರಣ ನಿರ್ಮಾಣಮಾಡುತ್ತಿರುವುದನ್ನು ನಾವೆಲ್ಲರೂ ಖಂಡಿಸಬೇಕೆಂದು ತಿಳಿಸಿದರು. ಈ ಬಗ್ಗೆ ಹೆಚ್ಚು ಚರ್ಚೆಗಳಾಗಿ ಪ್ರಕೃತಿಯಲ್ಲಿ ನಡೆಯುವ ಕ್ರಿಯೆಗಳ ಬಗ್ಗೆ ಅಧ್ಯಯನ ಮಾಡಬೇಕೆಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ಶಾಂತರಾಮ್ ಮೂಢನಂಬಿಕೆಗೆ ತಮ್ಮ ಊರಿನ ಉದಾಹರಣೆಯನ್ನು ನೀಡುತ್ತಾ ಬಿದಿರಕ್ಕಿಯನ್ನು ನೋಡಿ ಪ್ರಳಯವಾಗುತ್ತದೆಂದು ನಂಬಿದ ಜನರು ದವಸಧಾನ್ಯಗಳನ್ನೆಲ್ಲಾ ಹಬ್ಬ ಮಾಡಿ ಖಾಲಿ ಮಾಡಿಕೊಂಡು ಕೊನೆಗೆ ಗಟ್ಟಿಯಾದ ಬಿದಿರಕ್ಕಿಯನ್ನೇ ತಿನ್ನುವಂತಾಗಿದ್ದರ ಬಗ್ಗೆ ಹೇಳಿ; ಮುಖ್ಯವಾಗಿ ನಾವು ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ವಿಷಯಕ್ಕೆ ಪೂರಕವಾಗಿ ಮಾತನಾಡಿದ ಗೌರಿರವರು ಆಕಾಶ ಕಾಯಗಳು ರಚನೆಯಾದ ರೀತಿ; ಘರ್ಷಣೆ ಮತ್ತು ಅವು ಸುತ್ತುವ ಕಕ್ಷೆಯ ಬಗ್ಗೆ ಚಿತ್ರದ ಮೂಲಕ ವಿವರಿಸಿದರು. ಹಾಗೆಯೇ ಅನಾದಿ ಕಾಲದಿಂದಲೂ ಈ ರೀತಿ ಭ್ರಮೆಗಳನ್ನು ಉಂಟು ಮಾಡಿ ವಿಜ್ಞಾನದಿಂದ ಹೊರಗುಳಿಯುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು ಅದರ ಹೊರತಾಗಿ ನಾವು ಹೆಚ್ಚು ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಅತ್ಯಂತ ಆಕರ್ಷಕವಾದ ನಭೋಮಂಡಲ, ಭೂಮಿಯ ರಚನೆ, ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಇದಕ್ಕೆ ಪೂರಕವಾಗಿ ಮನನ ತಂಡದ ಪರವಾಗಿ ಪರಶುರಾಮ್ ಮತ್ತು ಗೌರಿರವರ ನೇತೃತ್ವದಲ್ಲಿ ಈ ಬಗ್ಗೆ ಒಂದು ಟಿಪ್ಪಣಿಯನ್ನು ಸಿದ್ಧಪಡಿಸುವಂತೆ ಕೋರಿ ಎಲ್ಲಾ ಸದಸ್ಯರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯ ಪ್ರಶ್ನೆಗಳನ್ನು ಅವರುಗಳೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಸಲಾಯಿತು. ಸಭೆ ಅದನ್ನು ಅಂಗೀಕರಿಸಿತು.
ನಂತರ ಮಾತನಾಡಿದ ಲಕ್ಷ್ಮಣ್ ರವರು ಮೀಡಿಯಾದಿಂದಲೆ ಇಂತಹ ಮಿಥ್ ಗಳನ್ನು ಸೃಷ್ಟಿಮಾಡಿ ತಮ್ಮ ಟಿ.ಆರ್.ಪಿ. ರೇಟ್ ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಅದಕ್ಕೆ ನಾವು ಹೆಚ್ಚು ಅಧ್ಯಯನಶೀಲರಾಗಿ ಸಂಘಟನಾತ್ಮಕವಾಗಿ ಎಲ್ಲರಲ್ಲೂ ನಾಟಕ, ಬರವಣಿಗೆ ಇತ್ಯಾದಿಗಳ ಮೂಲಕ ಹೆಚ್ಚು ಪ್ರಚುರ ಪಡಿಸಬೇಕೆಂದು ತಿಳಿಸಿದರು. ಮತ್ತು ಮನನ ತಂಡದಿಂದಲೇ ಆ ರೀತಿಯ ವೈಜ್ಞಾನಿಕ ಹಿನ್ನೆಲೆಯ ಬೀದಿ ನಾಟಕಗಳನ್ನು ಹಮ್ಮಿಕೊಳ್ಳಬಹುದೆಂಬ ಅಭಿಪ್ರಾಯಪಟ್ಟರು.
ಇದಕ್ಕೆ ಸ್ಪಂದಿಸಿದ ಗೋಪಾಲ್ ರವರು ನಾವು ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮಗಳ ಪೊಳ್ಳು ವಾದಕ್ಕೆ ಪ್ರತಿಯಾಗಿ ವೈಜ್ಞಾನಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಹೆಚ್ಚು ಕ್ರಿಯಾಶೀಲರಾಗಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದಕ್ಕ ಮಂಜುಳ, ಶ್ರೀಲಕ್ಷ್ಮಿ, ಮಹಾಲಕ್ಷ್ಮಿ ಮತ್ತು ತಂಡದ ಇತರ ಸದಸ್ಯರೂ ಸಹ ಸಹಮತವನ್ನು ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಶಿವಕುಮಾರ್ ರವರು ಈ ರೀತಿಯ ಸುಳ್ಳು ಪ್ರಚಾರಗಳ ಮಾಧ್ಯಮಗಳ ವಿರುದ್ಧ ನಿರ್ಬಂಧನವನ್ನು ಹೇರುವಂತೆ ಸರ್ಕಾರಕ್ಕೆ ಒತ್ತಾಯ ತರಬೇಕೆಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಇದೊಂದು ಒಳ್ಳೆಯ ಸಲಹೆಯೆಂದು ಭಾವಿಸಿ ಸರ್ಕಾರಕ್ಕೆ ಒತ್ತಡ ತರುವುದಕ್ಕೆ ಪ್ರತಿಯಾಗಿ ನಾವುಗಳು 'ಜ್ಞಾನ ಆಯೋಗ' 'ವಿಜ್ಞಾನ ಪರಿಷತ್' 'ಭಾರತ ಜ್ಞಾನ ವಿಜ್ಞಾನ ಸಮಿತಿ' ಇವುಗಳನ್ನು ಸಂಪರ್ಕಿಸಿ ಜನರಲ್ಲಿ ಅರಿವನ್ನು ಮೂಡಿಸುವ ಕೆಲಸ ಮಾಡಬಹುದೆಂಬ ಅಭಿಪ್ರಾಯಕ್ಕೆ ಸಭೆ ಸಹಮತಿಸಿತು.
ಒಟ್ಟಾರೆಯಾಗಿ ಇಂದಿನ ವಿಶಿಷ್ಟ ಅಧ್ಯಯನ ಸಭೆ ಅತ್ಯಂತ ಸತ್ವಯುಕ್ತವಾಗಿದ್ದು; ಮುಂದಿನ ಶನಿವಾರದ ಒಳಗೆ ಈ ವಿಷಯದ ಬಗ್ಗೆ ಒಂದು ಸವಿವರ ಟಿಪ್ಪಣಿಯನ್ನು ಸಿದ್ಧಪಡಿಸಿಕೊಂಡು 'ಆಕ್ಷನ್ ಪ್ಲಾನ್' ಸಿದ್ಧಪಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಇದರ ನೇತೃತ್ವವನ್ನು ಪರಶುರಾಮ್ ಮತ್ತು ಗೌರಿರವರಿಗೆ ವಹಿಸಿಕೊಡಲಾಯಿತು. ಉಳಿದ ಸದಸ್ಯರು ಅವರಿಗೆ ಸಹಕರಿಸುವಂತೆ ಕೋರಲಾಯಿತು.
ಸಭೆಯ ಕೊನೆಯಲ್ಲಿ ಮಾತನಾಡಿದ ಆರ್.ಕೆ.ರಮೇಶ್ ಸೂರ್ಯನನ್ನು ಒಂದು ಫುಟ್ ಬಾಲ್ ಗೆ ಹೋಲಿಸಿದರೆ ಅದಕ್ಕೆ ಪ್ರತಿಯಾಗಿ ಭೂಮಿ ಒಂದು ಗುಂಡು ಸೂಜಿಯ ತಲೆ ಗಾತ್ರವಿದ್ದು ಹಾಗೆಯೇ ಭೂಮಿಗೆ ಪ್ರತಿಯಾಗಿ ಚಂದ್ರ 6 ಪಟ್ಟು ಕಡಿಮೆಯಿರುವುದರಿಂ ದ ಭೂಮಿಯ ಗುರುತ್ವ ಚಂದ್ರನಿಗಿಂತಲೂ ಹೆಚ್ಚಿರುವುದರಿಂದ ಚಂದ್ರನ ಪರಿಣಾಮ ಭೂಮಿಯ ಮೇಲಾಗುವುದು ಕಡಿಮೆ ಸಾಧ್ಯತೆಯೆಂದು ತಿಳಿಸಿದರು. ಹಾಗಾಗಿ ನಾವು ಹೆಚ್ಚು ವೈಜ್ಞಾನಿಕವಾಗಿ ವಿಶ್ಲೇಷಣೆಗೊಳಪಟ್ಟರೆ ಇನ್ನೂ ಹೆಚ್ಚು ಆಕಾಶಕಾಯಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವೆಂದು ತಿಳಿಸಿದರು.
ಕೊನೆಯದಾಗಿ ಎಲ್ಲರಿಗೂ ವಂದಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಸದಸ್ಯರು, ಮಂಜುಳ, ಶ್ರೀಲಕ್ಷ್ಮಿ, ಮಹಾಲಕ್ಷ್ಮಿ, ಗೌರಿ, ಪುಟ್ಟಚಂದ್ರ, ಬಿರಾದರ್, ರಮೇಶ್, ಶಾಂತರಾಮ್, ಪರಶುರಾಮ್, ಮಂಜು, ಹುಲಿಯಪ್ಪ, ಗೋಪಾಲ್, ಗೌರೀಶ್, ಹರಿಪ್ರಸಾದ್, ಲಕ್ಷ್ಮಣ್, ಉಷಾ, ಶಶಿಕಲಾ, ಮಹೇಂದ್ರ, ಶಿವಕುಮಾರ್, ಶಿವಾನಂದ್..ಸಭೆಯಲ್ಲಿ ಹಾಜರಿದ್ದರು.
ಮುಂದಿನ ಸಭೆ 2.4.2011ರಂದು ನಡೆಯಲಿದ್ದು ಅಷ್ಟರಲ್ಲಿ 'ವೈಜ್ಞಾನಿಕ ವಿಶೇಷ'ದ ಒಂದು ವಿಶೇಷಾಂಕವನ್ನು ತರುವ ಬಗ್ಗೆ ತೀರ್ಮಾನಿಸಲಾಯಿತು. ಈ ಕುರಿತು ಮನನ ತಂಡದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಇಂದು ಗೈರು ಹಾಜರಾಗಿದ್ದವರೂ ಸಹ ಈ ಬಗ್ಗೆ ಆಸಕ್ತಿ ವಹಿಸಿ ತಮ್ಮ ಟಿಪ್ಪಣಿಗಳನ್ನು ಕಳುಹಿಸುಕೊಡುಂತೆ ಕೋರುತ್ತಾ, ಮುಂದಿನ ಸಭೆಗೆ ತಪ್ಪದೆ ಹಾಜರಾಗುವಂತೆ ಮನವಿ.
ಮಂಜುನಾಥ.ಎಸ್.
'ಮನನ' ತಂಡದ ಪರವಾಗಿ
No comments:
Post a Comment