ದಿನಾಂಕ: 30.10.2010ರಂದು ಒಂದು ತಿಂಗಳ ಬಿಡುವಿನ ನಂತರ ಮನನ ತಂಡದ ಸದಸ್ಯರು ಸಭೆ ಸೇರಿ ರೇವಪ್ಪರವರು ತಮ್ಮ ಬ್ಲಾಗ್ ನಲ್ಲಿ ವ್ಯಕ್ತಪಡಿಸಿದ್ದ ಅತ್ಯಂತ ಗಂಭೀರ ಹಾಗೂ ಸೂಕ್ಷ್ಮ ಸಂವೇದನೆಯ ವಿಷಯವಾದ 'ಜಾತಿ-ಪದ್ಧತಿ' ಯ ವಿಷಯವನ್ನೇ ಅಂದಿನ ಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಯಿತು.
ಮೊದಲಗೆ ಮಾತನಾಡಿದ ರೇವಪ್ಪರವರು ಜಾತಿ ಆಚರಣೆಯಲ್ಲಿರುವ ಲೋಪದೋಷಗಳು ಮತ್ತು ಪದ್ಧತಿಯಲ್ಲಿರುವ ಮೌಢ್ಯಗಳ ಹಾಗೂ ಇಂದಿನ ಆರ್ಥಿಕ ನೀತಿಯಲ್ಲಿ ಜಾತಿ ಎಷ್ಟು ಪ್ರಬಲವಾಗಿ ರೂಪುಗೊಳ್ಳುತ್ತಿದೆ ಎಂಬುದರ ಬಗ್ಗೆ ಚರ್ಚೆಗೆ ಆಹ್ವಾನಿಸಿದರು.
ನಂತರ ಮಾತನಾಡಿದ ಶಾಂತರಾಮ್ ಇಂದಿನ ರಾಜಕಾರಣ ಮತ್ತು ಸಾಮಾಜಿಕ ಸ್ಥಿತ್ಯಂತರಗಳಲ್ಲಿ ಆರ್ಥಿಕ ಸಬಲತೆಯಿಂದ ಜಾತಿ ಪಿಡುಗನ್ನು ತಡೆಗಟ್ಟಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಬಹುದಾದರೂ ಜಾತಿಗಳಲ್ಲಿನ ಉಪಜಾತಿಗಳು ಹೆಚ್ಚಾಗಿರುವುದು ಮತ್ತು ಅವು ಪ್ರಬಲವಾಗಿ ರಾಜಕಾರಣದಲ್ಲಿ ಪ್ರತಿಬಿಂಬಿಸುತ್ತಿರುವುದು ಅತ್ಯಂತ ಆತಂಕವಾಗಿರುವ ವಿಷಯ ಎಂದು ತಿಳಿಸುತ್ತಾ ನಾವು ಇನ್ನಷ್ಟು ಇದರ ಬಗ್ಗೆ ಅಧ್ಯಯನ ಮಾಡುವುದು ಸೂಕ್ತವೆಂದು ತಿಳಿಸಿದರು.
ರಾಮ ಭಟ್ ಮಾತನಾಡಿ, ಈ ಹಿಂದಿನ ಸರ್ಕಾರವೊಂದು ಪ್ರಸ್ತಾಪಿಸಿದ್ದ ಒಳಮೀಸಲಾತಿಯ ಕಲ್ಪನೆಯ ಬಗೆಗೆ ತಮ್ಮ ನವೀನ ವಿಚಾರಗಳ ಮೂಲಕ ಬೆಳಕು ಚೆಲ್ಲಿದರು.
ನಂತರ ಮಾತನಾಡಿದ ಆರ್.ಕೆ.ರಮೇಶ್ ರವರು ಇಂದು ಜಾತಿ ಸಂಘಟನೆಗಳೇ ಹೆಚ್ಚು ಜಾತಿ ಪದ್ಧತಿಯನ್ನು ಪ್ರೋತ್ಸಾಹಿಸುತ್ತಾ ಅಧಿಕಾರ ಕೇಂದ್ರೀಕರಣ ಮಾಡುತ್ತಾ ಅತ್ಯಂತ ಕೆಟ್ಟ ರೀತಿ ರಿವಾಜುಗಳಿಗೆ ಕಾರಣವಾಗುತ್ತಿರುವುದಾಗಿ ತಿಳಿಸಿ ಇದೊಂದು ಆತಂಕಕಾರಿ ಎನ್ನುವುದನ್ನೂ ಸಹ ತವ್ಯಕ್ತಪಡಿಸಿದರು.
ಮಂಜು ಮಾತನಾಡುತ್ತಾ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ ಜಾತಿ ಎನ್ನುವುದು ಅತ್ಯಂತ ಪ್ರಬಲ ಕ್ರಿಯೆಯಾಗಿದ್ದು, ನಾವುಗಳು ಪರಸ್ಪರ ಗೌರವದಿಂದ ಪ್ರತಿಯೊಬ್ಬರ ರಿಚುವಲ್ಸ್ ಗಳನ್ನು ಮಾನ್ಯ ರೂಪದಲ್ಲಿ ಸ್ವೀಕರಿಸಿದಾಗ ಮಾತ್ರ ನಾವು ಜಾತಿ ಎನ್ನುವುದನ್ನು ಒಂದು ಪಿಡುಗಾಗಿ ನೋಡದೆ ಸಾಂಸ್ಕೃತಿಕ ಮೌಲ್ಯವಾಗಿ ರೂಪಿಸಲು ಸಾಧ್ಯವಾಗುತ್ತೆ ಎಂಬ ಅಭಿಪ್ರಾಯ ಪಟ್ಟು ಭಾರತದ ಶಕ್ತಿ ಮತ್ತು ಸೌಂದರ್ಯವೇ ಬಹುಸಂಸ್ಕೃತಿ ಎನ್ನುವುದನ್ನು ತಿಳಿಸಿದರು.
ಮಹೇಂದ್ರ, ವಿ.ಎಂ.ಮಂಜುನಾಥ್, ಪರಶುರಾಮ್, ಗೌರಿ ಇವರೆಲ್ಲರೂ ಕೂಡ ಜಾತಿ ಮೂಲಗಳನ್ನೇ ಹೆಚ್ಚು ಪ್ರತಿಬಿಂಬಿಸುತ್ತಾ ಮೇಲು ಕೀಳು ಎನ್ನುವ ತಾರತಮ್ಯಗಳಿಂದ ಜಾತಿ ಮೌಲ್ಯವನ್ನು ಅಪಮೌಲ್ಯಗೊಳಿಸುತ್ತಿದ್ದು ಮತ್ತು ಸ್ವಾರ್ಥಪರತೆಯಿಂದ ಇಂದು ಜಾತಿಯನ್ನು ರೂಢಿಸುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಪರಿಗಣಿಸಿ ಒಟ್ಟಾರೆಯಾಗಿ ಸಹಬಾಳ್ವೆಯನ್ನು ಪುರಸ್ಕರಿಸಿ ಪಾಲಿಸಬೇಕೆಂಬ ಅಭಿಪ್ರಾಯಗಳನ್ನು ನೀಡಿದರು.
ಈ ಕುರಿತು ವಿಶೇಷವಾಗಿ ನಾವು ಅಧ್ಯಯನದಲ್ಲಿ ತೊಡಗಿ ಇನ್ನಷ್ಟು ಹೆಚ್ಚು ತಿಳಿದು ತಿಳಿಯಾಗಬೇಕೆನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮನನ ತಂಡದಿಂದ 'ಒಂದು ಮಾಸಿಕ ಪತ್ರಿಕೆ'ಯನ್ನು ಹೊರತರಲೂ ಸಹ ಯೋಜಿಸಲಾಯಿತು. ಇದಕ್ಕಾಗಿ ಮಂಜುರವರು ಸಿದ್ಧಪಡಿಸಿದ್ದ ಎಂಟು ಪುಟಗಳ ಕರಡು ಪತ್ರಿಕೆಯ ನಮೂನೆಯನ್ನು ಒಪ್ಪಲಾಯಿತು. ಇದಕ್ಕಾಗಿ ತಮ್ಮ ಸಲಹೆ ಸೂಚನೆಗಳನ್ನು ದಯಮಾಡಿ ಸಲ್ಲಿಸುವಂತೆ ಮನನ ತಂಡದ ಎಲ್ಲಾ ಸದಸ್ಯರನ್ನು ಕೋರಿದೆ.
ದಿನಾಂಕ : 11/11/2010(ಗುರುವಾರ) ಮಧ್ಯಾನ್ಹ 1.45ಕ್ಕೆ ನಡೆಯಲಿರುವ ಮುಂದಿನ ಸಭೆಗೆ ಎಲ್ಲರೂ ಹಾಜರಾಗುವಂತೆ ಕೋರಿದೆ.
-ಮನನ ತಂಡದ ಪರವಾಗಿ
------------
' ಮನನ Magazine ಬಗ್ಗೆ '
ಮನನ ತಂಡ ಹೊರತರಬಯಸುತ್ತಿರುವ ಮ್ಯಾಗಜೀನ್ ನವೀನ ಕಲ್ಪನೆಯಾಗಿದ್ದು, ಪ್ರತಿಯೊಬ್ಬ ಮನನ ತಂಡದ ಸದಸ್ಯನಲ್ಲಿ ಮಿಳಿತಗೊಂಡಿರುವ ಬರಹಗಾರನನ್ನ ಹೊರಗೆಳೆಯುವ ಕೆಲಸ ಮಾಡುವ ಉದ್ದೇಶ ಹೊಂದಿದೆ. ನಿಮ್ಮ ಕಲ್ಪನಾ ಶಕ್ತಿಗೊಂದು Canvas ಬೇಡವೇ ? ಆ Canvas ಮಾಡುವ ಕೆಲಸವನ್ನ ಮನನ Magazine ಮಾಡಲಿದೆ. ಕಥೆ - ಕವನ - ಜ್ಞಾನಪುಟ - ಸೇವಾವಿಷಯ ಮಾಹಿತಿ - ಸಿನೆಮಾ ವಿಮರ್ಶೆ .. ಇತ್ಯಾದಿ. ನಿಮ್ಮ ಕಲ್ಪನಾಶಕ್ತಿಯ ಅಸೀಮತೆಯನ್ನ ಪತ್ರಿಕೆಗೂ ಆರೋಪಿಸಲಾಗಿದೆ. ನಿಮ್ಮ ಕಲ್ಪನೆಗಳಿಗಿರುವ ಅನಂತ ಎಲ್ಲೆಯೇ ಪತ್ರಿಕೆಯ ಸೀಮಾರೇಖೆ. ಅದನ್ನ ದಾಟುವ ಧೈರ್ಯ ಮಾಡಿ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : cheluvantha@yahoo.co.in & revappa@gmail.com
------------
No comments:
Post a Comment