ಕಟ್ಟೆಮ್ಯಾಲಿನ ಮಾತು
ಮಾತಿಗೆ ಕೂರುವ ಮುನ್ನ...
ಒಂದರೆಕ್ಷಣ
ಯೋಚಿಸಿ, ಈ ಜಗತ್ತಿನಲ್ಲಿ ಮಾನವ ಪ್ರಾಣಿಗೆ ಮಾತೇ ಬಾರದಿದ್ದಲ್ಲಿ ಅವನ ಅಸ್ಥಿತ್ವ ಹೇಗಿರುತ್ತಿತ್ತು..? ಜೀವನ ಶೈಲಿ ಹೇಗಿರುತ್ತಿತ್ತು..? ಮರಬಿಟ್ಟು ನೆಲಕ್ಕೆ ಇಳಿಯುತ್ತಲೇ ಇರಲಿಲ್ಲ ಅಂತಿರಾ.? ಹೌದು ಮಾತೇ ಇಲ್ಲದಿದ್ದರೆ ಮನುಷ್ಯ ಈ ಭೂಮಿಮೇಲೆ ಈ ಪರಿಯ ಅಭಿವೃದ್ಧಿ ಸಾಧಿಸಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಕೈಸನ್ನೆ, ಕಣ್ಸನ್ನೆಗಳಲ್ಲೇ ವ್ಯವಹರಿಸಬೇಕಿತ್ತು. ಸಾವಿರಾರು ವಿಧದ ಭಾಷೆಗಳು, ಭಾಷೆಗೆ ತಕ್ಕ ಲಿಪಿಗಳು ಹುಟ್ಟುತ್ತಿರಲಿಲ್ಲ. ಸಂವಹನ ಮಾಧ್ಯಮಗಳ ಅನ್ವೇಷಣೆಯಾಗುತ್ತಿರಲಿಲ್ಲ. ಬೋಸ್, ಮಾರ್ಕೋನಿಯಂತವರು ರೇಡಿಯೋ ತರಂಗಗಳ ಅನ್ವಷಣೆಗೆ ಶ್ರಮಿಸುತ್ತಿರಲಿಲ್ಲ. ಗ್ರಹಂಬೆಲ್ ಟೆಲಿಫೋನ್ ಬಗ್ಗೆ ಯೋಚಿಸುತ್ತಿರಲಿಲ್ಲ. ಇಂದಿನ ರೇಡಿಯೋ, ಟಿವಿ, ಕಂಪ್ಯೂಟರ್ ವರೆಗೆ ನಮ್ಮ ವಿಕಾಸಯಾನ ಸಾಗುತ್ತಿರಲಿಲ್ಲ. ಒಟ್ಟಾರೆ ಮನುಷ್ಯನ 'ಬುದ್ದಿಶಕ್ತಿ' ಈ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ. ಒಂದು ಭಾವನಾತ್ಮಕ ಬೆಸುಗೆಯ ನಾಗರೀಕ ಸಮಾಜ ಈ ಧರೆಯಲ್ಲಿ ರೂಪುಗೊಳ್ಳುತ್ತಿರಲಿಲ್ಲ. ಅಂದಮೇಲೆ ನಾವು, ನೀವು ಇಲ್ಲಿ, ಈ ಸಚಿವಾಲಯದಲ್ಲಿ ಛೇ.. ಛೇ.. ಇಲ್ಲ ಬಿಡಿ.ವಿಕಾಸ
ಪಥದಲ್ಲಿ ಮನುಷ್ಯ 'ಮಾತುಗಾರ'ನಾದಂದಿನಿಂದ ತನ್ನ ಮಾತಿಗೆ ಆಧಾರವಾಗಿ ತನ್ನದೇ ಆದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ. ಮಾನವ ಸಮಾಜದಲ್ಲಿ ಮನುಷ್ಯನ ಅಸ್ಥಿತ್ವ ಉಳಿದಿರುವುದು ಒಂದು ಭಾಷೆಯನ್ನು ಬಳಸಿಕೊಂಡು ಅವನಾಡುವ ಮಾತಿನಲ್ಲಿ ಹಾಗೆಯೇ ಸಂಘಜೀವಿಯಾಗಿ ಎಲ್ಲರೊಡನೊಡಗೂಡಿ ಬದುಕಲು ಸಾಧ್ಯವಾಗಿರುವುದು ಮನುಷ್ಯನ ಮಾತಿನ ಬಲದಿಂದ ಎಂಬುದು ಅಕ್ಷರಶಃ ನಿಜ..ಇಷ್ಟೆಲ್ಲಾ
ಪೀಠಿಕೆ ಯಾಕೆಂದರೆ....ಇನ್ನು
ಮುಂದೆ ಈ ಬ್ಲಾಗಿನಲ್ಲಿ ಕೆಲವು ಮಾತಿನ ಮಲ್ಲರ ಹರಟೆಕಟ್ಟೆ ಸೃಷ್ಠಿಸಿ ಕೆಲವು ಸಂಗತಿಗಳನ್ನು, ಪ್ರಾಪಂಚಿಕ ವಿಷಯ, ವಿಚಾರಗಳನ್ನು ಚರ್ಚಿಸುವ ಹಂಬಲವಿದೆ. ಒಂದು ಸಾಧಾರಣ, ಅರೆಪ್ರಜ್ಞಾವಸ್ಥೆಯಲ್ಲಿರುವಂತಹ ಸಮಾಜದ ಭಾಗವಾಗಿರುವ ಕೆಲವರು ಈ ನೆಲದ ಐತಿಹಾಸಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ, ಭಾವನಾತ್ಮಕ ವಿಚಾರಗಳ ಬಗ್ಗೆ ತಮ್ಮದೇ ಆಲೋಚನೆಗಳಿಂದ ಷರಾ ಬರೆಯುವುದನ್ನು ಅವರ ಮಾತಿನಲ್ಲೇ ಅಭಿವ್ಯಕ್ತಪಡಿಸುವ ಪ್ರಯತ್ನವಿದು. ನಗರದ ಹರಿ-ಬರಿ ಜೀವನದಲ್ಲಿ ಒಂದು ಕುಟುಂಬದ ಸದಸ್ಯರೇ ಒಂದೆಡೆ ಕುಳಿತು ಮಾತನಾಡುವುದು ಸಾಧ್ಯವಾಗದಿರಬಹುದು. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಒಂದು ಸಮುದಾಯವೇ ಇಂತಹ ಹರಟೆ ಕಟ್ಟೆಯ ಭಾಗವಾಗಿರುವುದನ್ನು ಕಾಣುತ್ತೇವೆ. ಇಂತಹ ಒಂದು ಸುಂದರ, ಸುಮಧುರ ಹರಟೇ ಚಾವಡಿಯಿಂದ ಕೇಳಿಬರುವ ಮಾತುಗಳಿವು "ಕಟ್ಟೆ ಮ್ಯಾಲಿನ ಮಾತು".ಹಾಗಾದರೆ
ಈ ಕಟ್ಟೆ ಮ್ಯಾಲಿನ ಮಾತಿನ ಮಾತುಗಾರರು ಯಾರೆಂಬುದರ ಕುತೂಹಲವಿದೆಯಲ್ಲವೇ..? ಅದಕ್ಕೇ ಮಾತಿಗೆ ಮೊದಲು ಅವರ ಕಿರುಪರಿಚಯ ಮಾಡಿಕೊಡುವೆ. ನಾಟಕಕ್ಕೆ ಮೊದಲು ಪಾತ್ರಧಾರಿಗಳ ಪರಿಚಯಿಸಿದಂತೆ..ಬೀರ
: ಕೆಲವರಿಗೆ ಬೀರಣ್ಣ, ಕೆಲವರಿಗೆ ಬೀರ ಮಾವ, ಕೆಲವರಿ ಚಿಗಪ್ಪ, ಕೆಲವರಿಗೆ ದೊಡಪ್ಪ, ಸಮಕಾಲೀನರಿಗೆ ಬೀರ ಆಗಿರುವ ಇವನು ನಮ್ಮ ಮಾತಿನ ಕಟ್ಟೆಯ ಹಿರಿಯ ತಲೆ. ವಯಸ್ಸು ಸರಿಸುಮಾರು 60-65 ರ ನಡುವಿರಬಹುದಾದರೂ ಮುಪ್ಪಿಗೆ ಕಾಲಿರಿಸಿದಂತೆ ಕಾಣದ ಗಟ್ಟಿ ಜೀವ. ತನ್ನ ದೃಢ ಮಾತಿನಿಂದಲೇ ಜನಗಳ ನಡುವೆ ಒಂದು 'ಬೆಲೆ' ಉಳಿಸಿಕೊಂಡಿರುವ ಈತನಿಗೆ ಯಾವುದೇ ದುರಭ್ಯಾಸಗಳಿಲ್ಲ. ಪರಿಣಾಮವಾಗಿ ದುರಭ್ಯಾಸವಿರುವವರು ಇವನೆದುರಿಗೆ ತೋರ್ಪಡಿಸಿಕೊಳ್ಳಲು ಅಂಜುವುದು ಸಾಮಾನ್ಯ. ಲೋಕವಿಚಾರಗಳು ಅಷ್ಟಾಗಿ ತಿಳಿದಿರದಿದ್ದರೂ, ತಿಳಿದು ಕೊಳ್ಳುವ ಹಂಬಲ, ಆಲಿಸುವ ಕಿವಿ ಈತನದು. ಈತನಿಗೆ ಹಿಡಿಸದ ಮಾತು ಇಲ್ಲಿ ಚರ್ಚೆಗೆ ಬಂದೀತೆಂದರೆ ಅದು ಇವನ ಅನುಪಸ್ಥಿತಿಯಲ್ಲಿ ಮಾತ್ರ.ರತ್ನಿ
: ಎಲ್ಲರಿಂದಲೂ ರತ್ನಕ್ಕ ಎಂದು ಕರೆಸಿಕೊಳ್ಳುವ ಇವಳು ನಮ್ಮ ಮಾತಿನ ಕಟ್ಟೆಯ ಚೂಟಿ ಹೆಣ್ಣು ಮಗಳು. ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುವುದು ಈಕೆಯ ಸ್ವಭಾವ. ಅರೆ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಮಕ್ಕಳನ್ನು ಸಲಹಲು, ಜೀವನೋಪಾಯಕ್ಕೆ ಮನೆಯ ಮುಂದೆ ತೆರೆದ ಒಂದು ಚಿಕ್ಕ ಕಿರಾಣಿ ಅಂಗಡಿ ಇಂದು ಚಹಾದಂಗಡಿಯಾಗಿ ಬೆಳೆದು ಮಾತಿನ ಕಟ್ಟೆಗೆ ಜಾಗ ಒದಗಿಸಿದೆ. ಈಕೆ ಜನರ ಪ್ರೀತಿಗಳಿಸಿ ಅವಿರೋಧವಾಗಿ ಅಲ್ಲಿನ ಗ್ರಾ.ಪಂ.ಗೆ ಆಯ್ಕೆಯಾಗಿರುವ ಸದಸ್ಯೆ ಕೂಡಾ.ಡೋಂಟ್ವರಿ
: ನಿಜವಾಗಿ ಈತನ ನಿಜನಾಮಧೇಯವೇನೆಂಬುದು ಬಹುಜನರಿಗೆ ಗೊತ್ತಿಲ್ಲ. ಎಲ್ಲರೂ ಕರೆಯುವುದು 'ಡೋಂಟ್ವರಿ' ಎಂದೇ.. ಕಾರಣ ಈತ ಮಾತುಮಾತಿಗೆ ಇಂಗ್ಲೀಷು ಬಳಸಿ 'ಡೋಂಟ್ವರಿ' ಎಂದು ಉಚ್ಛರಿಸುವುದು. ಸ್ವಲ್ಪ ಹೆಚ್ಚೇ ಎನಿಸುವ ರಾಜಕೀಯ ವಿಷಯಾಸಕ್ತಿ, ಅಲ್ಲಿ ಗುರುತಿಸಿಕೊಳ್ಳಲು ಹಂಬಲಿಸುವ ಇವನಿಗೆ ಪಾರ್ಟಿ ಪಕ್ಷಗಳದ್ದೇ ಚಿಂತೆ. ಪಿ.ಯು.ಸಿ. ವರೆಗೆ ಓದಿ ರಾಜಕೀಯದೆಡೆ ಜಿಗಿದಿರುವ ಇವನಿಗೆ ಲೋಕ ವಿಚಾರಗಳು ತಲೆಯೊಳಗೆ ಇಳಿಯುವುದು ಸಲೀಸು. ಮತ್ತು ಅವುಗಳನ್ನು ಜನರಿಗೆ "ಫರ್ ಎಗ್ಜಾಂಪಲ್" ಮುಖೇನ ತಿಳಿಸುವಲ್ಲೂ ನಿಸ್ಸೀಮ.ಡೋಂಟ್ವರಿ ಕೇವಲ ರಾಜಕೀಯಾಸಕ್ತ ಮಾತ್ರವಲ್ಲ ಸಾಹಿತ್ಯಾಸಕ್ತ ಜೀವಿ ಕೂಡಾ ಹೌದು.ಸಣ್ಣೀರ
: ಇವನನ್ನು ಎಲ್ಲರೂ ಗುರುತಿಸುವುದು ಒಬ್ಬ ಸಾದು ಸ್ವಭಾವದ ಮನುಷ್ಯನೆಂದು. ಮಾತನಾಡುವುದು ಕಡಿಮೆ, ಚಿಂತಿಸುವುದು ಅಪಾರ. ಇವನೊಂದು ತರಹದ ಸೈಲೆಂಟ್ ಸಾಹಿತಿ, ಅಬ್ಬರವಿಲ್ಲದ ಫಕೀರ. ಕಥೆ, ಕವನಗಳಲ್ಲಿ ಎಲ್ಲಿಲ್ಲದ ಆಸಕ್ತಿ ಹೊಂದಿರುವ ಈತ ಪಂಪನಿಂದ ಇಲ್ಲಿಯವರೆಗೆ ಹಲವರನ್ನು ಓದಿಕೊಂಡಿರುವಾತ. ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿ ಕೆಲದಿನ ಕಾಲಕಳೆದು ಮರಳಿ ಬಂದು ಭೂ ತಾಯಿಯ ಸೇವೆಗೆ ತೊಡಗಿದ್ದಾನೆ. ಆಗಾಗ ರತ್ನಿಯ ಚಹಾದ ಟೇಸ್ಟಿಗೆ ಬರುವ ಈತ ಮಾತಿನ ಕಟ್ಟೆಯ ಸದಸ್ಯಕಳ್ಳಸೋಮ
: ಚಿಕ್ಕಂದಿನಲ್ಲಿ ಮಾಡಿದ ಚಿಕ್ಕ ಕಳ್ಳತನದ ಪರಿಣಾಮವಾಗಿ ಸೋಮನೊಂದಿಗೆ ಕಳ್ಳನೆಂಬ ಅನ್ವರ್ಥಕ ಸೇರಿದೆ. ಸ್ವಲ್ಪ ಮಂದ ಬುದ್ದಿಯ ಈತನಿಗೆ ವಿಷಯದ ಅರ್ಥೈಸಿಕೊಳ್ಳುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆ ಅಷ್ಟಕಷ್ಟೆ. ಈತನಿಗೆ ರೂಢಿಗತವಾಗಿ ಬಂದ ಕೆಲವು ದುರಭ್ಯಾಸಗಳಿವೆ. ಅವು ಆಗಾಗ ಅನಾವರಣಗೊಂಡು ಹೆಂಡತಿ ಸೀತೆಯೊಡನೆ ಕದನಕ್ಕಿಳಿಸುತ್ತವೆ. ಆದರೂ ಅನಾಹುತಕಾರಿ ಮನಸ್ಥಿತಿಯವನು ಇವನಲ್ಲ.ಸೀತೆ
: ಈಕೆ ಕಳ್ಳಸೋಮನ ಹೆಂಡತಿ. ತನ್ನ ಕಾಯಕದಲ್ಲಿ ತುಂಬಾ ನಿಷ್ಠೆ ಇರುವ ಹೆಣ್ಣು ಮಗಳು. ಕಳ್ಳಸೋಮನೊಡನೆ ಜಗಳ ಕಾದರೂ ಜಗಳದ ದುಪ್ಪಟ್ಟು ಪ್ರೀತಿ ತೋರುವ ಹೃದಯವಂತೆ. ಮಾತಿನಲ್ಲೂ ಪ್ರವೀಣೆ ಇರುವ ಇವಳು ಆಗಾಗ ಕಟ್ಟೆಮ್ಯಾಲಿನ ಮಾತಿಗೆ ಕೂರುವುದುಂಟು. ಹೇಳ ಬೇಕೆನಿಸಿದ್ದನ್ನು ನೇರವಾಗಿ ಹೇಳುವುದುಂಟು.ಬೀಡಿಬಸ್ಯಾ
: ಬಸವ ಎಂಬ ಸುಂದರ ಹೆಸರು ತನ್ನ ಬೀಡಿಸೇದುವ ಚಟದಿಂದಲೇ 'ಬಸ್ಯಾ' ಎಂದಾಗಿರುವಷ್ಟು ಬೀಡಿಗಂಟಿದ ಬದುಕು ಈತನದು. ದಿನವೊಂದಕ್ಕೆ ಅದೆಷ್ಟು ಬೀಡಿ ಸೇದಬಲ್ಲನೆಂಬುದು ಅವನಿಗೂ ಗೊತ್ತಿಲ್ಲ. ಊಟ-ತಿಂಡಿ ಇರದಿದ್ದರೂ ಇರಬಲ್ಲ ಆದರೆ ಬೀಡಿ ಇಲ್ಲದೆ ಒಂದು ತಾಸು ಇರಲಾರ. ಈ ಒಂದು ಚಟದಿಂದಾಗಿಯೇ ಇವನು ರತ್ನಕ್ಕನ ಅಂಗಡಿ ಕಟ್ಟೆಯ ದಾಸ. ಇವನಂತೆ ಇವನ ಹೆಂಡತಿ ತಿಮ್ಮಿ ಕೂಡಾ ಆಗಾಗ ಮಾತಿಗೆ ಬರುವವಳೇ.
ಇವರಷ್ಟೇ
ಅಲ್ಲ ಆಗಾಗ ಬಂದು ಹೋಗುವವರು ಇದ್ದೇ ಇರುತ್ತಾರೆ.ಇವರ್ಯಾರಿಗೂ
ಕೆಲಸ ಇಲ್ವಾ ಎನಿಸಬಹುದು. ಇವರೂ ಕೆಲಸಗಾರರು, ನಮ್ಮಂತೆ ವರ್ಷಪೂರ್ತಿ ದುಡಿಯುವ ಸರ್ಕಾರಿ ನೌಕರರಲ್ಲ. ವರ್ಷದ ನಾಲ್ಕೈದು ತಿಂಗಳು ದುಡಿಯುವ ರೈತಾಪಿಗಳು. ಇವರೆಲ್ಲರ ಮಾತಿಗೆ ಒಂದು ನಿಖರ ವಸ್ತು-ವಿಷಯದ ಆಧಾರವಿಲ್ಲ. ತತ್ ಕ್ಷಣದಲ್ಲಿ ಹುಟ್ಟುವ ಮಾತುಗಳೆಂದರೂ ಆದೀತು. ಒಟ್ಟಾರೆ ಒಂದು ನಿಸ್ಪೃಹ ಚರ್ಚೆ ಮಾತ್ರ ಇವರದು.ಇನ್ನು
ಹದಿನೈದು ದಿನಗಳಿಗೊಮ್ಮೆ ಇವರೆಲ್ಲರಿಂದ ಈ ಬ್ಲಾಗ್ ನಲ್ಲಿ 'ಕಟ್ಟೆ ಮ್ಯಾಲಿನ ಮಾತು' ಬಿತ್ತರಗೊಳಿಸಬೇಕೆಂಬ ಹಂಬಲವಿದೆ. ಈ ಬಗೆಗಿನ ಪ್ರಯತ್ನವಂತೂ ಖಂಡಿತಾ ಇದೆ. ಓದಿ ಇಷ್ಟವಾದರೆ ನಾಲ್ಕು ಮಾತು ಬರೆಯಿರಿ. ಹಿಡಿಸದಿದ್ದರೆ, ಸಂಭಾಷಣೆ ಜಾಳು ಜಾಳು ಎನಿಸಿದರೆ ಖಂಡಿತಾ ಎಚ್ಚರಿಸಿ ಬರೆಯಿರಿ..ನಿಮ್ಮವನು
ದಾರಿಹೋಕ
No comments:
Post a Comment